ಟಿಪ್ಪು ಜಯಂತಿ: ಸಿ.ಟಿ. ರವಿ, ಅನಂತಕುಮಾರ್ ಹೆಗಡೆಗೆ ಸಂಕಷ್ಟ
ಬೆಂಗಳೂರು, ಫೆಬ್ರವರಿ 23: ಟಿಪ್ಪು ಸುಲ್ತಾನ್ ಜಯಂತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಸಂಸದ ಅನಂತಕುಮಾರ್ ಹೆಗಡೆ ಮತ್ತು ಬಿಜೆಪಿ ವಕ್ತಾರ ಸಿ.ಟಿ ರವಿ ಅವರಿಗೆ ಸಂಕಷ್ಟ ಎದುರಾಗಿದೆ. ಇಬ್ಬರ ವಿರುದ್ಧದ ಖಾಸಗಿ ಕ್ರಿಮಿನಲ್ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
2017ರಲ್ಲಿ ಆಗಿನ ರಾಜ್ಯ ಸರ್ಕಾರವು ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಬಹಿಷ್ಕರಿಸುವ ಸಂಬಂಧ ಮಾಡಿದ್ದ ಟ್ವೀಟ್ಗಳು ಹಾಗೂ ಟಿಪ್ಪು ಸುಲ್ತಾನ್ ಕುರಿತು ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಇಬ್ಬರೂ ನಾಯಕರ ವಿರುದ್ಧ ದೂರು ದಾಖಲಾಗಿತ್ತು.
ಇಸ್ಲಾಂ ಕುರಿತ ಹೇಳಿಕೆ; ಅನಂತಕುಮಾರ್ ಹೆಗಡೆ ಆರೋಪ ಮುಕ್ತ
ಆರ್ಟಿಐ ಕಾರ್ಯಕರ್ತ ಅಲಂ ಪಾಶಾ ಅವರು ಈ ಖಾಸಗಿ ದೂರು ಸಲ್ಲಿಸಿದ್ದರು. ತಮ್ಮ ದೂರಿಗೆ ಪುರಾವೆಯಾಗಿ 2017ರ ಅ.22ರಂದು ಪ್ರಕಟವಾಗಿದ್ದ ಪತ್ರಿಕಾ ವರದಿಯನ್ನು ಒದಗಿಸಿದ್ದರು. ಇದರಲ್ಲಿ 2017ರ ನವೆಂಬರ್ 10ರಂದು ನಿಗದಿಯಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಸಿ.ಟಿ ರವಿ ಮತ್ತು ಅನಂತ ಕುಮಾರ್ ಹೆಗಡೆ ಅವರು ಮಾಡಿದ್ದ ಕಠಿಣ ಪದಗಳಿದ್ದ ಟ್ವೀಟ್ಗಳ ಉಲ್ಲೇಖವಿತ್ತು. ಮುಂದೆ ಓದಿ.
ಅನುಮತಿ ಪಡೆಯಬೇಕಿತ್ತು
ಆಗ ಸಲ್ಲಿಸಿದ್ದ ದೂರನ್ನು ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿತ್ತು. ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ತಪ್ಪಾಗಿ ಅರ್ಥೈಸಿಕೊಂಡಿದೆ
ಆದರೆ ಪೂರ್ವಾನುಮತಿ ಪಡೆಯುವ ಪ್ರಶ್ನೆಯು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಉದ್ಭವಿಸುತ್ತದೆ. ಸಿಆರ್ಪಿಸಿ 196 (1) ಮತ್ತು (1-ಎ) ಸೆಕ್ಷನ್ ಅನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡು ಈ ದೂರನ್ನು ವಜಾಗೊಳಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಸಿ.ಟಿ.ರವಿ ನಿಮಗೆಲ್ಲಾ ಗೊತ್ತು ದಿಶಾರವಿ ಹೆಸರು ಯಾರಿಗೆ ಗೊತ್ತಿತ್ತು?
ವೇದಿಕೆಯಿಂದಲೇ ಘೋಷಣೆ ಕೂಗುತ್ತೇನೆ
ಈ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಬಾರದು. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದರೆ ವೇದಿಕೆಯಿಂದಲೇ ಘೋಷಣೆಗಳನ್ನು ಕೂಗುವುದಾಗಿ ಅನಂತಕುಮಾರ್ ಹೆಗಡೆ ಹೇಳಿದ್ದರು. ಇದು ಓಲೈಕೆಯ ನೀತಿ ಎಂದು ಸಿ.ಟಿ ರವಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ದ್ವೇಷ ಪ್ರಚೋದನೆಯ ಟ್ವೀಟ್
ಸಿ.ಟಿ. ರವಿ ಮತ್ತು ಅನಂತಕುಮಾರ್ ಹೆಗಡೆ ಅವರು ಪ್ರಚೋದನಾಕಾರಿ ಟ್ವೀಟ್ಗಳ ಮೂಲಕ ಧರ್ಮಗಳ ನಡುವೆ ದ್ವೇಷ ಪ್ರಸಾರ ಮಾಡುವಂತಿವೆ ಎಂದು ಅಲಂ ಪಾಶಾ ಆರೋಪಿಸಿದ್ದರು. ಆದರೆ ಈ ದೂರನ್ನು 10ನೇ ಎಸಿಎಂಎಂ ನ್ಯಾಯಾಲಯ ನವೆಂಬರ್ 2, 2017ರಂದು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಾಶಾ ಮೇಲ್ಮನವಿ ಸಲ್ಲಿಸಿದ್ದರು.
ಮ್ಯಾಜಿಸ್ಟ್ರೇಟ್ ವಿಫಲ- ಹೈಕೋರ್ಟ್
ತಾವು ಕೇವಲ ತನಿಖೆಗೆ ಕೋರಿದ್ದು, ಮ್ಯಾಜಿಸ್ಟ್ರೇಟ್ ಅದನ್ನು ಪರಿಗಣಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಪ್ರಕರಣದ ವಾಸ್ತವಗಳ ವಿಚಾರದಲ್ಲಿ ತಮ್ಮ ತಿಳಿವಳಿಕೆಯನ್ನು ಬಳಸುವಲ್ಲಿ ಮ್ಯಾಜಿಸ್ಟ್ರೇಟ್ ವಿಫಲರಾಗಿದ್ದಾರೆ. ಸಿಆರ್ಪಿಸಿ ಸೆಕ್ಷನ್ಗಳನ್ನು ತಪ್ಪಾಗಿ ಅರ್ಥೈಸಿಕೊಂಡು ತೀರ್ಪು ನೀಡಿದ್ದಾರೆ. ಹೀಗಾಗಿ ಈ ಪ್ರಕರಣವು ಹೊಸದಾಗಿ ದೂರು ದಾಖಲಿಸಿಕೊಂಡು ಪರಿಗಣಿಸಲು ಯೋಗ್ಯವಾಗಿದೆ ಎಂದು ಹೇಳಿದೆ.