ಸಂದರ್ಶನ: 'ಮೇಟಿ ವಿಡಿಯೋದಿಂದ ನನಗೇನೂ ಆಗಬೇಕಿರಲಿಲ್ಲ'
ಆ ಸಿಡಿ ಬಿಡುಗಡೆ ಮಾಡಿದ್ದು ನಾನಲ್ಲ. ಮೇಟಿ ಅವರ ನಡವಳಿಕೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಗೆ ತಿಳಿಸುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಒನ್ಇಂಡಿಯಾ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ
ಬೆಂಗಳೂರು, ಡಿಸೆಂಬರ್ 27: ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೆಸರು ರಾತ್ರೋರಾತ್ರಿ ಪ್ರಖ್ಯಾತಿಗೆ ಬಂದಿತು. ಎಚ್.ವೈ.ಮೇಟಿ ವಿಡಿಯೋ ಹಗರಣ ಮಾಧ್ಯಮಗಳಲ್ಲಿ ಪ್ರಸಾರವಾಗಿ, ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆಯೂ ನೀಡಿದ ನಂತರ ಆ ಪ್ರಕರಣದ ಬಗ್ಗೆ ಒನ್ಇಂಡಿಯಾ ಜತೆಗೆ ಮತ್ತೆ ಮಾತನಾಡಿದ್ದಾರೆ.
ರಾಜಶೇಖರ್ ಮೂಲತಃ ಬಳ್ಳಾರಿಯವರು. ಅವರಿಗೆ ಮೇಟಿ ನಡವಳಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗೆ ವಿಷಯ ತಿಳಿಸುವ ಇರಾದೆ ಇತ್ತು ವಿನಾ ವಿಡಿಯೋ ಬಹಿರಂಗ ಪಡಿಸುವುದಾಗಲೀ ಮತ್ತು ಟಿವಿ ಚಾನಲ್ ಗಳಿಗೆ ತಲುಪಿಸುವ ಉದ್ದೇಶವಾಗಲೀ ಇರಲಿಲ್ಲ. ಈ ಬಗ್ಗೆ ಇನ್ನಷ್ಟು ವಿವರ ಹಂಚಿಕೊಂಡಿದ್ದಾರೆ ರಾಜಶೇಖರ್.[ಮೇಟಿ ರಾಸಲೀಲೆ ವಿಡಿಯೋ ಹಿಂದಿನ ರಹಸ್ಯವೇನು?]
ಕೆಲವರು ನನ್ನ ಬಳಿ ವಿಡಿಯೋ ತೆಗೆದುಕೊಂಡು ಬಂದು ಸಹಾಯ ಕೇಳಿದರು. ನಾನು ವಿಡಿಯೋ ನೋಡಿದೆ. ಮತ್ತು ಸಾಮಾಜಿಕ ಕಾಳಜಿಯಿಂದ ಮಾತ್ರ ಸಹಾಯ ಮಾಡಬಲ್ಲೆ ಅಂತ ಹೇಳಿದೆ. ಆದರೆ ಆಗ ವಾಪಸ್ ಹೋದವರು ಮತ್ತೆ ವಾಪಸ್ ಬರಲಿಲ್ಲ. ನನಗೆ ಮೇಟಿ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರಲಾರಂಭಿಸಿದವು ಎಂದರು ರಾಜಶೇಖರ್.
ನಾನು ದೆಹಲಿಗೆ ಹೋಗಿದ್ದು ಕಾಂಗ್ರೆಸ್ ನ ಹಿರಿಯ ನಾಯಕರನ್ನು ಭೇಟಿಯಾಗಲು ಅಷ್ಟೇ. ಜಿ.ಪರಮೇಶ್ವರ ನನ್ನನ್ನು ಭೇಟಿಯಾಗುವುದಕ್ಕೆ ಕೂಡ ನಿರಾಕರಿಸಿದರು. ನನ್ನ ಹತ್ತಿರ ವಿಡಿಯೋ ಇರಲಿಲ್ಲ. ಆದರೆ ಮೇಟಿ ಏನು ಮಾಡಿದ್ದರು ಅನ್ನೋದನ್ನು ಹೇಳಬೇಕಿತ್ತು. ನಾನು ದೆಹಲಿಯಲ್ಲಿದ್ದ ದಿನವೇ ಆ ಸಿಡಿ ಹೇಗೆ ಬಿಡುಗಡೆಯಾಯಿತು, ಪ್ರಸಾರವಾಯಿತು ಎಂಬುದು ಗೊತ್ತಿಲ್ಲ. ನನಗೆ ಅದರಿಂದ ಏನೂ ಆಗಬೇಕಿರಲಿಲ್ಲ ಎಂದು ಹೇಳಿದರು.
ಬೆದರಿಕೆ ಕರೆಗಳು ಬರುತ್ತಿದ್ದರಿಂದ ಸ್ಥಳೀಯ ಪೊಲೀಸರನ್ನು ಭೇಟಿ ಮಾಡಿದ್ದರು ಮುಲಾಲಿ. "ನನಗೆ ಸಿಐಡಿಯಿಂದ ಯಾವುದೇ ಸಮನ್ಸ್ ಬಂದಿಲ್ಲ. ಒಂದು ವೇಳೆ ಬಂದರೆ ತನಿಖೆಗೆ ಖಂಡಿತಾ ಸಹಕಾರ ನೀಡ್ತೀನಿ. ನಾನೇನೂ ತಪ್ಪು ಮಾಡಿಲ್ಲ" ಎಂದರು. ಮೇಟಿ ಅಸಹಾಯಕ ಹೆಂಗಸಿನ ಶೋಷಣೆ ಮಾಡಿದ್ದಾರೆ. ಆ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಷ್ಟೇ ಕೇಳಿದ್ದೆ ಎಂದರು.[ನಾಲ್ವರು ಗಣ್ಯರ ಸಿಡಿ ಶೀಘ್ರ ಬಿಡುಗಡೆ: ಮುಲಾಲಿ]
ರಾಜಶೇಖರ್ ಅವರಿಗೆ ವಿಡಿಯೋದಲ್ಲಿ ಇದ್ದ ಮಹಿಳೆ ಯಾರು ಅಂತ ಸಹ ಗೊತ್ತಿಲ್ಲವಂತೆ. ಹಾಗಿದ್ದರೆ ಮೊದಲಿಗೆ ಆ ವಿಡಿಯೋ ತಂದವರು ಯಾರು ಎಂದು ಪ್ರಶ್ನಿಸಿದರೆ, ಆ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು.