ಕಾಂಗ್ರೆಸ್, ಬಿಜೆಪಿಗೆ ಪರಮ ಬ್ರಹ್ಮಚಾರಿ 'ಹನುಮ'ನೇ ಒಳ್ಳೆ ಬುದ್ದಿ ನೀಡಲಿ
ಜನರ ಧಾರ್ಮಿಕ ವಿಚಾರದಲ್ಲಿ ಯಾವಾಗ ರಾಜಕೀಯ ಸುಳಿಯಲಾರಂಭಿಸಿತೋ, ಆಗಲೇ ಗುಡಿಯಲ್ಲಿದ್ದ ದೇವರು ಬೀದಿಗೆ ಬಂದ್ಬಿಟ್ಟ. ಅಂತದಕ್ಕೊಂದು ಉದಾಹರಣೆಯೇ ಹುಣಸೂರಿನಲ್ಲಿ ಭಾನುವಾರ (ಡಿ 3) ನಡೆದ ಹನುಮಂತೋತ್ಸವ ಮೆರವಣಿಗೆಯಲ್ಲಿ ನಡೆದ ಅಹಿತಹಕರ ಘಟನೆಗಳು.
ದಶಕಗಳಿಂದ ಶಾಂತವಾಗಿ ನಡೆದುಕೊಂಡು ಬರುತ್ತಿದ್ದ ಹನುಮಂತೋತ್ಸವ ಎನ್ನುವ ಸರ್ವಧರ್ಮ ಕಾರ್ಯಕ್ರಮಕ್ಕೆ 'ಹಿಂದೂ-ಮುಸ್ಲಿಂ' ಅನ್ನೋ ಟ್ಯಾಗ್ ಬಂದಿದ್ದೇ ಎರಡು ವರ್ಷದ ಹಿಂದೆ ಅಂದರೆ 2015ರಲ್ಲಿ. ಅಂದು ಮೆರವಣಿಗೆ ಸಾಗುವ ದಾರಿಯಲ್ಲಿ ಬ್ಯಾನರ್, ಬಂಟಿಂಗ್ ಹಾಕುವ ವಿಚಾರದಿಂದ ಆರಂಭವಾದ ಮನಸ್ತಾಪಗಳಿಂದಾಗಿ, ಹುಣಸೂರು ಕಳೆದ ಎರಡು ವರ್ಷಗಳಿಂದ ಕೋಮು ಸೌಹಾರ್ದತೆ ಕದಡುತ್ತಿರುವ ಘಟನೆಗಳಿಗೆ ಸಾಕ್ಷಿಯಾಗಿದೆ.
ಪರಸ್ಪರ ಶಾಂತಿಯಿಂದ ಬದುಕುತ್ತಿದ್ದ ಇಲ್ಲಿನ ಜನರಿಗೆ ಈದ್-ಮಿಲಾದ್ ಒಂದೇ ಹನುಮನೂ ಒಂದೇ ಎನ್ನುವ ಭಾವನೆಯಿಂದ ಬದುಕುತ್ತಿದ್ದವರು. ಆದರೆ, ಈಗ ಇಬ್ಬರ ಮಧ್ಯೆ ಹುಳಿಹಿಂಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದು ಮಟ್ಟಿನ ಯಶಸ್ಸನ್ನು ಪಡೆದಿದ್ದಾಗಿದೆ. ಹುಣಸೂರಿನ ಹಾಲೀ ಶಾಸಕರು ಕಾಂಗ್ರೆಸ್ಸಿನ ಎಚ್ ಪಿ ಮಂಜುನಾಥ್. ಇಲ್ಲಿ ಬಿಜೆಪಿಗಿಂತ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವ ಜಾಸ್ತಿ.
ಸುಮಾರು ಎರಡು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಹನುಮಂತೋತ್ಸವ ಕಾರ್ಯಕ್ರಮವನ್ನು ಎರಡು ವರ್ಷಗಳಿಂದ ಮೈಸೂರಿನ ಸಂಸದರು ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು. ಅಸಂಖ್ಯಾತ ಯುವಕರು ಇವರ ಬೆನ್ನಹಿಂದೆ ನಿಂತರು.
ಈದ್ ಮಿಲಾದ್ ಮತ್ತು ಹನುಮ ಜಯಂತಿ ಕಾರ್ಯಕ್ರಮಗಳು ಪ್ರತೀ ವರ್ಷ ಒಂದೆರಡು ದಿನಗಳ ಅಂತರದಲ್ಲಿ ಬರುವುದರಿಂದ, ಅಂದು ಬ್ಯಾನರ್ ಹಾಕುವ ವಿಚಾರದಲ್ಲಿ ಶುರುವಾದ ಗಲಭೆಗಳು, ಇನ್ನೊಬ್ಬರ ಪೂಜಾಕೇಂದ್ರಗಳ ಮೇಲೆ ಮತ್ತೊಂದು ಕೋಮಿನ ಧ್ವಜಹಾರಿಸುವ ಮಟ್ಟಿಗೆ ಬಂದೀಗ ನಿಂತಿದೆ.
ಹುಣಸೂರಿನಲ್ಲಿ ಭಾನುವಾರ ನಡೆದ ಘಟನೆಗೆ ಯಾರು ಕಾರಣ ಎಂದು ಇಲ್ಲಿನ ತಿಳಿಮನಸ್ಸುಗಳನ್ನು ಕೇಳಿದರೆ, ಅವರು ಬೊಟ್ಟು ಮಾಡಿ ತೋರುವುದು ರಾಜ್ಯ ಸರಕಾರ ಮತ್ತು ಬಿಜೆಪಿಯತ್ತ. ಇಬ್ಬರ ಪ್ರತಿಷ್ಠೆಯಿಂದ ಹುಣಸೂರು ಸದ್ಯ ಅಶಾಂತಿಯ ಗೂಡಾಗಿದೆ. ಈ ಘಟನೆಯ ಸುತ್ತ, ಬಿಜೆಪಿ ಮತ್ತು ರಾಜ್ಯ ಸರಕಾರದ ಮೇಲೆ ಕೆಲವೊಂದು ಸಂದೇಹಗಳು ಕಾಡುವುದು ಸಹಜ. ಮುಂದೆ ಓದಿ..
ಬಿಜೆಪಿ ಮುಖಂಡರು ಹಠ ಹಿಡಿದಿದ್ದು ಯಾಕೆ
ಒಂದು ತಿಂಗಳ ಹಿಂದೆಯೇ ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ಕರೆದಿದ್ದ ಮೈಸೂರು ಜಿಲ್ಲಾಡಳಿತ ಯಾವ ದಾರಿಯಲ್ಲಿ ಮೆರವಣಿಗೆ ಹೋಗಬೇಕೆಂದು ರೂಟ್ ಮ್ಯಾಪ್ ಹಾಕಿಕೊಟ್ಟಿತ್ತು. ಜಿಲ್ಲಾಡಳಿತ ಹಾಕಿಕೊಟ್ಟಿದ್ದ ದಾರಿಯಲ್ಲೇ ಈದ್ ಮಿಲಾದ್ ಮೆರವಣಿಗೆ ಸಾಗಿತ್ತು. ಹನುಮಂತೋತ್ಸವದ ಮೆರವಣಿಗೆಯ ವಿಚಾರದಲ್ಲಿ ರಂಗನಾಥ ಬಡಾವಣೆಯಿಂದಲೇ ಆರಂಭವಾಗಬೇಕೆಂದು ಬಿಜೆಪಿ ಮುಖಂಡರು ಹಠ ಹಿಡಿದಿದ್ದು ಯಾಕೆ?
ಹದಿಮೂರು ಗಂಟೆಯ ನಂತರ ಬಿಡುಗಡೆ ಮಾಡಿದ್ದು ಸರಿಯಾ?
ಮೈಸೂರು ಸಂಸದರನ್ನು ಬಂಧಿಸಿದ ನಂತರ ಜಿಲ್ಲೆಯ ಯಾವುದಾದರೂ ಪೊಲೀಸ್ ಠಾಣೆಗೆ ಅವರನ್ನು ಕರೆದುಕೊಂಡು ಹೋಗುವ ಬದಲು, ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇನ್ನೊಂದೆಡೆ ಸುತ್ತಾಡಿಸಿ, ಹದಿಮೂರು ಗಂಟೆಯ ನಂತರ ಬಿಡುಗಡೆ ಮಾಡಿದ್ದು ಸರಿಯೇ, ಅವರೊಬ್ಬರು ಜನಪ್ರತಿನಿಧಿ ಎನ್ನುವ ಸೌಜನ್ಯ ಸರಕಾರಕ್ಕೆ ಯಾಕಿಲ್ಲ?
ಚುನಾಯಿತ ಸರಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಅದು ತಪ್ಪಿದ್ದಲ್ಲಿ ಅದನ್ನು ವಿರೋಧಿಸಲು ಕಾನೂನಿಯಲ್ಲಿ ಹಲವು ಆಯ್ಕೆಗಳಿವೆ. ಹಾಗಿದ್ದಾಗ್ಯೂ, ಮೈಸೂರು ಸಂಸದರು ಬ್ಯಾರಿಕೇಡ್ ಮೇಲೆ ಕಾರು ಚಲಾಯಿಸಿದ್ದು ಎಷ್ಟು ಸರಿ? (ವಿಡಿಯೋದಲ್ಲಿ ದೃಶ್ಯ ಸೆರೆಯಾದಂತೆ)
ದತ್ತ ಜಯಂತಿ ಮತ್ತು ಈದ್ ಮಿಲಾದ್ ಶಾಂತಿಯುತ
ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಮತ್ತು ಈದ್ ಮಿಲಾದ್ ಶಾಂತಿಯುತವಾಗಿ ನಡೆಯಿತು. ಜಿಲ್ಲಾ ಎಸ್ಪಿ ಅಣ್ಣಾಮಲೈ ತೆಗೆದುಕೊಂಡ ಮುಂಜಾಗೃತ ಕ್ರಮದಂತೆ, ಮೈಸೂರು ಜಿಲ್ಲಾಡಳಿತಕ್ಕೂ ಸರಕಾರ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡಿತ್ತೇ? ಮೆರವಣಿಗೆಯ ರೂಟ್ ಮ್ಯಾಪ್ ಹೊರತುಪಡಿಸಿ, ಹುಣಸೂರು ಪಟ್ಟಣದ ಇತರ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತೇ?
ಸಂವಿಧಾನ ವಿರೋಧಿಗಳು ಎಂದು ಬಿಂಬಿಸುವ ಪ್ಲಾನ್
ಕಾನೂನು ಮತ್ತು ಸುವ್ಯವಸ್ಥೆ ಕದಡುವುದು ಬರೀ ಒಂದು ಕೋಮಿನ ಧಾರ್ಮಿಕ ಕಾರ್ಯಕ್ರಮದ ವೇಳೆ ಮಾತ್ರ ಎಂದು ಸರಕಾರ ಹಳದಿ ಕಣ್ಣಿನಿಂದ ನೋಡುವುದೇಕೆ? ಈ ರೀತಿ ಮಾಡಿದರೆ, ಬಿಜೆಪಿಯವರು ಅದನ್ನು ವಿರೋಧಿಸುತ್ತಾರೆ, ಗಲಾಟೆ ಮಾಡುತ್ತಾರೆ, ಅವರನ್ನು ಸಂವಿಧಾನ ವಿರೋಧಿಗಳು ಎಂದು ಬಿಂಬಿಸುವ ಪ್ಲಾನ್ ಅನ್ನು ಸರಕಾರ ಹಾಕಿಕೊಂಡಿದೆಯೇ ಎನ್ನುವುದು ಜನಸಾಮಾನ್ಯರಲ್ಲಿ ಕಾಡುವ ಪ್ರಶ್ನೆ.