ಹಾವೇರಿ : ಜನವರಿಯಲ್ಲಿ ಸತ್ತ ವ್ಯಕ್ತಿ ಇಂದು ಪ್ರತ್ಯಕ್ಷ!
ಹಾವೇರಿ, ಅ.14 : ಜನವರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿ ಇಂದು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ರಾಣೆಬೆನ್ನೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಜನವರಿ 1ರಂದು ರಾಣೆಬೆನ್ನೂರು ಬಸ್ ಡಿಪೋದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಡಿಪೋದ ಭದ್ರತಾ ಸಿಬ್ಬಂದಿ ನಿಂಗರಾಜ್ ಬೆಳಗುಟ್ಟಿ ಈ ದುರಂತದಲ್ಲಿ ಸಾವನ್ನಪ್ಪಿದ್ದರು. ಆದರೆ, ಅವರು ಇಂದು ಪ್ರತ್ಯಕ್ಷರಾಗಿದ್ದಾರೆ.
ಅಗ್ನಿ ದುರಂತದ ಬಗ್ಗೆ ತನಿಖೆನಡೆಸಿದ ಪೊಲೀಸರು ದುಷ್ಕರ್ಮಿಗಳು ಬೆಂಕಿ ಹಚ್ಚಿ ನಿಂಗರಾಜ್ ಕೊಲೆ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದರು. ಆಗಸ್ಟ್ 8ರಂದು ಶವವೂ ಸಿಕ್ಕಿತ್ತು. ಹಲಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು.
ಆದರೆ, ಇಂದು ನಿಂಗರಾಜ್ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಇದರಿಂದ ಅಗ್ನಿ ಆಕಸ್ಮಿಕ ಮತ್ತು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ನಿಂಗರಾಜ್ ಇಷ್ಟು ದಿನ ಎಲ್ಲಿದ್ದ?, ಡಿಪೋದಲ್ಲಿ ಸಿಕ್ಕ ಶವ ಯಾರದ್ದು? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ರಾಣೆಬೆನ್ನೂರು ಪೊಲೀಸರು ನಿಂಗರಾಜ್, ಆತನ ಪತ್ನಿ ನೇತ್ರಾವತಿಯನ್ನ ಕರೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರಬರುವ ನಿರೀಕ್ಷೆ ಇದೆ.