ತಕರಾರು ಅರ್ಜಿ: ಸಂಸದ ಪ್ರಜ್ವಲ್ ರೇವಣ್ಣಗೆ ಖುದ್ದು ಹಾಜರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜೂ.18: ಚುನಾವಣಾ ತಕರಾರು ಅರ್ಜಿ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೂ.24ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಜ್ವಲ್ ರೇವಣ್ಣ ಅವರ ಆಯ್ಕೆ ಅಸಿಂಧುಗೊಳಿಸಬೇಕೆಂದು ಕೋರಿ ಪರಾಜಿತ ಅಭ್ಯರ್ಥಿಗಳಾದ ಎ.ಮಂಜು ಮತ್ತು ಜಿ.ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಬಳಿಕ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿ, ಅದು ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲೇಬೇಕು, ಹಣ ಇದೆ ಎಂದು ವಕೀಲರನ್ನು ನೇಮಿಸಿಕೊಂಡು ಕೋರ್ಟ್ಗೆ ಹಾಜರಾಗುವುದನ್ನು ತಪ್ಪಿಸಿಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ವಾರ್ನ್ ಮಾಡಿತು.
ಅಲ್ಲದೆ, ಮುಂದಿನ ವಿಚಾರಣೆಗೆ ಅವರನ್ನು ಕೋರ್ಟ್ನಲ್ಲಿ ಹಾಜರಿರಲು ಹೇಳಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿತು.
ಅರ್ಜಿದಾರ ಜಿ.ದೇವರಾಜೇಗೌಡ ಪರ ವಕೀಲರು, ಪ್ರತಿವಾದಿ ಪ್ರಜ್ವಲ್ ರೇವಣ್ಣ ಹೇಗೆ ಅಕ್ರಮ ಎಸಗಿದ್ದಾರೆ, ಅಕ್ರಮವಾಗಿ ಹೇಗೆ ಆಸ್ತಿ ಸಂಪಾದಿಸಿದ್ದಾರೆ, ಸರ್ಕಾರಿ ಜಮೀನು ಖರೀದಿಸಿದ್ದಾರೆ, ಆದಾಯ ತೆರಿಗೆ ವಂಚಿಸಿದ್ದಾರೆ, ಬೇನಾಮಿ ಆಸ್ತಿ ಗಳಿಸಿದ್ದಾರೆ ಎಂಬ ಬಗ್ಗೆ ಎಂಬ ಅಂಶಗಳ ಕುರಿತು ಪ್ರಶ್ನೆಗಳ ಮೂಲಕ ನ್ಯಾಯಪೀಠ ಹೇಳಿಕೆ ದಾಖಲು ಮಾಡಿಸಿದರು.
ಅರ್ಜಿದಾರರು, 'ಪ್ರಜ್ವಲ್ ರೇವಣ್ಣ ತಮ್ಮ ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ದಾಖಲೆ ಸುಳ್ಳು ಅಂಕಿ ಅಂಶಗಳಿಂದ ಕೂಡಿವೆ' ಎಂಬುದಾಗಿದೆದ.
'ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯಾಲಯ ಹಾಲಿ ಆಯ್ಕೆಯನ್ನು ಅನೂರ್ಜಿತಗೊಳಿಸಿದರೆ, ಅತಿ ಹೆಚ್ಚು ಮತ ಪಡೆದ ಎರಡನೇ ಅಭ್ಯರ್ಥಿಯಾದ ನನ್ನನ್ನೇ ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಮಂಜು ಅವರ ಕೋರಿಕೆ ಸಮಂಜಸವಲ್ಲ' ಎಂದು ಪ್ರಜ್ವಲ್ ಪ್ರತ್ಯಾರೋಪ ಅರ್ಜಿಯಲ್ಲಿ ತಿಳಿಸಿದ್ದಾರೆ.
'ಮಂಜು ಅವರೂ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ, ತಮ್ಮ ವಿರುದ್ಧದ ಆಸ್ತಿ ಘೋಷಣೆ ಬಗ್ಗೆ ನಾಮಪತ್ರದ ಜೊತೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ, ಕ್ರಿಮಿನಲ್ ಪ್ರಕರಣಗಳಿರುವುದನ್ನು ಮುಚ್ಚಿಟ್ಟಿದ್ದಾರೆ, ಆದ್ದರಿಂದ ಅವರ ಕೋರಿಕೆಯನ್ನು ಪುರಸ್ಕರಿಸಬಾರದು' ಎಂದು ಮನವಿ ಮಾಡಿದ್ದಾರೆ.