ಒಂದು ಕಣ್ಣು ಹೋದರೂ ಶೇ.100ರಷ್ಟು ಆದಾಯ ನಷ್ಟ-ಹೈಕೋರ್ಟ್
ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. "ಉದ್ಯೋಗ ನಿರ್ವಹಣೆ ವೇಳೆ ಉಂಟಾದ ಅಪಘಾತದಿಂದ ಸಾವು-ನೋವು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರಮಾಣಕ್ಕಿಂತ ಕಡಿಮೆ ವೇತನವಿದೆ ಎಂದು ಸಂತ್ರಸ್ತರು ಒಪ್ಪಿಕೊಂಡರೂ ಕೋರ್ಟ್ ಮಾನವೀಯತೆಯ ದೃಷ್ಟಿಯಿಂದ ಕನಿಷ್ಠ ವೇತನ ಪ್ರಮಾಣ ಪರಿಗಣಿಸಿಯೇ ಸಾಧ್ಯವಾದರೆ ಅಧಿಕ ಪರಿಹಾರ ನಿಗದಿಪಡಿಸಬೇಕು'' ಎಂದು ಆದೇಶಿಸಿದೆ.
ಕೋರ್ಟ್ ಏನು ಹೇಳಿದೆ?: ನಾಗೇಂದ್ರ ಅಪಘಾತಕ್ಕೆ ಗುರಿಯಾಗಿ ಎಡಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇದರಿಂದ ಅವರು ಚಾಲನಾ ವೃತ್ತಿ ಮುಂದುವರಿಸಲು ಅಸಮರ್ಥರಾದರು ಹಾಗೂ ಉದ್ಯೋಗ ಸಹ ಕಳೆದುಕೊಂಡರು. ಹಾಗಾಗಿ, ಅವರು ಶೇ.100ರಷ್ಟು ಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಡಿದ್ದಾರೆ. ಅಪಘಾತ ಸಂಭವಿಸಿದಾಗ ಅವರಿಗೆ 25 ವರ್ಷ. ತಮ್ಮ ಮಾಸಿಕ ವೇತನ 6 ಸಾವಿರ ರು. ಎಂಬುದಾಗಿ ಸ್ವತಃ ನಾಗೇಂದ್ರ ತಿಳಿಸಿದ್ದಾರೆ. ಪರಿಹಾರ ಮೊತ್ತವನ್ನು 10,41,165 ರೂ..ಗೆ ಹೆಚ್ಚಿಸಿ ಆದೇಶಿಸಿತು.
''ಕಾನೂನಿನ ಲಾಭವು ಜನರಿಗೆ ಅದರಲ್ಲೂ ಉದ್ಯೋಗ ನಿರ್ವಹಣೆ ವೇಳೆ ಅಪಘಾತ ಉಂಟಾಗಿ ಸಾವು-ನೋವು ಸಂಭವಿಸಿದ ಪ್ರಕರಣಗಳ ಸಂತ್ರಸ್ತರಿಗೆ ದೊರೆಯಬೇಕು. ಹಾಗಾಗಿ, ಪರಿಹಾರ ಕ್ಲೇಮು ಮಾಡುವಾಗ ಅಪಘಾತ ಸಂಭವಿಸಿದ ವೇಳೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರಮಾಣಕ್ಕಿಂತ ಕಡಿಮೆ ವೇತನ ಇತ್ತೆಂದು ಸಂತ್ರಸ್ತರು ಹೇಳಿದರೂ ಸಹ ಪರಿಹಾರ ನಿಗದಿಗೆ ಕನಿಷ್ಠ ವೇತನ ಪ್ರಮಾಣ ಪರಿಗಣಿಸುವುದು ಕೋರ್ಟ್ ಕರ್ತವ್ಯ''ಎಂದು ಆದೇಶಿಸಿದೆ.
