ಸಾಗರ, ಸೊರಬ ಟಿಕೆಟ್ ಗೊಂದಲಕ್ಕೆ ತೆರೆ ಎಳೆದ ಯಡಿಯೂರಪ್ಪ!
Recommended Video
ಶಿವಮೊಗ್ಗ, ಫೆಬ್ರವರಿ 25 : ಸಾಗರ ಮತ್ತು ಸೊರಬ ಕ್ಷೇತ್ರದ ಟಿಕೆಟ್ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಆದರೆ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್? ಎಂಬುದು ಇನ್ನೂ ನಿಗೂಢವಾಗಿದೆ.
ಭಾನುವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಟಿಕೆಟ್ ಬಗ್ಗೆ ಇದ್ದ ಗೊಂದಲಗಳನ್ನು ಬಗೆಹರಿಸಿದರು.
ಮಧು ಬಂಗಾರಪ್ಪ, ಬೇಳೂರು ಸೋಲಿಸುವುದೇ ಗುರಿ : ಹಾಲಪ್ಪ
'ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಸುಮಾರು 15 ದಿನದಲ್ಲಿ ವರಿಷ್ಠರು ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಬಳಿಕ ಅಭ್ಯರ್ಥಿ ಅಂತಿಮವಾಗಲಿದ್ದಾರೆ' ಎಂದರು.
ಕ್ಷೇತ್ರ ಪರಿಚಯ : ಸಾಗರದಲ್ಲಿ ಬಿಜೆಪಿ, ಕಾಂಗ್ರೆಸ್ ಮುಖಾಮುಖಿ ಕದನ
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ, ಸಾಗರ, ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಯಾರು? ಎಂದು ಭಾರೀ ಚರ್ಚೆ ನಡೆಯುತ್ತಿದೆ. ಸಾಗರ ಕ್ಷೇತ್ರದ ಟಿಕೆಟ್ಗಾಗಿ ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ ನಡೆಯುತ್ತಿತ್ತು. ಈಗ ಈ ಗೊಂದಲಗಳನ್ನು ಯಡಿಯೂರಪ್ಪ ಪರಿಹರಿಸಿದ್ದಾರೆ.
'ಹರತಾಳು ಹಾಲಪ್ಪ ಸ್ಪರ್ಧೆ'
ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಸಾಗರದಿಂದ ಸ್ಪರ್ಧಿಸುವಂತೆ ಹರತಾಳು ಹಾಲಪ್ಪ ಅವರಿಗೆ ಸೂಚನೆ ನೀಡಿರುವುದು ಹೌದು. ಬೇಳೂರು ಗೋಪಾಲಕೃಷ್ಣ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಬ್ಬರನ್ನು ಕರೆದು ಮಾತನಾಡುವೆ. ಬೇಳೂರು ಅವರಿಗೆ ಪಕ್ಷದಲ್ಲಿ ಬೇರೆ ಸ್ಥಾನಮಾನ ನೀಡಲಾಗುತ್ತದೆ' ಎಂದರು.
‘ಕುಮಾರ್ ಬಂಗಾರಪ್ಪ ಸ್ಪರ್ಧೆ'
'ಸೊರಬ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂದು ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಸೊರಬದಿಂದ ಕಣಕ್ಕಿಳಿಯಲಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೋಪಾಲಕೃಷ್ಣಗೆ ನಿರಾಸೆ
ಯಡಿಯೂರಪ್ಪ ಅವರ ಹೇಳಿಕೆಯಿಂದಾಗಿ ಬೇಳೂರು ಗೋಪಾಲಕೃಷ್ಣ ಅವರಿಗೆ ನಿರಾಸೆಯಾಗಿದೆ. ಅವರು ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. 2013ರ ಚುನಾವಣೆಯಲ್ಲಿ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು.
ಸೊರಬ ಬಿಟ್ಟು ಸಾಗರದತ್ತ ಹಾಲಪ್ಪ
2008ರ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 2013ರ ಚುನಾವಣೆಯಲ್ಲಿಯೂ ಕ್ಷೇತ್ರದಿಂದ ಸ್ಪರ್ಧಿಸಿ ಮಧು ಬಂಗಾರಪ್ಪ ಅವರ ವಿರುದ್ಧ ಸೋತಿದ್ದರು. ಈ ಬಾರಿ ಕ್ಷೇತ್ರ ಬದಲಾವಣೆ ಮಾಡುತ್ತಿದ್ದು, ಪಕ್ಕದ ಸಾಗರ ಕ್ಷೇತ್ರಕ್ಕೆ ವಲಸೆ ಹೋಗುತ್ತಿದ್ದಾರೆ.
ಬದಲಾವಣೆ ಏಕೆ?
ಕಾಂಗ್ರೆಸ್ ಪಕ್ಷದಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ಜಿಲ್ಲೆಯ ಚುನಾವಣಾ ಚಿತ್ರಣ ಬದಲಾಗಿದೆ. ಸೊರಬದಿಂದ ಅವರು ಕಣಕ್ಕಿಳಿಯಲಿದ್ದು, ಹಾಲಪ್ಪ ಅವರಿಗೆ ಸಾಗರ ಕ್ಷೇತ್ರದ ಟಿಕೆಟ್ ನೀಡಲಾಗುತ್ತದೆ. ಸೊರಬ ಕ್ಷೇತ್ರದ ಶಾಸಕರು ಮಧು ಬಂಗಾರಪ್ಪ. ಕುಮಾರ್ ಬಂಗಾರಪ್ಪ ಅವರ ಸ್ಪರ್ಧೆಯಿಂದಾಗಿ ಸಹೋದರರ ನಡುವೆ ಪೈಪೋಟಿ ನಡೆಯಲಿದೆ.