ಕೆಪಿಟಿಸಿಎಲ್ ಎಇ ಬಡ್ತಿ ಆಯ್ಕೆ ಪಟ್ಟಿಗೆ ಹೈಕೋರ್ಟ್ ಬ್ರೇಕ್!
ಬೆಂಗಳೂರು ಮೇ 16. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯ ಅಂತಿಮ ಆಯ್ಕೆ ಪಟ್ಟಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ.
ತಾತ್ಕಾಲಿಕ ಪಟ್ಟಿ ಪ್ರಕಟಿಸುವುದಕ್ಕೆ ಸಲ್ಲಿಸಿದ್ದ ಆಕ್ಷೇಪಣೆ ಪರಿಗಣಿಸದೇ ಇರುವುದರಿಂದ ನ್ಯಾಯಾಲಯ ಸದ್ಯಕ್ಕೆ ಪಟ್ಟಿಯನ್ನು ಅಂತಿಮಗೊಳಿಸಲು ನಿಗಮಕ್ಕೆ ಮಧ್ಯಂತರ ನಿರ್ಬಂಧವನ್ನು ವಿಧಿಸಿದೆ.
ಅಲ್ಲದೆ, ಅರ್ಜಿದಾರರ ಆಕ್ಷೇಪಣೆಯನ್ನು ಪರಿಗಣಿಸುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ.
ಸಹಾಯಕ ಎಂಜಿನಿಯರ್ ಹುದ್ದೆಯ ಬಡ್ತಿಗೆ ಕೆಪಿಟಿಸಿಎಲ್ ಪ್ರಕಟಿಸಿದ್ದ ಸಂಭಾವ್ಯ ಹಿರಿಯರ ಪಟ್ಟಿಯನ್ನು ಪ್ರಶ್ನಿಸಿ ದಾವಣಗೆರೆ ಜೀನಹಳ್ಳಿಯ ಕೆಪಿಟಿಸಿಎಲ್ ಪ್ರಭಾರಿ ಸಹಾಯಕ ಎಂಜಿನಿಯರ್ ಬಿ.ಸುಮಾ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ರಜಾಕಾಲದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಕೋರ್ಟ್ ಆದೇಶವೇನು?
"ಸಂಭಾವ್ಯ ಆಯ್ಕೆ ಪಟ್ಟಿಗೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆ ಪರಿಗಣಿಸಬೇಕು. ನಂತರ ಅರ್ಜಿದಾರರು ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ಸಹಾಯಕ ಎಂಜಿನಿಯರ್ ಹುದ್ದೆ ಬಡ್ತಿ ಪಡೆಯಲು ಅರ್ಹರಾಗಿದ್ದಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಿ ನಾಲ್ಕು ವಾರಗಳಲ್ಲಿ ಸೂಕ್ತ ಅದೇಶ ಹೊರಡಿಸಬೇಕು. ಅಲ್ಲಿಯವರಿಗೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು'' ಎಂದು ಕೆಪಿಟಿಸಿಎಲ್ಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರು ಕೆಪಿಟಿಸಿಎಲ್ ಕಿರಿಯ ಎಂಜಿನಿಯರ್ ಹುದ್ದೆಗೆ ನೇಮಕಗೊಂಡಿದ್ದರು. ಸದ್ಯ ಪ್ರಭಾರಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವಾ ಹಿರಿತನದ ಮೇಲೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡುವ ಕಾರಣಕ್ಕಾಗಿ 2022ರ ಜ.10ರಂದು ಕೆಪಿಟಿಸಿಎಲ್ ಸಂಭಾವ್ಯ ಹಿರಿಯರ ಪಟ್ಟಿ ಪ್ರಕಟಿಸಿತ್ತು.
ಆ ಪಟ್ಟಿಗೆ ಜ.12 ಮತ್ತು ಮಾ.17ರಂದು ಆಕ್ಷೇಪಣೆ ಸಲ್ಲಿಸಿದ್ದ ಬಿ.ಸುಮಾ, ಸಹಾಯಕ ಎಂಜಿನಿಯರ್ ಹುದ್ದೆ ಬಡ್ತಿ ಪಡೆಯಲು ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ತಾವು ಅರ್ಹರಿದ್ದು, ತಮ್ಮನೂ ಪರಿಗಣಿಸಬೇಕು ಎಂದು ಕೋರಿದ್ದರು.
ಆದರೆ ನಿಗಮ ಅವರ ಆಕ್ಷೇಪಣೆ ಪರಿಗಣಿಸದೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ಅಂತಿಮ ಪಟ್ಟಿ ಪ್ರಕಟಿಸುವ ಪ್ರಕ್ರಿಯೆಯನ್ನು ಮುಂದುವರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಈ ಮಧ್ಯೆ ಹೈಕೋರ್ಟ್ಗೆ ಮೊರೆ ಹೋಗಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೆ ನಿರ್ಬಂಧ ವಿಧಿಸುವಂತೆ ಕೋರಿದ್ದರು.