ಸಿದ್ದರಾಮಯ್ಯ ಆಪ್ತ ಎಚ್.ಸಿ.ಮಹದೇವಪ್ಪ ಬಿಜೆಪಿಗೆ?
Recommended Video
ಬೆಂಗಳೂರು, ಜುಲೈ 10 : ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಎಚ್.ಸಿ.ಮಹದೇವಪ್ಪ ಬಿಜೆಪಿ ಸೇರಲಿದ್ದಾರೆ?. ವಿ.ಶ್ರೀನಿವಾಸ ಪ್ರಸಾದ್ ಅವರ ಬಳಿಕ ಮತ್ತೊಬ್ಬ ಸಿದ್ದರಾಮಯ್ಯ ಆಪ್ತರು ಕಾಂಗ್ರೆಸ್ನಿಂದ ದೂರವಾಗುತ್ತಿದ್ದಾರೆ.
2018ರ ಚುನಾವಣೆಯಲ್ಲಿ ಜೆಡಿಎಸ್ನ ಎಂ.ಅಶ್ವಿನ್ ಕುಮಾರ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಎಚ್.ಸಿ.ಮಹದೇವಪ್ಪ ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೋತ ಅಭ್ಯರ್ಥಿಗಳ ಸಭೆ ಆಯೋಜಿಸಲಾಗಿತ್ತು. ಆದರೆ, ಮಹದೇವಪ್ಪ ಗೈರು ಹಾಜರಾಗಿದ್ದರು.
'ನನ್ನ ಸೋಲಿಗಿಂತ ಸಿದ್ದರಾಮಯ್ಯರ ಸೋಲು ನೋವುಂಟು ಮಾಡಿದೆ'
1985ರಿಂದ ಎಚ್.ಸಿ.ಮಹದೇವಪ್ಪ ಅವರು ರಾಜಕೀಯದಲ್ಲಿದ್ದಾರೆ. 8 ವಿಧಾನಸಭೆ ಚುನಾವಣೆಗಳ ಪೈಕಿ ಬೇರೆ-ಬೇರೆ ಪಕ್ಷದ ಟಿಕೆಟ್ನಿಂದ 5 ಬಾರಿ ಗೆದಿದ್ದಾರೆ. 2018ರ ಚುನಾವಣೆಯಲ್ಲಿ ಪುತ್ರ ಸುನೀಲ್ ಬೋಸ್ ಅವರಿಗೆ ಟಕೆಟ್ ಕೊಡಿಸುವ ಅವರ ಪ್ರಯತ್ನ ವಿಫಲವಾಗಿತ್ತು. ಚುನಾವಣೆಯಲ್ಲಿ ಅವರು ಸಹ ಸೋಲು ಕಂಡಿದ್ದರು.
ಟಿ. ನರಸೀಪುರದಲ್ಲಿ ಮಹದೇವಪ್ಪಗೆ ಮುಖಭಂಗ
ಬೆಂಗಳೂರಿನಲ್ಲಿ ಎಚ್.ಸಿ.ಮಹದೇವಪ್ಪ ಮತ್ತು ಬಿಜೆಪಿ ನಾಯಕರ ನಡುವೆ ಮಾತುಕತೆ ನಡೆಸಿದೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಅವರು ಬಿಜೆಪಿ ಸೇರಲಿದ್ದಾರೆ? ಎಂಬುದು ಸದ್ಯದ ಸುದ್ದಿ. ಆದರೆ, ಮಹದೇವಪ್ಪ ಅವರು ಈ ಕುರಿತು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
2018ರ ಚುನಾವಣೆಯಲ್ಲಿ ಸೋಲು
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಸಿದ್ದರಾಮಯ್ಯ ಅವರು ಎಚ್.ಸಿ.ಮಹದೇವಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಪ್ರಬಲವಾದ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ನೀಡಿದರು.
2018ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಎಚ್.ಸಿ.ಮಹದೇವಪ್ಪ ಸೋಲು ಕಂಡರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಎಂ.ಅಶ್ವಿನ್ ಕುಮಾರ್ ಅವರು ಗೆಲುವು ಸಾಧಿಸಿದರು. ಚುನಾವಣೆಯಲ್ಲಿ ಎಚ್.ಸಿ.ಮಹದೇವಪ್ಪ ಅವರು ಪುತ್ರ ಸುನೀಲ್ ಬೋಸ್ಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು.
ಸಿದ್ದರಾಮಯ್ಯ ಅವರ ಆಪ್ತರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಮತ್ತು ಎಚ್.ಸಿ.ಮಹದೇವಪ್ಪ ಅವರು ಆಪ್ತರಾಗಿದ್ದರು. ಸಿದ್ದರಾಮಯ್ಯ ಅವರು ನಡೆಸುವ ರಹಸ್ಯ ಸಭೆಗಳಲ್ಲಿ ಅವರು ಪಾಲ್ಗೊಳುತ್ತಿದ್ದರು. ಸಿದ್ದರಾಮಯ್ಯ ಅವರ ಸೂಚನೆಯಂತೆ ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದಿಂದ 2018ರ ಚುನಾವಣೆಗೆ ಸ್ಪರ್ಧಿಸಲು ಮಹದೇವಪ್ಪ ತಯಾರಿ ನಡೆಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ.
ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಎಚ್.ಸಿ.ಮಹದೇವಪ್ಪ ಸಿದ್ದರಾಮಯ್ಯ ಅವರಿಂದ ದೂರವಾಗಿದ್ದಾರೆ. ಸಿದ್ದರಾಮಯ್ಯ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುವಾಗಲೂ ಎಚ್.ಸಿ.ಮಹದೇವಪ್ಪ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಸೋಮವಾರ ನಡೆದ ಕಾಂಗ್ರೆಸ್ ಸೋತ ಅಭ್ಯರ್ಥಿಗಳ ಸಭೆಗೂ ಅವರು ಗೈರಾಗಿದ್ದರು.
ಬಿಜೆಪಿ ಸೇರುವ ಸುದ್ದಿ ಹಬ್ಬಿದೆ
ಎಚ್.ಸಿ.ಮಹದೇವಪ್ಪ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಜೊತೆ ಅವರು ಈ ಕುರಿತು ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲಿಯೇ ಅವರು ಈ ಕುರಿತು ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಎಚ್.ಸಿ.ಮಹದೇವಪ್ಪ ಅವರು ಜನತಾ ಪಾರ್ಟಿ ಮೂಲಕ ರಾಜಕೀಯ ಜೀವನವನ್ನು ಆರಂಭಿಸಿದರು. ನಂತರ ಜನತಾ ಪರಿವಾರದ ಜೊತೆಗಿದ್ದರು. ನಂತರ ಜೆಡಿಎಸ್ ಜೊತೆಗೂ ಗುರುತಿಸಿಕೊಂಡಿದ್ದರು. 2008ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರಿದರು. ಈಗ ಅವರು ಬಿಜೆಪಿಗೆ ಸೇರಿದರೆ ಎಲ್ಲಾ ಪ್ರಮುಖ ಪಕ್ಷಗಳಲ್ಲೂ ಇದ್ದಂತೆ ಆಗುತ್ತದೆ.
ಪುತ್ರನಿಗಾಗಿ ಪಕ್ಷ ಬದಲು?
ಪುತ್ರ ಸುನೀಲ್ ಬೋಸ್ ಅವರಿಗೆ ತಿ.ನರಸೀಪುರ ಅಥವ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡಿಸಲು ಮಹದೇವಪ್ಪ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಬಳಿಕ ಸಿದ್ದರಾಮಯ್ಯರಿಂದ ದೂರವಾಗಿದ್ದರು.
ಚುನಾವಣೆಯಲ್ಲಿ ಸೋತ ಬಳಿಕ ಅವರು ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಮಗನ ರಾಜಕೀಯ ಭವಿಷ್ಯಕ್ಕಾಗಿಯೇ ಎಚ್.ಸಿ.ಮಹದೇವಪ್ಪ ಅವರು ಈಗ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಹದೇವಪ್ಪ ರಾಜಕೀಯ ಜೀವನ
1985ರಿಂದ ಎಚ್.ಸಿ.ಮಹದೇವಪ್ಪ ಅವರು ರಾಜಕೀಯದಲ್ಲಿದ್ದಾರೆ. ಒಟ್ಟು 8 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು 5 ಬಾರಿ ಬೇರೆ-ಬೇರೆ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. 1989ರಲ್ಲಿ ಕಾಂಗ್ರೆಸ್ನ ಎಂ.ಸೀತಾರಾಮಯ್ಯ, 1999ರಲ್ಲಿ ಬಿಜೆಪಿಯ ಡಾ.ಭಾರತಿ ಶಂಕರ್, 2018ರ ಚುನಾವಣೆಯಲ್ಲಿ ಜೆಡಿಎಸ್ನ ಅಶ್ವಿನ್ ಕುಮಾರ್ ವಿರುದ್ಧ ಸೋತಿದ್ದಾರೆ.
1985ರಲ್ಲಿ ಎಚ್.ಸಿ.ಮಹದೇವಪ್ಪ ಜನತಾ ಪಾರ್ಟಿಯಿಂದ, 1994ರಲ್ಲಿ ಜನತಾದಳದಿಂದ, 2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.