ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಬಿಕೆ ಹರಿಪ್ರಸಾದ್ ನೇಮಕ
ಬೆಂಗಳೂರು, ಜನವರಿ 26: ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ಮುಖಂಡ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಹಾಗೆಯೇ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ಪ್ರಕಾಶ್ ರಾಠೋಡ್ ಅವರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಪರಿಷತ್ ವಿಪಕ್ಷಗಳ ಉಪನಾಯಕರನ್ನಾಗಿ ಕೆ.ಗೋವಿಂದ ರಾಜು ಅವರನ್ನು ನೇಮಕ ಮಾಡಲಾಗಿದೆ.
ಪರಿಷತ್ ವಿಪಕ್ಷ ನಾಯಕರಾಗಿದ್ದ ಎಸ್.ಆರ್. ಪಾಟೀಲ್ ಅವಧಿ ಮುಕ್ತಾಯವಾದ ಕಾರಣದಿಂದಾಗಿ ಖಾಲಿ ಇದ್ದ ಆ ಸ್ಥಾನಕ್ಕೆ ಕಾಂಗ್ರೆಸ್ ವರಿಷ್ಟರು ಈಗ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ. ಇನ್ನು ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಈ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿಕೃತವಾಗಿ ಪ್ರಕಟಣೆ ಮಾಡುವ ಸಾಧ್ಯತೆಗಳು ಇದೆ.
ಇನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಕವನ್ನು ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ. ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ನಸೀರ್ ಅಹ್ಮದ್ ಅಥವಾ ಸಿ.ಎಂ.ಇಬ್ರಾಹಿಂ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಇದೀಗ ಎಐಸಿಸಿ ಅಂತಿಮ ಆದೇಶ ಹೊರಡಿಸಿದ್ದು, ಹಿರಿಯ ಮುಖಂಡ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿದೆ.
ವಿರೋಧ ಪಕ್ಷದ ನಾಯಕರಾಗಿದ್ದ ಎಸ್ ಆರ್ ಪಾಟೀಲ ಹಾಗೂ ಮುಖ್ಯ ಸಚೇತಕರಾಗಿದ್ದ ನಾರಾಯಣ ಸ್ವಾಮಿ ಅವರ ಅವಧಿ ಜನವರಿ 5ಕ್ಕೆ ಮುಕ್ತಾಯವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಾಟೀಲ ಅವರಿಗೆ ಪಕ್ಷ ಟಿಕೆಟ್ ನೀಡಿರಲಿಲ್ಲ. ನಾರಾಯಣ ಸ್ವಾಮಿ ಮತ್ತೆ ಸ್ಫರ್ಧೆ ಮಾಡಲು ನಿರಾಕಾರ ಮಾಡಿದ್ದರು.
ಇನ್ನು ಹರಿಪ್ರಸಾದ್ ಅವರು ಈಡಿಗ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಲಿಂಗಾಯತ ಸಮುದಾಯದ ಎಂಬಿ ಪಾಟೀಲ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ ಕಾಂಗ್ರೆಸ್, ಇದೀಗ ಹಿಂದುಳಿದ ಸಮುದಾಯದಲ್ಲಿ ತನ್ನ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಮುದಾಯದ ನಾಯಕರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ನೀಡಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.
ರಾಜ್ಯ ವಿಧಾನ ಪರಿಷತ್ ಚುನಾವಣೆ: ಅಭ್ಯರ್ಥಿಗಳ ಘೋಷಿಸಿದ ಕಾಂಗ್ರೆಸ್
ರಾಜ್ಯ ವಿಧಾನ ಪರಿಷತ್ ನ ದಕ್ಷಿಣ ಪದವೀಧರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಜಿ.ಮಾದೇಗೌಡ ಅವರ ಪುತ್ರ ಮದ್ದೂರಿನ ಮಧು ಮಾದೇಗೌಡ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಗುರಿಕಾರ ಅವರಿಗೆ ಟಿಕೆಟ್ ನೀಡಿ ಆದೇಶ ಹೊರಡಿಸಲಾಗಿದೆ. ಬಸವರಾಜ ಗುರಿಕಾರ ಅವರು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ರಾಷ್ಟ್ರೀಯ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ನಡೆದಿದ್ದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ.
ವಿಧಾನ ಪರಿಷತ್ ನ ಈ ಎರಡೂ ಸ್ಥಾನಗಳು 2022ರ ಜುಲೈ 4ರಂದು ಖಾಲಿ ಆಗಲಿದ್ದು, ಅದಕ್ಕೂ ಮುನ್ನ ಜೂನ್ ಮೊದಲ ಅಥವಾ ಎರಡನೇ ವಾರ ಚುನಾವಣೆ ನಡೆಯಲಿದೆ. ಇನ್ನು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಕೆ.ಟಿ ಶ್ರೀಕಂಠೇಗೌಡ ಅಭ್ಯರ್ಥಿ ಆಗಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸಭಾಪತಿಯೂ ಆಗಿರುವ ಜೆಡಿಎಸ್ನ ಬಸವರಾಜ ಹೊರಟ್ಟಿ ಸ್ಫರ್ಧಿಸಲಿದ್ದಾರೆ. (ಒನ್ಇಂಡಿಯಾ ಸುದ್ದಿ)