ಮದಗಜ ದೇವೇಗೌಡರಿಗೆ ಸಾಟಿಯೆ ಎ ಮಂಜು?
ಎ ಮಂಜು : ಸತತವಾಗಿ 3 ಗೆಲುವುಗಳನ್ನು ದಾಖಲಿಸಿರುವ ಶಾಸಕ ಎ ಮಂಜು 5 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅನುಭವಿ ರಾಜಕಾರಣಿ. ಸೋಲುಗಳ ನಡುವೆಯೂ ಗೆಲುವನ್ನು ಅರಸುತ್ತಾ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದ ಹೆಗ್ಗಳಿಕೆ ಎ ಮಂಜು ಅವರದ್ದು. ಜನಸಾಮಾನ್ಯರಿಗೆ ಹತ್ತಿರವಾಗುತ್ತಲೇ ಅವರ ನಡುವೆ ಬೆರೆಯುತ್ತಾ ಎಲ್ಲರ ಹೆಗಲ ಮೇಲೆ ಕೈ ಹಾಕಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮತ್ತು ಗೆಲುವಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಆತ್ಮವಿಶ್ವಾಸದಿಂದಲೇ ಮಾಡುವ ಮಂಜು ಈ ಸಲ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಇನ್ನೇನು ಸಚಿವರಾದರೂ ಎಂಬಷ್ಟರಲ್ಲಿ ಕಾಣದ ಕೈಗಳ ಸಂಚಿನಿಂದ ತಪ್ಪಿ ಹೋಯಿತು. [ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಮಂಜು]
ಈ ನಡುವೆ ರಾಜಕೀಯ ಕಾರಣಕ್ಕಾಗಿ ಸಂಸದ ದೇವೇಗೌಡ ಮತ್ತು ರೇವಣ್ಣ ಅವರನ್ನು ಸಾಧ್ಯವಾದಾಗಲೆಲ್ಲ ಕೆಣಕುತ್ತಲೇ ಸಾಗಿದ ಎ ಮಂಜು, ಹೊಳೆನರಸೀಪುರದ ರಾಜಕೀಯದಲ್ಲೂ ತಲೆ ತೂರಿಸಿದ್ದರು. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು ಇದಕ್ಕೆ ಕಾರಣ. ಸಾರ್ವಜನಿಕ ಸಭೆಗಳಲ್ಲಿಯೇ ಕೆಣಕುವ ಪ್ರಯತ್ನ ಮಾಡುತ್ತಿದ್ದ ಮಂಜು ಸಾರ್ವತ್ರಿಕವಾಗಿಯೂ ದೇವೇಗೌಡರ ರಾಜಕಾರಣವನ್ನು ಮುಚ್ಚುಮರೆಯಿಲ್ಲದೇ ಟೀಕೆ ಮಾಡಿದ್ದು, ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಸಭೆಗಳಲ್ಲಿ ರೇವಣ್ಣ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯ ಶಕ್ತಿ ರಾಜಕಾರಣದಲ್ಲಿ ಮಂಜು ವರ್ಚಸ್ಸನ್ನು ಪ್ರವರ್ಧಮಾನಕ್ಕೆ ತಂದಿದೆ. [ಅರಕಲಗೂಡು ಮಂಜು ವೆಬ್ ಸೈಟ್]
ಅದೇ ಕಾರಣಕ್ಕೆ ಕಾಂಗೈ ಮುಖಂಡ ಆನಂದ್ ಅವರ ಪ್ರಯತ್ನವನ್ನು ಮೀರಿ ದೆಹಲಿ ಹೈಕಮಾಂಡ್ ಕೃಪಾಕಟಾಕ್ಷ ಎ ಮಂಜುಗೆ ಒಲಿದಿದೆ. ಆದರೆ ಜಿಲ್ಲೆಯ ಕಾಂಗೆಸ್ ನಲ್ಲಿಯೇ ಅಂತರ್ಗತವಾಗಿರುವ ಭಿನ್ನಾಭಿಪ್ರಾಯ ಮಂಜು ಅವರಿಗೆ ನುಂಗಲಾರದ ತುತ್ತಾಗಲಿದೆ. ಅತ್ಯುತ್ತಮ ಸಂಘಟಕರಾಗಿರುವ ಮಂಜು ಭಿನ್ನಮತವನ್ನು ಮೀರಿ ಹಾದಿಯನ್ನು ಸುಗಮಗೊಳಿಸಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕು.
ಮರಡಿ ಸೋಮಶೇಖರ್ : ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ ಸರ್ಕಾರಿ ಸೇವೆಯಲ್ಲಿದ್ದ ಸೋಮಶೇಖರ್ ಸಾರ್ವಜನಿಕರಿಗೆ ತಲುಪಿಕೊಂಡಿದ್ದು ಸಂಘ ಸಂಸ್ಥೆಗಳ ಚಟುವಟಿಕೆಗಳ ಮೂಲಕ. ಜಿಲ್ಲೆಯ ವಿವಿಧೆಡೆ ಇವರಿಂದ ಉಪಕೃತರಾದ ಗುತ್ತಿಗೆದಾರರು ಇದ್ದಾರಾದರೂ ಒಂದು ವೇಳೆ ಸೊಮಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಋಣ ಸಂದಾಯ ಮಾಡುವರೇ ಕಾದು ನೋಡಬೇಕು. ಹಾಗೆಯೇ ದಾಸ ಒಕ್ಕಲಿಗ ಸಮುದಾಯದ ಸೋಮಶೇಖರ್ ಕಣಕ್ಕಿಳಿದರೆ ಒಕ್ಕಲಿಗ ಮತಗಳನ್ನು ಸೆಳೆಯುವ ನಿರೀಕ್ಷೆ ಬಿಜೆಪಿಗಿರುವಂತಿದೆ. ಸೋಮಶೇಖರ್ ಅಧಿಕಾರಿಯಾಗಿದ್ದಾಗ ಅವರನ್ನು ಜೆಡಿಎಸ್ ಪಾಳಯದಲ್ಲಿ ಗುರುತಿಸಲಾಗುತ್ತಿತ್ತು ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಅವರನ್ನು ಎಷ್ಟರ ಮಟ್ಟಿಗೆ ಜನ ಸ್ವೀಕರಿಸುವರು?
ಬಿ ಸಿ ರಾಜೇಶ್ : ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ರಾಜೇಶ್ ವೃತ್ತಿಯಿಂದ ವಕೀಲರು. ದಶಕಗಳಿಂದ ಬಹುಜನ ಸಮಾಜ ಪಕ್ಷದಲ್ಲಿಯೇ ಅಸ್ತಿತ್ವ ಕಂಡುಕೊಂಡಿರುವ ರಾಜೇಶ್ ಅರಕಲಗೂಡು ತಾಲೂಕಿನ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಜಿಲ್ಲೆಯಲ್ಲಿ ಬಿಎಸ್ಪಿ ಅಸ್ತಿತ್ವ ಕೆಲವೇ ತಾಲೂಕುಗಳಲ್ಲಿ ಮಾತ್ರವಿದೆ. ಆದಾಗ್ಯೂ ಜಿಲ್ಲೆಯ ಲೋಕಸಬಾ ಚುನಾವಣೆಗಳಲ್ಲಿ ಪಕ್ಷದ ಅಸ್ತಿತ್ವ ಉಳಿಸಲು ಸಮರ್ಥ ಎದುರಾಳಿಯನ್ನು ಕಣಕ್ಕಿಳಿಸಲು ಬಿಎಸ್ ಪಿ ಚಿಂತಿಸುತ್ತಿದ್ದು ಅರಕಲಗೂಡಿನ ಬಿ ಸಿ ರಾಜೇಶ್ ಹೆಸರು ಮಂಚೂಣಿಯಲ್ಲಿದೆ.