ಅಪರಾಧ ಪ್ರಕರಣ ತನಿಖೆ ಪೂರ್ಣಗೊಳಿಸಲು ಹೈಕೋರ್ಟ್ ಡೆಡ್ ಲೈನ್!
ಬೆಂಗಳೂರು, ಮೇ 30: ರಾಜ್ಯದ ಪೊಲೀಸ್ ಮತ್ತು ಇತರ ತನಿಖಾ ಸಂಸ್ಥೆಗಳಿಂದ ಕ್ಷುಲ್ಲಕ ಅಪರಾಧಗಳು ಮತ್ತು ಗಂಭೀರ/ಘೋರ ಅಪರಾಧಗಳ ತನಿಖೆಯನ್ನು ಪೂರ್ಣಗೊಳಿಸಲು ಹೈಕೋರ್ಟ್ ಕ್ರಮವಾಗಿ 60 ದಿನ ಮತ್ತು 90 ದಿನಗಳ ಕಾಲಾವಧಿಯನ್ನು ನಿಗದಿಪಡಿಸಿ ಮಹತ್ವದ ಆದೇಶ ಹೊರಡಿಸಿದೆ.
ಆದರೂ ವಿಚಾರಣೆಯನ್ನು ಪೂರ್ಣಗೊಳಿಸಲು ಸಮಯ ವಿಸ್ತರಣೆಗೆ ಸೂಕ್ತ ಕಾರಣ ಪಡೆದು ವಿಚಾರಣಾ ನ್ಯಾಯಾಲಯಗಳು ಪೊಲೀಸರ ಕೋರಿಕೆಯ ಮೇರೆಗೆ ತನಿಖೆಯ ಅವಧಿಯನ್ನು ವಿಸ್ತರಣೆ ಮಾಡಬಹುದೆಂದು ಹೈಕೋರ್ಟ್ ಆದೇಶಿಸಿದೆ.
ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯಕುಮಾರ್ ಪಾಟೀಲ್ ವಿರುದ್ಧ 2012ರಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಪೂರ್ಣಗೊಳಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್, ತ್ವರಿತ ತನಿಖೆಗೆ ವಿಸ್ತೃತ ಮಾರ್ಗಸೂಚಿಗಳನ್ನು ರೂಪಿಸಿ ಪೊಲೀಸರಿಗೆ ನಿರ್ದೇಶನಗಳನ್ನು ನೀಡಿದೆ.
ಅಲ್ಲದೆ, ದೂರುದಾರ ಸುಜಿತ್ ಅವರು 2019 ರಲ್ಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ದೂರು ಹಿಂಪಡೆಯುವಂತೆ ಶಾಸಕರ ಹಿಂಬಾಲಕರಿಂದ ಬೆದರಿಕೆ ಮತ್ತು ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದರಿಂದ ಸುಪ್ರೀಂಕೋರ್ಟ್ ವಿಧಿಸಿರುವ ಸಾಕ್ಷಿ ರಕ್ಷಣೆ ಯೋಜನೆಯ ಆದೇಶವನ್ನು ಪಾಲಿಸುವಂತೆ ವಿಶೇಷ ನ್ಯಾಯಾಲಯ ಮತ್ತು ತನಿಖಾ ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ನೀಡಿದ ಮಧ್ಯಂತರ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಎಫ್ಐಆರ್ ದಾಖಲಿಸಲು ಮತ್ತು ತಮ್ಮ ವಿರುದ್ಧ ತನಿಖೆ ನಡೆಸಲು ವಿಶೇಷ ನ್ಯಾಯಾಲಯವು 2017ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅಭಯ್ ಪಾಟೀಲ್ ಮತ್ತು ತನಿಖೆಯನ್ನು ಪೂರ್ಣಗೊಳಿಸಲು ಮತ್ತು ಅಂತಿಮ ವರದಿಯನ್ನು ಸಲ್ಲಿಸಲು ಎಸಿಬಿಗೆ ನಿರ್ದೇಶನ ನೀಡುವಂತೆ ಕೋರಿ ದೂರುದಾರ ಸುಜಿತ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶವನ್ನು ನೀಡಿದೆ.
ಅಮಿಕಸ್ ಕ್ಯೂರಿ ಸಲಹೆ ಪರಿಗಣನೆ: ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ನ್ಯಾಯವಾದಿ ಸಂದೇಶ್ ಚೌಟಾ ಅವರು ಸರ್ಕಾರ, ನ್ಯಾಯಾಲಯಗಳು ಮತ್ತು ಪೊಲೀಸರು ತೆಗೆದುಕೊಳ್ಳಬೇಕಾದ ತ್ವರಿತ ತನಿಖೆ ಮತ್ತು ಪರಿಹಾರ ಕ್ರಮಗಳಿಗೆ ಅಡ್ಡಿಯಾಗುತ್ತಿರುವ ವಿಷಯಗಳ ಕುರಿತು ಆಲಿಸಿದ ನಂತರ ಹೈಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ.
ತ್ವರಿತಗತಿಯಲ್ಲಿ ತನಿಖೆ ಪೂರ್ಣಗೊಳಿಸಲು ವಿಫಲವಾದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಉಪಬಂಧಗಳನ್ನು ಅನ್ವಯಿಸಬಹುದು ಮತ್ತು ರಾಜ್ಯ ಮತ್ತು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ವಾಸ್ತವವಾಗಿ, ತನಿಖೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವನ್ನು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 20 (ಸಿ) (7) ರ ಪ್ರಕಾರ ಪ್ರಾಧಿಕಾರವು 'ಗಂಭೀರ ದುರ್ನಡನೆ' ಎಂದು ಪರಿಗಣಿಸಬಹುದು. ಈ ಕ್ರಮವು ತನಿಖಾ ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಪೊಲೀಸ್ ವಿಭಜನೆ: ಕಾನೂನು ಮತ್ತು ಸುವ್ಯವಸ್ಥೆ ವಿಭಜನೆಗೆ ಅಗತ್ಯ ಪ್ರಯತ್ನಗಳು ಮತ್ತು ಅಪರಾಧ ತನಿಖೆಗೆ ಸಂಬಂಧ ತನಿಖೆಯಲ್ಲಿ ವೃತ್ತಿಪರತೆಯನ್ನು ತರಲು ಸಿಬ್ಬಂದಿಯನ್ನು ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ ಮತ್ತು ಪೊಲೀಸ್ ಠಾಣೆಗಳಲ್ಲಿ ಬದ್ಧತೆಯ ಸಿಬ್ಬಂದಿಯನ್ನು ಹೊಂದಿರುವ ಪ್ರತ್ಯೇಕ ತನಿಖಾ ವಿಭಾಗಕ್ಕೆ ಸೈಬರ್ ಅಪರಾಧ, ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರ ಅಪರಾಧಗಳ ಸಂಬಂಧ ಅಗತ್ಯ ಜ್ಞಾನ ಮತ್ತು ತರಬೇತಿಯನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.
Recommended Video
1943ರ ಪೊಲೀಸ್ ನಿಯಮಾವಳಿಗಳಿಗೆ ಅನುಗುಣವಾಗಿ ನಿಯಮಾವಳಿಗಳನ್ನು ರೂಪಿಸುವ ಮೂಲಕ ತ್ವರಿತ ಮತ್ತು ಪರಿಣಾಮಕಾರಿ ತನಿಖೆಗೆ ನಿಯಮಗಳನ್ನು ರೂಪಿಸುವುದನ್ನು ರಾಜ್ಯ ಸರ್ಕಾರ ಅಥವಾ ಪ್ರಾಧಿಕಾರಿಗಳು ಪರಿಗಣಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.