ಕಾರ್ಕಳ ಕ್ಷೇತ್ರ ದಿಂದ ಕಣಕ್ಕಿಳಿಯಲಿದ್ದಾರೆ ಹರ್ಷ ಮೊಯ್ಲಿ?
ಉಡುಪಿ, ಫೆಬ್ರವರಿ 7: ಅಷ್ಟಮಠಗಳ ನಾಡು ಉಡುಪಿಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಖಾಡಕ್ಕಿಳಿಯಲು ಉತ್ಸುಕರಾಗಿರುವ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.
ಮುಖ್ಯವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಗೊಂಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ . ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಹೆಸರು ಕಾರ್ಕಳ ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
ವೀರಪ್ಪ ಮೊಯ್ಲಿ ಕಾರ್ಕಳ ಮೂಲದವರಾಗಿದ್ದು, ಸತತ ಆರು ಬಾರಿ ಇಲ್ಲಿ ಗೆಲುವು ಸಾಧಿಸಿದ್ದರು. ಜತೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವಾಗಲೇ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಪುತ್ರನಿಗೆ ಕೊಡುಗೆ
ಈ ಹಿನ್ನಲೆಯಲ್ಲಿ ತಮ್ಮ ಮಗ ಹರ್ಷ ಮೊಯ್ಲಿ ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತರಲು ಅವರು ಕಾರ್ಕಳ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆಂತರಿಕ ಚುನಾವಣೆಯಲ್ಲಿ ಮುಗ್ಗರಿಸಿದ್ದ ಹರ್ಷ
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಹರ್ಷ ಮೊಯ್ಲಿ ಅವರನ್ನು ಕಣಕ್ಕಿಳಿಸಲು ವೀರಪ್ಪ ಮೊಯ್ಲಿ ಬಹಳ ಪ್ರಯತ್ನ ಪಟ್ಟಿದ್ದರು. ಒಂದು ಹಂತದಲ್ಲಿ ಹರ್ಷ ಮೊಯ್ಲಿ ಪ್ರಚಾರ ಕೂಡ ಆರಂಭಿಸಿದ್ದರು. ಆದರೆ ಆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ ನಡೆದ ಆಂತರಿಕ ಚುನವಾಣೆಯಲ್ಲಿ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರು ಹರ್ಷ ಮೊಯ್ಲಿ ವಿರುದ್ಧ ಜಯ ಸಾಧಿಸಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಶತಾಯಗತಾಯ ಪ್ರಯತ್ನ
ಆದರೆ ಈ ಬಾರಿ ತಮ್ಮ ತವರೂರಾದ ಕಾರ್ಕಳದ ಮೂಲಕ ಹರ್ಷ ಮೊಯ್ಲಿ ಅವರನ್ನು ರಾಜಕೀಯಕ್ಕೆ ಕರೆ ತರಲು ವೀರಪ್ಪ ಮೊಯ್ಲಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಈಗಾಗಲೇ ಕಾರ್ಕಳದಲ್ಲಿರುವ ತಮ್ಮ ಆಪ್ತ ವಲಯಕ್ಕೆ ದೂರವಾಣಿ ಕರೆ ಮಾಡಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಲಿ ಶಾಸಕ ಸುನೀಲ್ ಕುಮಾರ್
ಕಾರ್ಕಳ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದ್ದು ಸುನಿಲ್ ಕುಮಾರ್ ಶಾಸಕರಾಗಿದ್ದಾರೆ. ಈ ಬಾರಿಯೂ ಬಿಜೆಪಿಯ ಅಭ್ಯರ್ಥಿಯಾಗಿ ಅವರೇ ಕಣಕ್ಕಿಳಿಯಲಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಹೆಸರು ಈ ಬಾರಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗ ಹರ್ಷ ಮೊಯ್ಲಿ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿದೆ.