ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ತಲೆತಗ್ಗಿಸುವ ವಿಚಾರ
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿಯವರು ಕಳೆದ ಕೆಲವು ದಿನಗಳಿಂದ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು ತಾವು ಏಕೆ ಮಾತನಾಡುತ್ತಿದ್ದೇವೆ ಎಂಬುದರ ಸ್ಪಷ್ಟತೆ ಇಲ್ಲದವರಂತೆ ಮಾತನಾಡುತ್ತಿದ್ದಾರೆ.
Recommended Video
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮಂಡನೆಗೆ ಇವರು ಸದನದೊಳಗೆ ಬೆಂಬಲ ನೀಡಿ ಹೊರಗಡೆ ಬಂದು ಪ್ರತಿಭಟನೆ ಮಾಡುವ ನಾಟಕವಾಡಿದಾಗಲೇ, ಇವರ ಪಕ್ಷ ಸೈದ್ಧಾಂತಿಕವಾಗಿ ಸತ್ತುಹೋಗಿದೆ. ಇನ್ನು ತಾವು ರಾಜಕೀಯವಾಗಿ ಯಾವ ಪಕ್ಷದೊಂದಿಗೆ ಸಹಯೋಗ ಮಾಡಿಕೊಳ್ಳಬೇಕೆಂಬ ಸ್ಪಷ್ಟತೆಯನ್ನು ಇಲ್ಲಿಯವರೆಗೂ ಕಂಡುಕೊಳ್ಳದ ಕುಮಾರಸ್ವಾಮಿಯವರನ್ನು ರಾಜಕೀಯವಾಗಿ ಪ್ರಜ್ಞೆಯಿರುವ ಮತ್ತು ಸಹಜವಾಗಿ ಯೋಚಿಸುವ ಯಾರೂ ಕೂಡಾ ಸೀರಿಯಸ್ಸಾಗಿ ತೆಗೆದುಕೊಳ್ಳಲೇಬಾರದು.
ಯಡಿಯೂರಪ್ಪರನ್ನು ತಡರಾತ್ರಿ ಭೇಟಿ ಮಾಡಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ
ಆದರೂ, ಈತನ ಪ್ರಚಾರ ಮತ್ತು ಮತ ಕ್ರೋಢೀಕರಣದ ಪ್ರಯತ್ನದ ಭಾಗವಾಗಿ ಬರುತ್ತಿರುವ ಬಾಲಿಶತನದ ಹೇಳಿಕೆಗಳು ಪೂರ್ಣ ವಿವರ ತಿಳಿಯದ ಈಗಿನ ಪೀಳಿಗೆಗೆ ತಪ್ಪು ಸಂದೇಶವಾಗಿ ಹೋಗಬಾರದೆಂಬ ಕಾರಣಕ್ಕೆ ಪ್ರತಿಕ್ರಿಯೆ ನೀಡಬೇಕಾಗಿದೆ. ನನಗೆ ನೆನಪಿದ್ದಂತೆ ನಾವು ಈ ಹಿಂದೆ ಸೈದ್ಧಾಂತಿಕ ಹೋರಾಟಗಳ ವಿಷಯಗಳ ಚರ್ಚೆಯಲ್ಲಿ ಇವರ ಭಾಗವಹಿಸುವಿಕೆಯನ್ನು ಕಂಡಿಲ್ಲ. ಹೀಗಿರುವಾಗ ಈಗ ಇವರ ಸೈದ್ಧಾಂತಿಕ ಮಾತುಗಳು ನನ್ನಲ್ಲಿ ನಗು ತರಿಸುತ್ತವೆ.
ಇನ್ನು ಅಧಿಕಾರಕ್ಕಾಗಿ ನಾವೆಲ್ಲಾ ಪಕ್ಷ ತೊರೆದೆವು ಎಂದು ಸುಳ್ಳು ಹೇಳುವ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಆಸೆಗಾಗಿ ನಮ್ಮನ್ನು ಪಕ್ಷದಿಂದ ಉಚ್ಛಾಟಿಸಿದರು ಎಂಬ ಸಂಗತಿಯನ್ನು ಹೇಳುವುದಿಲ್ಲ. ಇದು ಅವರ ಸುಳ್ಳುಕೋರತನಕ್ಕೆ ಇರಬಹುದಾದ ಒಂದು ಸಾಕ್ಷಿ.
ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಯೊಬ್ಬರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಪ್ರಸ್ತಾಪ ಬಂದಾಗ ಮುಖ್ಯಮಂತ್ರಿ ಆಗಿದ್ದ ಇವರು ಆ ಸಾಹಿತಿ ಯಾರು? ಎಂಬ ಪ್ರಶ್ನೆಯನ್ನು ಕೇಳಿದ್ದರು. ಇನ್ನೊಂದು ಸಂದರ್ಭದಲ್ಲಿ ಜಾತ್ಯತೀತತೆ ಎಂದರೆ ಏನು? ಎಂದು ಕೇಳಿದ ಅವರ ಪ್ರಶ್ನೆಯೂ ಕೂಡಾ ನಮ್ಮಲ್ಲಿ ಗೊಂದಲ ಮೂಡಿಸಿತ್ತು. ಇದರ ಅರ್ಥ, ಕನ್ನಡ ನಾಡು, ನುಡಿ ಮತ್ತು ಜನ ಬದುಕಿನ ರಕ್ಷಣೆ ಹೊತ್ತ ಜನ ಪ್ರತಿನಿಧಿಗಳಿಗೆ ವಿಷಯ ಸ್ಪಷ್ಟತೆ ಇದ್ದರೆ ಆರೋಗ್ಯದಾಯಕ ಎಂಬುದೇ ಇಲ್ಲಿನ ಆಶಯವಾಗಿದೆ.
ಇನ್ನು ಸಂವಿಧಾನಬದ್ಧವಾಗಿರುವ ವಿರೋಧ ಪಕ್ಷದ ಸ್ಥಾನವನ್ನು ಪುಟಗೋಸಿಗೆ ಹೋಲಿಸಿ ಮಾತನಾಡಿರುವ ಕುಮಾರಸ್ವಾಮಿ ಅವರಿಗೆ ಸಂವಿಧಾನಾತ್ಮಕ ಹುದ್ದೆಗಳ ಮೇಲೆ ತಮಗೆ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಾಬಾ ಸಾಹೇಬರ ಪ್ರಕಾರ ಓರ್ವ ಮತಾಂಧ, ಜಾತಿವಾದಿ, ಅಜ್ಞಾನಿ ಮತ್ತು ಫ್ಯೂಡಲ್ ವ್ಯಕ್ತಿತ್ವದ ವ್ಯಕ್ತಿಗೆ ಸಂವಿಧಾನಾತ್ಮಕ ಆಶಯಗಳು ಮತ್ತು ಅದರ ವ್ಯವಸ್ಥೆಯ ಮೇಲೆ ಗೌರವ ಇರುವುದಿಲ್ಲ.
ಜಿಟಿಡಿಗೆ ಕುಮಾರಸ್ವಾಮಿ ಭರ್ಜರಿ ತಿರುಗೇಟು: ಚಾಮುಂಡೇಶ್ವರಿ ಜೆಡಿಎಸ್ ಅಭ್ಯರ್ಥಿ ಇವರೇ?
ಬಹುಶಃ ಸಂವಿಧಾನಾತ್ಮಕ ಹುದ್ದೆಯನ್ನು ಅವಮಾನಿಸಿದ ಕುಮಾರಸ್ವಾಮಿಯವರೂ ಕೂಡಾ ಬಾಬಾ ಸಾಹೇಬರು ಹೇಳಿದ ಮಾತನ್ನು ಸತ್ಯವಾಗಿಸುವ ವರ್ತನೆಯನ್ನು ತೋರಿರುವುದು ಅವರೊಬ್ಬ ಮಾಜಿ ಮುಖ್ಯಮಂತ್ರಿಯಾಗಿ ಸ್ವತಃ ಅವರೇ ತಲೆ ತಗ್ಗಿಸಬೇಕಾದ ಸಂಗತಿ.
ಕೊನೆಯದಾಗಿ, ಸಾರ್ವಜನಿಕ ಸೇವಾ ವಲಯದಲ್ಲಿರುವ ಯಾರೇ ಆದರೂ ಗುಣಾತ್ಮಕವಾಗಿ, ಸಂವಿಧಾನಾತ್ಮಕ ಆಶಯಗಳಿಗೆ ಅನುಗುಣವಾಗಿ, ಸಾಂಸ್ಕೃತಿಕ ಮೌಲ್ಯಗಳನ್ನು ರೂಢಿಸಿಕೊಂಡು ಬೆಳೆಯಬೇಕೆಂಬುದು ನನ್ನ ಆಶಯವಾಗಿದ್ದು ನನ್ನ ಈ ಆಶಯಕ್ಕೆ ಕುಮಾರಸ್ವಾಮಿ ಕೂಡಾ ಹೊರತಲ್ಲ ಎಂದು ಹೇಳುತ್ತಾ, ಇನ್ನು ಮುಂದಾದರೂ ಕುಮಾರಸ್ವಾಮಿಯವರು ತಮ್ಮ ಅಧ್ಯಯನ, ಹೋರಾಟ ಮತ್ತು ಸಂಘಟನೆಯ ಮೂಲಕ ಸೈದ್ಧಾಂತಿಕ ಗಟ್ಟಿತನವನ್ನು ರೂಢಿಸಿಕೊಂಡು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸಲಿ ಎಂದು ಆಶಿಸುತ್ತೇನೆ.