ಡಿ.ಕೆ.ಶಿವಕುಮಾರ್ ತಾಯಿಗೆ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು, ಜೂನ್ 20 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಐಟಿ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಗೌರಮ್ಮ ಅವರಿಗೆ ಸಂಬಂಧಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದಾಯ ತೆರಿಗೆ ಇಲಾಖೆಯ ಬೇನಾಮಿ ಆಸ್ತಿ ವಿಭಾಗ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. 90 ದಿನಗಳಲ್ಲಿ ವಿವರಣೆ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿತ್ತು.
ಐಟಿ ದಾಳಿ ವಿಚಾರ : ಡಿ.ಕೆ.ಶಿವಕುಮಾರ್ ಅರ್ಜಿಯ ತೀರ್ಪು ಜೂ.25ಕ್ಕೆ
ಈ ಶೋಕಾಸ್ ನೋಟಿಸ್ ರದ್ದು ಮಾಡುವಂತೆ ಗೌರಮ್ಮ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಐಟಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ದೆಹಲಿಯಲ್ಲಿ ಸಿಕ್ಕ ಹಣ ಡಿಕೆಶಿಗೆ ಸೇರಿದ್ದು
'ಗೌರಮ್ಮ ಹಾಗೂ ಅವರ ಕುಟುಂಬದವರು ಸಾಕಷ್ಟು ಜಮೀನು ಹೊಂದಿದ್ದಾರೆ. ಕೃಷಿಯಿಂದ ಹಣವನ್ನು ಸಂಪಾದನೆ ಮಾಡಿದ್ದಾರೆ' ಎಂದು ಗೌರಮ್ಮ ಪರ ವಕೀಲರು ವಾದ ಮಂಡನೆ ಮಾಡಿದರು.
ಆದಾಯ ತೆರಿಗೆ ಇಲಾಖೆ ದಾಳಿ : ಡಿಕೆಶಿಯಿಂದ ಸಾಕ್ಷಿ ನಾಶಕ್ಕೆ ಪ್ರಯತ್ನ
'2016ರಲ್ಲಿ ಬೇನಾಮಿ ಆಸ್ತಿ ಕಾಯ್ದೆ ಜಾರಿಗೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಗೌರಮ್ಮ ವಿರುದ್ಧ ಕಾಯ್ದೆ ಅನ್ವಯವಾಗುವುದಿಲ್ಲ' ಎಂದು ವಾದ ಮಂಡಿಸಿದರು. ವಾದ ಆಲಿಸಿದ ಕೋರ್ಟ್ ಐಟಿ ಇಲಾಖೆಗೆ ನೋಟಿಸ್ ನೀಡಿ, ವಿಚಾರಣೆಯನ್ನು ಮುಂದೂಡಿತು.
2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರು, ಕನಕಪುರ, ದೆಹಲಿಯ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ಐಟಿ ಇಲಾಖೆ ವಶಕ್ಕೆ ಪಡೆದಿತ್ತು.
ಡಿ.ಕೆ.ಶಿವಕುಮಾರ್ ಅವರ ತಾಯಿಯ ಹೆಸರಿನಲ್ಲಿ ಕೃಷಿ ಭೂಮಿ ಇರುವ ವಿಚಾರ ದಾಖಲೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಈ ಜಮೀನುಗಳನ್ನು ಬೇನಾಮಿ ಆಸ್ತಿ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲು ಇಲಾಖೆ ನೋಟಿಸ್ ಜಾರಿಗೊಳಿಸಿತ್ತು.