ಪಠ್ಯಪುಸ್ತಕ ನೀಡದೆ ಶಾಲೆ ಆರಂಭಿಸಿದ್ದು ಏಕೆ? ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಆಗಸ್ಟ್ 24: ಕೊರೊನಾ ಸುರಕ್ಷತೆ ಕುರಿತು ಮಾರ್ಗಸೂಚಿ ಅನ್ವಯ 9 ಮತ್ತು 10 ನೇ ತರಗತಿ ಆರಂಭಿಸಲಾಗಿದೆ. ಆದರೆ, ಪಠ್ಯಪುಸ್ತಕ, ನೋಟ್ಪುಸ್ತಕಗಳ ಕೊರತೆ ಎದುರಾಗಿದೆ. ಪಠ್ಯಪುಸ್ತಕವಿಲ್ಲದೆ ಶಾಲೆ ಆರಂಭಿಸಿದ್ದು ಏಕೆ? ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರದಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಈ ಬಗ್ಗೆ ಸ್ಥಿತಿಗತಿ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಲಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ಕೇಳಲು ಅನುವಾಗುವಂತೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಮನವಿಯ ವಿಚಾರಣೆಯನ್ನು ಮಂಗಳವಾರದಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೃಷ್ಣ ಪಿ ಭಟ್ ಅವರಿದ್ದ ವಿಭಾಗೀಯ ಪೀಠವು ಕೈಗೆತ್ತಿಕೊಂಡಿತ್ತು. ವಿಚಾರಣೆ ವೇಳೆ ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನು ವಿತರಣೆಯನ್ನು ಮಾಡದೆ ಶಾಲೆಗಳನ್ನು ಆರಂಭಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಪ್ರಾಥಮಿಕ ಹಾಗೂ ಇನ್ನಿತರ ತರಗತಿಗಳನ್ನು ಆರಂಭಿಸಲು ಸರ್ಕಾರವು ಮುಂದಾಗಿದೆ ಎಂಬ ವಿಷಯ ತಿಳಿದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಶಿಕ್ಷಣ ಇಲಾಖೆ ಎಡವಟ್ಟಿನಿಂದ ರಾಜ್ಯ ಪಠ್ಯ ಕ್ರಮ ಪುಸ್ತಕಗಳಿಗೆ ಎದುರಾಯ್ತು ಸಮಸ್ಯೆ
''ಶಾಲಾ ಅರಂಭ ಹಾಗೂ ಪಠ್ಯಪುಸ್ತಕಗಳ ವಿತರಣೆ ಒಟ್ಟಿಗೆ ನಡೆಯಬೇಕು. ಇದೆರಡೂ ಹೊಂದಾಣಿಕೆಯಾಗಬೇಕು. ಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಪ್ರಕ್ರಿಯೆ ಅರ್ಥಹೀನ, ಶಾಲೆಗಳು ಆಗಸ್ಟ್ 23ರಿಂದ ಆರಂಭವಾಗಿವೆ ಎಂದಾದ ಮೇಲೆ ಅವರಿಗೆ ಪಠ್ಯ ಮತ್ತು ನೋಟ್ ಪುಸ್ತಕಗಳನ್ನು ಒದಗಿಸಬೇಕಾದದ್ದು ಅಗತ್ಯ ಬದ್ಧತೆಯಾಗಿದೆ. ಇದು ಶಾಲೆಯಲ್ಲಿನ ಅವರ ಹಾಜರಾತಿಗೆ ಅರ್ಥಪೂರ್ಣವೂ ಮತ್ತು ಶಿಕ್ಷಣದ ಕಲಿಕೆಗೆ ಉಪಯುಕ್ತವೂ ಆಗಲಿದೆ. ಈ ಸಂಬಂಧ ಎಜಿಎ ಅವರ ಉತ್ತರದಿಂದ ನಾವು ತೃಪ್ತರಾಗಿಲ್ಲ,'' ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
''ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆಗೆ ಯಾವುದೇ ರೀತಿಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಲಾಗದು ಎಂದು ಸರ್ಕಾರವು ಹೇಳಿದೆ. ಈ ಮೂಲಕ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ, ಸಂವಿಧಾನದ 21 ಎ ವಿಧಿಯಡಿ ಮಕ್ಕಳಿಗೆ ಕಲಿಕೆಗೆ ಟ್ಯಾಬ್ಲೆಟ್ಗಳನ್ನು ಒದಗಿಸಬೇಕಾದದ್ದು ಸರ್ಕಾರದ ಬದ್ಧತೆಯಾಗಿರುತ್ತದೆ'' ಎಂದು ಅರ್ಜಿದಾರರ ಪರ ವಕೀಲರಾದ ಹರೀಶ್ ನರಸಪ್ಪ ವಾದಿಸಿದರು.
ರಾಜ್ಯ ಪಠ್ಯ ಕ್ರಮ ಮಕ್ಕಳಿಗೆ ಆಗುತ್ತಿದೆ ಅನ್ಯಾಯ, ಸರಿ ಪಡಿಸುವರು ಯಾರು?
''ಕಳೆದ ವರ್ಷ ಬಹುತೇಕ ಶಾಲೆಗಳು ಯಾರೂ ಪಠ್ಯ ಪುಸ್ತಕ ತೆಗೆದುಕೊಂಡು ಹೋಗಿರಲಿಲ್ಲ. ಬೆರಳೆಣಿಕೆ ಶಾಲೆಗಳು ಮಾತ್ರ ಪಠ್ಯ ಪುಸ್ತಕ ತೆಗೆದುಕೊಂಡು ಹೋಗಿದ್ದರಿಂದ ಪಠ್ಯ ಪುಸ್ತಕ ಮುದ್ರಣ ಗುತ್ತಿಗೆಯನ್ನು ನಿಲ್ಲಿಸಲಾಗಿತ್ತು. ಇದೀಗ ಶಾಲೆಗಳು ಪ್ರಾರಂಭವಾಗುತ್ತಿದ್ದು, ಎಲ್ಲಾ ಶಾಲೆಗಳು ಪಠ್ಯ ಪುಸ್ತಕಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಎಲ್ಲಾ ಪಠ್ಯ ಪುಸ್ತಕಗಳು ಲಭ್ಯವಿಲ್ಲ. ಕೆಲವು ವಿಷಯಗಳು ಪಠ್ಯಗಳು ಅಗತ್ಯ ಇರುವಷ್ಟು ಇವೆ. ಹೀಗಾಗಿ ಹೊಸದಾಗಿ ಮುದ್ರಣ ಮಾಡಿ ಪೂರೈಕೆ ಮಾಡುವಂತೆ ಮುದ್ರಕರಿಗೆ ತಿಳಿಸಿದ್ದಾರೆ. ಇನ್ನೂ ಎರಡು ತಿಂಗಳು ಕಾಲಾವಕಾಶ ಆಗುತ್ತದೆ. ಇರುವ ಪಠ್ಯ ಪುಸ್ತಕಗಳನ್ನಷ್ಟೆ ವಿತರಣೆ ಮಾಡುತ್ತಿದ್ದೇವೆ,'' ಎಂದು ಪಠ್ಯ ಪುಸ್ತಕ ವಿತರಣೆಯ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
Recommended Video