ನಟ ರಜನೀಕಾಂತ್ ಪತ್ನಿ ಲತಾ ವಿರುದ್ಧ ಫೋರ್ಜರಿ ಪ್ರಕರಣ ಮುಂದುವರಿಕೆ
ಬೆಂಗಳೂರು,ಆ.10. ಖ್ಯಾತ ನಟ ರಜನೀಕಾಂತ್ ಅವರ ಪತ್ನಿ ಲತಾ ವಿರುದ್ಧದ ಫೋರ್ಜರಿ ಪ್ರಕರಣವನ್ನು ಮುಂದುವರಿಯಲಿದೆ. ಆದರೆ ಅರ್ಜಿದಾರರ ವಿರುದ್ಧ ವಂಚನೆ ಹಾಗೂ ಸುಳ್ಳು ಪ್ರಕರಣವನ್ನು ಮಾತ್ರ ರದ್ದುಪಡಿಸಿದೆ. ಹಾಗಾಗಿ ಲತಾ ಅವರು ಇದೀಗ ಅಧೀನ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ.
ಹೈಕೋರ್ಟ್, ಅರ್ಜಿದಾರರ ವಿರುದ್ಧ ಪೋರ್ಜರಿ ಆರೋಪಕ್ಕೆ ಸಂಬಂಧ ಆರೋಪ ಪಟ್ಟಿಯಲ್ಲಿ ಸಾಕ್ಷ್ಯಧಾರಗಳು ಲಭ್ಯವಿದೆ. ಆ ಪ್ರಕರಣದ ಕುರಿತ ವಿಚಾರಣೆಯನ್ನು ಅಧೀನ ನ್ಯಾಯಾಲಯ ಮುಂದುವರಿಸಬಹುದು ಎಂದು ಆದೇಶಿಸಿದೆ.
ಜತೆಗೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ವಂಚನೆ, ಸುಳ್ಳು ಹೇಳಿಕೆ ಮತ್ತು ನಕಲಿ ಸಾಕ್ಷ್ಯ ಬಳಕೆ ಆರೋಪಗಳನ್ನು ರದ್ದುಪಡಿಸಿದೆ. ಕೊಚ್ಚಾಡಿಯನ್ ಸಿನಿಮಾ ನಷ್ಟಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣ ರದ್ದು ಕೋರಿ ಲತಾ ಅರ್ಜಿ ಸಲ್ಲಿಸಿದ್ದರು.
ಆ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಅರ್ಜಿದಾರರ ವಿರುದ್ಧ ವಂಚನೆ ಹಾಗೂ ಸುಳ್ಳು ಪ್ರಕರಣವನ್ನು ಮಾತ್ರ ರದ್ದುಪಡಿಸಿದೆ. ಆದರೆ, ಫೋರ್ಜರಿ ಪ್ರಕರಣದ ವಿಚಾರಣೆ ಮುಂದುವರಿಸಿ ಕಾನೂನು ಪ್ರಕಾರ ಇತ್ಯರ್ಥಪಡಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ:
ರಜನಿಕಾಂತ್ ಪುತ್ರಿ ತಮಿಳು ಚಿತ್ರ ಕೊಚ್ಚಾಡಿಯನ್ ಸಿನಿಮಾ ನಿರ್ದೇಶಿಸಿದ್ದರು. ಆ ಸಂಬಂಧ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು.
ಮೀಡಿಯಾ ಒನ್ ಕಂಪನಿ ಪರ ಲತಾ ಭದ್ರತಾ ಖಾತರಿ ಒದಗಿಸಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದರೂ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ.
ಈ ವಿವಾದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಸಾಕಷ್ಟು ಪ್ರಸಾರವಾಗಿತ್ತು. ಈ ಕುರಿತ ಸುದ್ದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ, ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು 2014ರ ಡಿ.3ರಂದು ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ನೀಡಿತ್ತು. ಆದರೆ, 2015ರಲ್ಲಿ ಫೆ.13ರಂದು ವಿಚಾರಣೆಯನ್ನು ವಿಚಾರಣಾ ವ್ಯಾಪ್ತಿಗೆ ಕೋರ್ಟ್ಗೆ ವರ್ಗಾಯಿಸಿತ್ತು. ಈ ವೇಳೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಲತಾ ಅವರ ಅರ್ಜಿಯನ್ನು ಹೈಕೋರ್ಟ್ 2016ರಲ್ಲಿ ವಜಾಗೊಳಿಸಿತ್ತು.
ಈ ಮಧ್ಯೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಆದೇಶ ಪಡೆಯಲು ಬೆಂಗಳೂರು ಪ್ರೆಸ್ಕ್ಲಬ್ ಅಧೀನದಲ್ಲಿ ಇರದ ಸಂಸ್ಥೆಯೊಂದರ ನಕಲಿ ದಾಖಲೆಯನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಖಾಸಗಿ ದೂರು ದಾಖಲಿಸಿದ್ದರು. ಜೂ.9ರಂದು ಲತಾ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು 1ನೇ ಎಸಿಎಂಎಂ ನ್ಯಾಯಾಲಯವು ಸುಳ್ಳು ಹಾಗೂ ನಕಲಿ ಸಾಕ್ಷ್ಯ ಬಳಕೆ, ಸುಳ್ಳು ಹೇಳಿಕೆ ನೀಡಿದ, ವಂಚನೆ, ಪೋರ್ಜರಿ ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡು ಲತಾ ಅವರಿಗೆ ಸಮನ್ಸ್ ಜಾರಿ ಮಾಡಿ 2021ರ ಮಾ.27ರಂದು ಆದೇಶಿಸಿತ್ತು. ಹಾಗಾಗಿ, ಪ್ರಕರಣಕ್ಕೆ ವಿಚಾರಣೆ ರದ್ದು ಕೋರಿ ಲತಾ ಹೈಕೋರ್ಟ್ ಮೊರೆ ಹೋಗಿದ್ದರು.
Recommended Video