ಕರ್ನಾಟಕವನ್ನು ವರ್ಣಿಸುವ 'ಕರುನಾಡ ವರ್ಣ' ದೃಶ್ಯಕಾವ್ಯ ಬಿಡುಗಡೆ
ಬೆಂಗಳೂರು, ಜುಲೈ 21: 'ಕರುನಾಡ ವರ್ಣ ನಿಸರ್ಗದಲ್ಲಿದೆ ಮಲೆನಾಡ ಉಸಿರು ಈ ವನಸಿರಿಯಲ್ಲಿದೆ' ಈ ಸಾಲುಗಳೇ ಹೇಳುವಂತೆ ಕರ್ನಾಟಕದ ಸೊಬಗನ್ನು ಒಂದು ಸುಂದರ ದೃಶ್ಯಕಾವ್ಯ ಮೂಲಕ ಹರ್ಷ ನಾಲ್ವಾಡ್ ಹಾಗೂ ಅನನ್ಯ ಪ್ರಕಾಶ್ ದೇಶದ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.
ಕರುನಾಡ ವರ್ಣ ಎನ್ನುವ ಸುಂದರ ವಿಡಿಯೋ ಹಾಗೂ ಗಾಯನದ ಮೂಲಕ ಇಡೀ ಕರ್ನಾಟಕದ ಸೊಬಗನ್ನು ವಿವರಿಸಿದ್ದಾರೆ. ಕಾವೇರಿ ನದಿಯ ಹುಟ್ಟು, ಮಡಿಕೇರಿ, ಹಂಪಿ, ಶೃಂಗೇರಿ, ಚಾಮುಂಡಿ, ಜೋಗ ಜಲಪಾತ, ಬೆಂಗಳೂರು ವರ್ಣನೆಯನ್ನೂ ತುಂಬಾ ಸುಂದರವಾಗಿ ಮಾಡಿದ್ದಾರೆ.
ಒಮ್ಮೆ ಈ ವಿಡಿಯೋ ನೋಡಿದರೆ ಇಡೀ ಕರ್ನಾಟಕವನ್ನೇ ಸುತ್ತಿ ಬಂದ ಅನುಭವವಾಗುತ್ತದೆ. ಜೊತೆಗೆ ಅನನ್ಯ ಪ್ರಕಾಶ್ ಅವರ ಸುಮಧುರ ಕಂಠದಿಂದ ಗಾಯನ ಮೂಡಿ ಬಂದಿದ್ದು, ಕಿವಿಯನ್ನು ಇಂಪಾಗಿಸುತ್ತದೆ.
ಈ ಪುಣ್ಯ ಭೂಮಿಯಲ್ಲಿ ಜನಿಸಿರುವ ನಾವು ಎಷ್ಟು ಭಕ್ತಿ ತೋರಿದರು ಅದು ಅಲ್ಪ. ನಮ್ಮ ಕರ್ನಾಟಕದ ಸೊಬಗನ್ನು ಕುರಿತು ತುಂಬು ಹೃದಯದಿಂದ ತಾಯಿ ನಾಡಿಗೆ ಪ್ರೀತಿಯಿಂದ ನಮಿಸುತ್ತ, ನುಡಿಗಳಿಂದ, ಸಂಗೀತದ ಲಯದಿಂದ, ಮಧುರ ಧ್ವನಿಯಿಂದ, ಸುಂದರ ದೃಶ್ಯಾವಳಿಗಳಿಂದ, ಇಂಪುತಂಪಿನ ತಾಣಗಳ ಸೊಗಡಿನಿಂದ, ಜಲರಾಶಿ, ವನಸಿರಿ, ಹಾಗೂ ಹಸಿರಿನ ಸಂಪ್ಪತ್ತನ್ನು ಸೆರೆಹಿಡಿದಿರುವುದಾಗಿ, ಸಾಧ್ಯವಾದಷ್ಟು ನಮ್ಮ ನಾಡಿನ ಸುಂದರ ಪ್ರದೇಶಗಳನ್ನು ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಎಲ್ಲವನ್ನು ಅನುಗುಣವಾಗಿ ಸಂಕಲನಗೂಡಿಸಿ, ಈ ಕವಿತೆಯನ್ನು ಚಿತ್ರದ ಮೂಲಕ ರಂಜಿಸುವ ಪ್ರಯತ್ನ ಇದಾಗಿದೆ ಎಂದು ಹರ್ಷ ನಾಲ್ವಾಡ್ ತಿಳಿಸಿದ್ದಾರೆ.
ಇವರ ಈ ಪ್ರಯತ್ನಕ್ಕೆ ಉತ್ತಮ ಫಲಿತಾಂಶವೂ ಬಂದಿದ್ದು, ವಿಡಿಯೋ ವೀಕ್ಷಿಸಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.