ವಾಹನದ ಮೇಲೆ ಆಸಿಡ್ ಸುರಿದ ಆರೋಪ: ಮಹಿಳೆ ವಿರುದ್ಧದ ಕೇಸ್ ಕ್ಲೋಸ್..!
ಬೆಂಗಳೂರು, ಜೂ.25. ವಸತಿ ಸಮುಚ್ಛಯದ ತಳಮಹಡಿಯಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ಆಸಿಡ್ ಸುರಿದು ಹಾನಿ ಉಂಟು ಮಾಡಿದ್ದಾರೆಂದು ನಗರದ ಮಹಿಳೆಯೊಬ್ಬರ ವಿರುದ್ಧದ ಕೇಸ್ ರದ್ದಾಗಿದೆ.
ಸಾಕ್ಷ್ಯಗಳ ಕೊರತೆ ಕಾರಣಕ್ಕೆ ನ್ಯಾಯಾಲಯ ಆ ಆರೋಪ ಹೊತ್ತ ಮಹಿಳೆಯ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದುಗೊಳಿಸಿ ಆಕೆಯನ್ನು 'ಆರೋಪಮುಕ್ತ'ಗೊಳಿಸಿದೆ.
ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯಪೀಠ, ಶಿವಾನಂದ ನಗರದ ಆದಿತ್ಯ ಸ್ವಾಯೆ ಅಪಾರ್ಟ್ಮೆಂಟ್ನ ರಿಚಾ ಸಿಂಗ್ ಚಿತ್ರಾಂಶಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದೆ.
ನೆಲಮಾಳಿಗೆಯಲ್ಲಿ ನಿಲ್ಲಿಸಲಾದ ವಾಹನದ ಮೇಲೆ ರಿಚಾ ಸಿಂಗ್ ಆ್ಯಸಿಡ್ ಎರಚಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ. ತನಿಖೆಯಲ್ಲಿ ದೂರನ್ನು ಪುಷ್ಟೀಕರಿಸುವ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಕೇವಲ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಮತ್ತು ದೂರುದಾರರ ಫಿರ್ಯಾದು ಅನುಸರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಮೆರಿಟ್ ಇಲ್ಲದ ಕಾರಣ ಮೆಯೊಹಾಲ್ನ 43ನೇ ಎಸಿಸಿಎಂ ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ಆದೇಶಿಸಿದೆ.
306ನೇ ಸಂಖ್ಯೆಯ ಫ್ಲ್ಯಾಟ್ನಲ್ಲಿ ವಾಸವಿದ್ದ ರಿಚಾ ಸಿಂಗ್ ಚಿತ್ರಾಂಶಿ ವಿರುದ್ಧ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಸಂತೋಷಿ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದರು. ಬೇಸ್ ಮೆಂಟ್ ನಲ್ಲಿ ನಿಲ್ಲಿಸಿದ್ದ ನನ್ನ ವಾಹನದ ಮೇಲೆ ಆ್ಯಸಿಡ್ ಎರಚಿ ಹಾನಿಗೊಳಿಸಿದ್ದಾರೆಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಾರತ್ಹಳ್ಳಿ ಉಪ ವಿಭಾಗದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ರಿಚಾ ಸಿಂಗ್ ಅವರಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಿಚಾ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅನಿವಾಸಿ ಭಾರತೀಯನ ವಿರುದ್ಧ ದೂರು ವಜಾ:
ವಿದೇಶಕ್ಕೆ ಸರಕನ್ನು ರಫ್ತು ಮಾಡುವ ಕಂಟೈನೇರ್ಗಳಿಗೆ ಅಳವಡಿಸುವ ಇ-ಸೀಲ್ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧ ಅನಿವಾಸಿ ಭಾರತೀಯರೊಬ್ಬರ ವಿರುದ್ಧ ಬೆಂಗಳೂರು ವಲಯದ ಕಂದಾಯ ವಿಚಕ್ಷಣಾ ವಿಭಾಗದ ಅಧಿಕಾರಿ ದಾಖಲಿಸಿದ್ದ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ.
ಡೇವಿಡ್ ಮಥಾಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯಪೀಠ ಪುರಸ್ಕರಿಸಿದೆ.
ಇಂದಿರಾನಗರದ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಬೆಂಗಳೂರು ವಲಯದ ಕಂದಾಯ ವಿಚಕ್ಷಣಾ ವಿಭಾಗದ ಅಧಿಕಾರಿ ದಾಖಲಿಸಿರುವ ದೂರನ್ನು ರದ್ದುಗೊಳಿಸಬೇಕು' ಎಂದು ಅರ್ಜಿದಾರರು ಕೋರಿದ್ದರು.
ಅರ್ಜಿದಾರರಾದ 66 ವರ್ಷದ ಡೇವಿಡ್ ಮಥಾಯ್ ಇ-ಸೀಲ್ ತಯಾರಿಸುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ಅವರ ವಿರುದ್ಧ ಆರೋಪ ಮಾಡಲಾಗಿದೆ. ಆದರೆ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಲ್ಲ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ. ಡೇವಿಡ್, ಈ ಹಿಂದೆ ಕಂಪನಿಯ ಸಲಹೆಗಾರರಾಗಿದ್ದರು ಎಂಬ ಏಕಮಾತ್ರ ಕಾರಣದಿಂದ ಪ್ರಕರಣವನ್ನು ತಪ್ಪಾಗಿ ದಾಖಲಿಸಲಾಗಿದೆ' ಎಂದು ನ್ಯಾಯಪೀಠ ದೂರನ್ನು ರದ್ದುಗೊಳಿಸಿದೆ.