''ಕಾರ್ಮಿಕರ ಕನಿಷ್ಠ ವೇತನವನ್ನು ನಾಲ್ಕು ಸಾವಿರದಿಂದ ಎಂಟು ಸಾವಿರಕ್ಕೆ ರುಪಾಯಿಗೆ ಹೆಚ್ಚಿಸಿ 2010ರ ಮೇ 31ರಂದು ಕೇಂದ್ರ ಸರ್ಕಾರ ಆದೇಶಿಸಿದೆ. ಕಾಲದಿಂದ ಕಾಲಕ್ಕೆ ದಿನಬಳಕೆ ವಸ್ತುಗಳ ಬೆಲೆ ಹಾಗೂ ಜೀವನ ವೆಚ್ಚ ಏರಿಕೆ, ಜೀವನ ಗುಣಮಟ್ಟ ಮತ್ತು ಸಮಾಜದ ಪ್ರಗತಿ ವೃದ್ಧಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಹ ಕಾಲ ಕಾಲಕ್ಕೆ ಕಾನೂನಿಗೆ ಅಗತ್ಯ ತಿದ್ದುಪಡಿ ತಂದು ಕನಿಷ್ಠ ವೇತನ ಪ್ರಮಾಣ ಹೆಚ್ಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆ ಕಾನೂನು ಮತ್ತದರ ಜಾರಿಯ ಉದ್ದೇಶಕ್ಕೆ ಅನುಗುಣ ನ್ಯಾಯಾಲಯದ ಕರ್ತವ್ಯ'' ಎಂದು ಹೇಳಿದೆ.
ಏನಿದು ಪ್ರಕರಣ: ಎಚ್.ಡಿ. ಕೋಟೆಯ ನಾಗೇಂದ್ರ, ಎ.ಸಿ. ಮಹದೇವಪ್ಪ ಎಂಬುವರ ಬಳಿ ಜೀಪ್ ಚಾಲಕನಾಗಿ ಉದ್ಯೋಗ ಮಾಡುತ್ತಿದ್ದರು. 2011ರ ಮೇ 1ರಂದು ರಾತ್ರಿ ನಾಗೇಂದ್ರ ಚಲಾಯಿಸುತ್ತಿದ್ದ ಜೀಪ್ಗೆ ಮತ್ತೊಂದು ವಾಹನ ಢಿಕ್ಕಿ ಹೊಡೆದಿತ್ತು. ಘಟನೆಯಿಂದ ಅವರು ಎಡಗಣ್ಣಿನ ದೃಷ್ಟಿ ಸಂಪೂರ್ಣ ಕಳೆದುಕೊಂಡರು. ಅದಕ್ಕೆ ಉದ್ಯೋಗವನ್ನೂ ಕಳೆದುಕೊಂಡರು. ಪರಿಹಾರಕ್ಕಾಗಿ ಮೋಟಾರು ವಾಹನಗಳ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು.
ನಾಗೇಂದ್ರ ಶೇ.100ರಷ್ಟು ಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಂಡಿದ್ದಾರೆಂದು ತೀರ್ಮಾನಿಸಿದ ನ್ಯಾಯಾಧಿಕರಣ, ಆತನಿಗೆ ಒಟ್ಟು 7,44,462 ರೂ. ಪರಿಹಾರ ಘೋಷಿಸಿತ್ತು. ವಿಮೆ ಸೌಲಭ್ಯ ಕಲ್ಪಿಸಿದ್ದ ವಿಮಾ ಕಂಪನಿ ಮತ್ತು ಜೀಪ್ ಮಾಲೀಕ ಪರಿಹಾರ ನೀಡಬೇಕೆಂದು 2018ರ ಜು.13ರ ಆದೇಶಿಸಿತ್ತು. ಈ ಆದೇಶ ರದ್ದು ವಿಮಾ ಕಂಪನಿಗೆ ಮತ್ತು ಪರಿಹಾರ ಮೊತ್ತ ಹೆಚ್ಚಳಕ್ಕೆ ಕೋರಿ ನಾಗೇಂದ್ರ ಹೈಕೋರ್ಟ್ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.