ಬಿಜೆಪಿಯಲ್ಲೇ ಯಡಿಯೂರಪ್ಪ ಓಡಿಸುವ ಹುನ್ನಾರ!
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ಬಿಜೆಪಿ ' ಸಿದ್ದರಾಮಯ್ಯಗೆ ಕೋಗಿಲೆಯ ಬುದ್ಧಿ ಏಕೆ?' ಎಂದು ಪ್ರಶ್ನಿಸಿ ಟ್ವೀಟ್ ಮಾಡಿತ್ತು. ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ. ಎಚ್. ಸಿ. ಮಹದೇವಪ್ಪ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
"ಅಡ್ವಾಣಿ ಕಟ್ಟಲು ಪ್ರಯತ್ನಿಸಿದ್ದ ಬಿಜೆಪಿ ಪಕ್ಷದಲ್ಲಿ ಈಗ ಅಡ್ವಾಣಿ ಎಲ್ಲಿದ್ದಾರೆಂದು ಬೂತ ಕನ್ನಡಿ ಹಾಕಿ ಹುಡುಕಬೇಕಿದೆ" ಎಂದು ಎಚ್. ಸಿ. ಮಹದೇವಪ್ಪ ಬಿಜೆಪಿ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ: ಜಮೀರ್ ಬ್ಯಾಟಿಂಗ್
"ಇನ್ನು ಯಡಿಯೂರಪ್ಪ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದಿಂದ ಅವರನ್ನೇ ಓಡಿಸುವ ಹುನ್ನಾರ ಮಾಡಿ ಸೋತು ಸುಣ್ಣವಾಗಿ ನೀವಿಲ್ಲದೇ ನಮಗೆ ಬೇರೆ ಗತಿಯಿಲ್ಲ ಎಂದು ಮತ್ತೆ ಕರೆತಂದಿರಿ. ಹೀಗೆ ಕರೆತಂದ ಮೇಲೆಯೂ ಈಗಲೂ ಅದೇ ಕೆಲಸ ಮಾಡುತ್ತಿರುವುದು ಜನತೆಗೆ ತಿಳಿದಿದೆ" ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೋಗಿಲೆಯ ಬುದ್ಧಿ ಏಕೆ?
"ಇನ್ನು ಜೆಡಿಎಸ್ ವಿಷಯಕ್ಕೆ ಬಂದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗಾಗಿ ಸಿದ್ದರಾಮಯ್ಯನವರ ಆದಿಯಾಗಿ ಹಲವು ನಾಯಕರು ಏನು ಮಾಡಿದ್ದಾರೆ, ಅವರ ಶ್ರಮವೇನು ಎಂಬುದರ ಬಗ್ಗೆ ಮಾನ್ಯ ಗೌರವಾನ್ವಿತ ನಾಯಕರಾದ ದೇವೇಗೌಡರಿಗೇ ಎಲ್ಲರಿಗಿಂತಲೂ ಚೆನ್ನಾಗಿ ತಿಳಿದಿದೆ. ಹೀಗಾಗಿ ತಮಗೆ ಮಾಹಿತಿ ಕೊರತೆ ಇದ್ದರೆ ಅವರನ್ನೇ ಕೇಳಿ ತಿಳಿದುಕೊಳ್ಳುವುದು ಉತ್ತಮ" ಎಂದು ಹೇಳಿದ್ದಾರೆ.
ಲಸಿಕೆ ಉಚಿತವಾಗಿ ಕೊಡಿಸುವ 'ಧಮ್' ಇದೆಯೇ? ನಳಿನ್; ಸಿದ್ದರಾಮಯ್ಯ
"ಹಣಕಾಸು ನಿರ್ವಹಣೆಯಲ್ಲಿ ನಿಪುಣರಾಗಿರುವ ಸಿದ್ದರಾಮಯ್ಯನವರ ಸರ್ಕಾರ ನೀಡಿದ ಜನಪರ ಆಡಳಿತ ಹಾಗೂ ಮಾಡಿರುವ ಅಭಿವೃದ್ಧಿಯನ್ನು ಬಿಜೆಪಿಗರು ಮಾಡುವುದಿರಲಿ ಊಹಿಸಲೂ ಸಹ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ನಿಮಗಿರುವ ಈ ಅತ್ಯಾಶ್ಚರ್ಯಕರವಾದ ಮತ್ತು ನಿಗೂಢವಾದ ಪ್ರೇಮದ ಬಗ್ಗೆ ಒಂದು ಅನುಮಾನವಿಟ್ಟುಕೊಂಡು ನನ್ನ ಮಾತಿಗೆ ವಿರಾಮ ನೀಡುತ್ತೇನೆ" ಎಂದು ಮಹದೇವಪ್ಪ ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಚರ್ಚೆಗಳು ಜೋರಾಗಿವೆ. ಈ ಕುರಿತು ಟ್ವೀಟ್ ಮಾಡಿದ್ದ ಕರ್ನಾಟಕ ಬಿಜೆಪಿ "ದೇವೇಗೌಡರು ಬೆಳೆಸಿದ ಜೆಡಿಎಸ್ನಲ್ಲಿ ಸ್ಥಾನಮಾನ ಅನುಭವಿಸಿದಿರಿ, ಪರಮೇಶ್ವರ್ ಬೆಳೆಸಿದ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾದಿರಿ, ಡಿಕೆಶಿ ಕಟ್ಟುತ್ತಿರುವ ಪಕ್ಷದಲ್ಲಿ ಮತ್ತೆ ಸಿಎಂ ಕನಸು ಕಾಣುತ್ತಿದ್ದೀರಿ, ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ?" ಮಾನ್ಯ ಸಿದ್ದರಾಮಯ್ಯ ಅವರೇ ಎಂದು ಹೇಳಿತ್ತು.
Recommended Video
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ. ಎಚ್. ಸಿ. ಮಹದೇವಪ್ಪ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮಾಡಿದ್ದ ಟ್ವೀಟ್ಗೆ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇದೆ.