ಭವಾನಿ ಟಿಕೆಟ್ಗೆ ರೇವಣ್ಣ, ಸೂರಜ್ ಪಟ್ಟು: ಹಾಸನ ಸ್ಥಿತಿ ಬಗ್ಗೆ ದೇವೇಗೌಡರಿಗೆ ಮನವರಿಕೆ- ಇತ್ತ ಜೆಡಿಎಸ್ ಕಚೇರಿಯಲ್ಲಿ ಎಚ್ಡಿಕೆ
ಪ್ರತಿ ಸಾರಿಯಂತೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಬಂಡಾಯದ ಬಿಸಿಯನ್ನು ಎದುರಿಸುತ್ತಿವೆ. ಆದರೆ, ಜೆಡಿಎಸ್ನ ಗೌಡರ ಕುಟುಂಬದಲ್ಲಿಯೇ ಬಂಡಾಯದ ಛಾಯೆ ದಟ್ಟವಾಗುತ್ತಿದೆ. ಇದು ಹಾಸನ ಟಿಕೆಟ್ಗಾಗಿ ನಡೆಯುತ್ತಿರುವ ಸಂಘರ್ಷವಾಗಿದೆ.
ಬೆಂಗಳೂರು, ಫೆಬ್ರವರಿ 04: ಕರ್ನಾಟಕ ಚುನಾವಣೆಗೆ ಎರಡು ತಿಂಗಳಷ್ಟೇ ಬಾಕಿ ಇವೆ. ವಿವಿಧ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್ಗಾಗಿ ಶತಾಯಗತಾಯ ಹರಸಾಹಸ ನಡೆಸಿದ್ದಾರೆ. ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಇಂದು ಸಭೆ ನಡೆಸುತ್ತಿದ್ದು, ಇದೇ ತಿಂಗಳು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಕಾಂಗ್ರೆಸ್ನ ಅಂತಿಮ ಪಟ್ಟಿ ರೂಪಗೊಳ್ಳುತ್ತಿದ್ದು, ಫೆಬ್ರುವರಿ ಕೊನೆಯ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ. ಪ್ರತಿ ಸಾರಿಯಂತೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಬಂಡಾಯದ ಬಿಸಿಯನ್ನು ಎದುರಿಸುತ್ತಿವೆ. ಆದರೆ, ಜೆಡಿಎಸ್ನ ಗೌಡರ ಕುಟುಂಬದಲ್ಲಿಯೇ ಬಂಡಾಯದ ಛಾಯೆ ದಟ್ಟವಾಗುತ್ತಿದೆ. ಇದು ಹಾಸನ ಟಿಕೆಟ್ಗಾಗಿ ನಡೆಯುತ್ತಿರುವ ಸಂಘರ್ಷವಾಗಿದೆ.
ಬೆಂಗಳೂರು-ಕೊಚ್ಚಿ ಕಾರಿಡಾರ್ಗೆ ₹10,000 ಕೋಟಿ: ಯಾವ ಮಾರ್ಗ, ಯಾರಿಗೆಲ್ಲಾ ಉತ್ತೇಜನ? ಅಂಕಿಅಂಶ, ಮಾಹಿತಿ
ಭವಾನಿ ಟಿಕೆಟ್ಗೆ ರೇವಣ್ಣ, ಸೂರಜ್ ಪಟ್ಟು
ಹಾಸನ ನಗರ ವಿಧಾನಸಭೆ ಕ್ಷೇತ್ರದಲ್ಲಿ ರೇವಣ್ಣ ಪತ್ನಿ ಭವಾನಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಭವಾನಿಗೆ ಟಿಕೆಟ್ ನೀಡಲೇಬೇಕೆಂದು ಜೆಡಿಎಸ್ ಶಾಸಕ, ಪತಿ ರೇವಣ್ಣ ಹಾಗೂ ಎಂಎಲ್ಸಿ, ಪುತ್ರ ಸೂರಜ್ ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಹಾಸನದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. 'ಭವಾನಿ ನಿಂತರ ಜೆಡಿಎಸ್ಗೆ ಗೆಲುವು ಖಚಿತವಾಗಲಿದೆ. ಹಾಸನದಲ್ಲಿ ಭವಾನಿ ಅವರ ಬಗ್ಗೆ ಜನರು ಪ್ರೀತಿ ಹೊಂದಿದ್ದಾರೆ. ಬಿಜೆಪಿಯ ಪ್ರೀತಂ ಗೌಡರನ್ನು ಸೋಲಿಸಲು ಭವಾನಿಯೇ ಪ್ರಬಲ ಅಭ್ಯರ್ಥಿ' ಎಂದು ದೇವೇಗೌಡರ ಮುಂದೆ ಹೇಳಿದ್ದಾರೆಂದು ವರಿಯಾಗಿದೆ.
ಸ್ವರೂಪ್ ಪರ ಕುಮಾರಸ್ವಾಮಿ ಬ್ಯಾಟಿಂಗ್
ಹಾಸನದಲ್ಲಿ ಈಗಾಗಲೇ ಜೆಡಿಎಸ್ಗೆ ಉತ್ತಮ ಅಭ್ಯರ್ಥಿ ಇದ್ದಾರೆ. ಸ್ಪರೂಪ್ ಹಲವು ವರ್ಷಗಳಿಂದ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಒಂದು ವೇಳೆ, ಭವಾನಿ ಅವರಿಗೆ ಟಿಕೆಟ್ ನೀಡಿದರೆ, ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊಂದುತ್ತಾರೆ. ಈ ಹಿನ್ನೆಲೆಯಲ್ಲಿ ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಭವಾನಿ ಟಿಕೆಟ್ ವಿಚಾರವಾಗಿ ಅವರು ಭಾವನಾತ್ಮಕ ಮಾತುಗಳನ್ನೂ ಕಳೆದ ವಾರ ಆಡಿದ್ದರು.
ಕುಮಾರಸ್ವಾಮಿ, ದೇವೇಗೌಡರ ತೀರ್ಮಾನವೇ ಅಂತಿಮ
ಕುಮಾರಸ್ವಾಮಿ ಅವರು ಭಾವನಾತ್ಮಕ ಮಾತುಗಳನ್ನು ಆಡಿದ ನಂತರ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಚ್ ಡಿ ರೇವಣ್ಣ, ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಎಚ್ ಡಿ ದೇವೇಗೌಡ ಮಾತೇ ಅಂತಿಮ ಎಂದು ಹೇಳಿದ್ದರು. ಕುಮಾರಸ್ವಾಮಿ ಹಾಗೂ ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನೀವು ಒಂದು ಹಾಗೆ ತಿಳಿದುಕೊಂಡಿದ್ದರೆ ಅದು ತಪ್ಪು. ನಾವು ಎಲ್ಲರೂ ಒಂದಾಗಿಯೇ ಇದ್ದೇವೆ. ಭವಾನಿ ಅವರ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡ ಮಾತೇ ಅಂತಿಮ. ನಾವೆಲ್ಲರೂ ಅದನ್ನು ಒಪ್ಪಿಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ರೇವಣ್ಣ ತಿಳಿಸಿದ್ದಾರೆ.
ಭವಾನಿ ಪರ ಪುತ್ರ ಬ್ಯಾಟಿಂಗ್
ಭವಾನಿ ಟಿಕೆಟ್ ವಿಚಾರವಾಗಿ ಮಾತನಾಡಿದ್ದ ಪುತ್ರ, ಎಂಎಲ್ಸಿ ಸೂರಜ್ ರೇವಣ್ಣ ಮಾತನಾಡಿದ್ದರು. ಹಾಸನವನ್ನು ನಾವು ನೋಡಿಕೊಳ್ಳುತ್ತೇವೆ. ಹಾಸನದ ವಿಚಾರದಲ್ಲಿ ತಲೆ ಹಾಕಬೇಡಿ ಎಂದು ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಹೇಳಿದ್ದರು. ಈ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅಭಿಮಾನಿಗಳು, ನಿಮ್ಮಿಂದಲೇ ಜೆಡಿಎಸ್ ಹಾಳುಗುತ್ತಿರುವುದು ಎಂದು ಕೆಂಡ ಕಾರಿದ್ದರು.
ರಾಜಕೀಯದಲ್ಲಿ ಗೌಡರ ಕುಟುಂಬ
ಇತ್ತ ರಾಮನಗರದಲ್ಲಿ ಕುಮಾರಸ್ವಾಮಿ ಪುತ್ರ ಚುನಾವಣೆಗೆ ಸ್ಪರ್ಧಿಸಲು ಸಿದ್ದವಾಗಿದ್ದಾರೆ. ಕುಮಾರಸ್ವಾಮಿ ಮತ್ತೆ ಚನ್ನಪಟ್ಟಣದಲ್ಲಿ ಕಣಕ್ಕಿಳಿಯಲು ಸಿದ್ದತೆ ಮಾಡಿಕೊಂಡಿದ್ದಾರೆ. ರೇವಣ್ಣನವರು ಹೊಳೆನರಸೀಪುರದಿಂದ ಸ್ಪರ್ಧಿಸಲಿದ್ದಾರೆ. ರೇವಣ್ಣ ಪುತ್ರರಾದ ಸೂರಜ್ ಎಂಎಲ್ಸಿ ಆಗಿದ್ದಾರೆ. ಪ್ರಜ್ವಲ್ ಸಂಸದರಾಗಿದ್ದಾರೆ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಇನ್ನು ರಾಮನಗರದ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.