ಸಿ.ವಿ.ರಾಮನ್ ನಗರದಿಂದ ಸ್ಪರ್ಧೆ, ಮಹದೇವಪ್ಪ ಹೇಳಿದ್ದೇನು?
ಬೆಂಗಳೂರು, ಜನವರಿ 05 : 'ಸಿ.ವಿ.ರಾಮನ್ ನಗರ ಕ್ಷೇತ್ರವನ್ನು ನಾನು ಆಯ್ಕೆ ಮಾಡಿಕೊಂಡಿಲ್ಲ. ಪಕ್ಷದ ನಾಯಕರು ಸ್ಪರ್ಧೆಗೆ ಆಹ್ವಾನಿಸುತ್ತಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ' ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು, 'ನಾನು ಸದ್ಯ ತಿ.ನರಸೀಪುರ ಕ್ಷೇತ್ರದ ಶಾಸಕ. ನನ್ನ ಅವಧಿ ಮೇ ತಿಂಗಳಿನ ತನಕ ಇದೆ. ಆ ಮೇಲೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ' ಎಂದರು.
'ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಸ್ಪರ್ಧಿಸುವುದು ನನ್ನ ಇಚ್ಛೆಯಲ್ಲ. ನಂಜನಗೂಡಿನಿಂದ ಸ್ಪರ್ಧಿಸುವಂತೆಯೂ ಒತ್ತಾಯವಿದೆ. ಪಕ್ಷದ ನಾಯಕರು ನನಗೆ ಸಿ.ವಿ.ರಾಮನ್ ನಗರಕ್ಕೆ ಆಹ್ವಾನಿಸಿದ್ದಾರೆ' ಎಂದು ಹೇಳಿದರು.
ಬೆಂಗಳೂರು ರಾಜಕೀಯ : ಮಹದೇವಪ್ಪ ಚಿತ್ತ ರಾಮನ್ ನಗರದತ್ತ!
ಸುನೀಲ್ ಬೋಸ್ ತಿ.ನರಸೀಪುರದಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಸಚಿವರು, 'ನನ್ನ ಮಗ ಪಕ್ಷದ ಕಾರ್ಯಕರ್ತ'ಎಂದು ಹೇಳಿದರು. ಮಹದೇವಪ್ಪ ಅವರು ಸಿ.ವಿ.ರಾಮನ್ ನಗರದಿಂದ ಸ್ಪರ್ಧಿಸಿದರೆ ಅವರ ಪುತ್ರ ಸುನೀಲ್ ಬೋಸ್ ತಿ.ನರಸೀಪುರದಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದೆ.
ಸಿ.ವಿ.ರಾಮನ್ ನಗರಕ್ಕೆ ಎಚ್.ಸಿ.ಮಹದೇವಪ್ಪ ಅಭ್ಯರ್ಥಿ?
ಈ ಬಾರಿಯ ಚುನಾವಣೆಯಲ್ಲಿ ಸಚಿವ ಮಹದೇವಪ್ಪ ಅವರು ಕ್ಷೇತ್ರ ಬದಲಾವಣೆ ಮಾಡಿ ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕ್ಷೇತ್ರದಲ್ಲಿ ಕ್ರಿಸ್ ಮಸ್, ಹೊಸ ವರ್ಷದ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್ನಲ್ಲಿ ಮಹದೇವಪ್ಪ ಅಭ್ಯರ್ಥಿ ಎಂದು ಹಾಕಲಾಗಿತ್ತು.
ಕಳೆದ ಚುನಾವಣೆಯಲ್ಲಿ ಕ್ಷೇತ್ರದಿಂದ ಪಿ.ರಮೇಶ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ. ಆದರೆ, ಮಹದೇವಪ್ಪ ಸ್ಪರ್ಧಿಸುವುದಾದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದ್ದಾರೆ.