ಕುತೂಹಲ ಮೂಡಿಸಿದ್ದ ಹಾನಗಲ್ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಿದ ರಾಜ್ಯ ಬಿಜೆಪಿ?
ಬೆಂಗಳೂರು, ಜು. 12: ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಜಿಲ್ಲೆ ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿದೆ ಎಂದು ತಿಳಿದು ಬಂದಿದೆ. ದಿ. ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿಧನದಿಂದ ಹಾನಗಲ್ ಕ್ಷೇತ್ರ ತೆರುವಾಗಿದ್ದು, ಶೀಘ್ರದಲ್ಲಿಯೇ ಉಪ ಚುನಾವಣೆ ನಡೆಯಬೇಕಿದೆ. ಹಾನಗಲ್ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಹಲವು ಅಭ್ಯರ್ಥಿಗಳು 'ಯ' ಫಾರಂ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ರಾಜ್ಯ ಬಿಜೆಪಿಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಖಡಕ್ ನಿರ್ಧಾರ ಕೈಗೊಂಡಿದ್ದು, ಕಾರ್ಯಕರ್ತರಿಗೆ ಮಹತ್ವದ ಸಂದೇಶ ಕೊಡುವ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ಹಾನಗಲ್ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಘಟಕ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಮೂಲ-ವಲಸೆ ವಿವಾದಕ್ಕೆ ಆಸ್ಪದ ಕೊಡದಂತೆ ಹಾನಗಲ್ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದ್ದು, ಬಿಜೆಪಿ ಕಟ್ಟಿ ಬೆಳೆಸಿದ ಮುಖಂಡರಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಮೊದಲಿನಿಂದಲೂ ಹಾನಗಲ್ ವಿಧಾನಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ದಿ. ಸಿ.ಎಂ. ಉದಾಸಿ ಅವರು ಜನತಾ ಪರಿವಾರನ್ನು ತೊರೆದು ಬಿಜೆಪಿ ಸೇರಿದ ಬಳಿಕ ಸತತವಾಗಿ ಗೆಲವು ಸಾಧಿಸಿದ್ದರು.
ಎಲ್ಲ ಪಕ್ಷಗಳಿಗಿಂದ ಮೊದಲೇ ತನ್ನ ಅಭ್ಯರ್ಥಿ ಘೊಷಣೆ ಮಾಡುವ ಮೂಲಕ ಜೆಡಿಎಸ್ ಉಪ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದೆ. ಹೀಗಾಗಿ ಬಿಜೆಪಿ ಕೂಡ ತನ್ನ ಭದ್ರಕೋಟೆ ಉಳಿಸಿಕೊಳ್ಳು ನಿಟ್ಟಿನಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಅಷ್ಟಕ್ಕೂ ಹಾನಗಲ್ ಉಪ ಚುನಾವಣೆಗೆ ಬಿಜೆಪಿ ಆಯ್ಕೆ ಮಾಡಿರುವ ಅಭ್ಯರ್ಥಿ ಯಾರು? ಮುಂದಿದೆ ಮಾಹಿತಿ.
ಸಿ.ಎಂ. ಉದಾಸಿ ಮೊದಲ ಶಾಸಕ
ದಿ. ಮಾಜಿ ಸಚಿವ ಸಿ. ಎಂ. ಉದಾಸಿ ಅವರ ನಿಧನದಿಂದ ತೆರುವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಸದ್ಯದಲ್ಲಿಯೇ ಉಪ ಚುನಾವಣೆ ನಡೆಯಬೇಕಿದೆ. ದಿ. ಸಿ.ಎಂ. ಉದಾಸಿ ಅವರು ಬಿಜೆಪಿ ಸೇರಿದ ಬಳಿಕ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿತ್ತು. 2004ರಲ್ಲಿ ಜನತಾ ದಳ ತೊರೆದು ಬಿಜೆಪಿ ಸೇರುವ ಮೂಲಕ ಸಿ.ಎಂ. ಉದಾಸಿ ಅವರು ಕ್ಷೇತ್ರದಲ್ಲಿ ಬಿಜೆಪಿಯ ಮೊದಲ ಶಾಸಕರಾಗಿದ್ದರು. ಅದಕ್ಕೂ ಮೊದಲು ದಿ. ಸಿ.ಎಂ. ಉದಾಸಿ ಅವರು ಪಕ್ಷೇತರರಾಗಿ ಹಾಗೂ ಜನತಾ ಪಕ್ಷದಿಂದ ಶಾಸಕರಾಗಿದ್ದರು.
ಕಳೆದ 2004ರಿಂದ ಇಲ್ಲಿಯವರೆಗೆ ಸಿ.ಎಂ. ಉದಾಸಿ ಅವರೇ ಹಾನಗಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2013ರಲ್ಲಿ ಬಿಜೆಪಿ ತೊರೆದು ಕೆ.ಜೆ.ಪಿ. ಸೇರಿದ್ದಾಗ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮನೋಹರ್ ತಹಶೀಲ್ದಾರ್ ಅವರು ಗೆಲವು ಸಾಧಿಸಿ ಶಾಸಕರಾಗಿ ಆಯ್ಕೆ ಆಯ್ಕೆಯಾಗಿದ್ದರು. ನಂತರ 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸಿ.ಎಂ. ಉದಾಸಿ ಅವರು ಗೆಲವು ಸಾಧಿಸಿದ್ದರು. ಇದೀಗ ಹಾನಗಲ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.
ಇವರೇ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ
ಶೀಘ್ರದಲ್ಲಿಯೇ ಘೊಷಣೆ ಆಗಲಿರುವ ಹಾನಗಲ್ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ ಎಂಬ ಮಾಹಿತಿ ಬಂದಿದೆ. ಬಿಜೆಪಿ ಹಿರಿಯ ನಾಯಕ ಹಾಗೂ ಆರಂಭದಿಂದಲೂ ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಕಲ್ಯಾಣ್ ಕುಮಾರ್ ಶೆಟ್ಟರ್ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಘಟಕ ಅಂತಿಮ ತೀರ್ಮಾನ ಮಾಡಿದ್ದು, ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಿ 'ಕೇಂದ್ರ ಬಿಜೆಪಿ ಚುನಾವಣಾ ಸಮಿತಿ'ಗೆ ಪಟ್ಟಿ ರವಾನಿಸಲಿದೆ. ಅಲ್ಲಿ ಅಧಿಕೃತವಾಗಿ ಕಲ್ಯಾಣ್ ಕುಮಾರ್ ಶೆಟ್ಟರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿದೆ.
ಕಲ್ಯಾಣ ಶೆಟ್ಟರ್ ಪರಿಚಯ
ಕಲ್ಯಾಣ್ ಶೆಟ್ಟರ್ ಅವರು ಮೂಲತಃ ಆರ್ಎಸ್ಎಸ್ ಕಾರ್ಯಕರ್ತರು. ಕಳೆದ 40 ವರ್ಷಗಳಿಂದ ಆರ್ಎಸ್ಎಸ್ನಲ್ಲಿದ್ದಾರೆ. ಜೊತೆಗೆ ಕಳೆದ ಸುಮಾರು 30 ವರ್ಷಗಳಿಂದ ಬಿಜೆಪಿಯಲ್ಲಿದ್ದು, ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತರಬೇತಿ ಕ್ಯಾಂಪ್ಗಳಲ್ಲಿ ಭಾಗವಹಿಸಿ ಹಿಂದೂತ್ವವಾದವನ್ನು ಮೈಗೂಡಿಸಿಕೊಂಡಿರುವ ಅವರು, ಸಂಘದ ಪ್ರಮುಖರೊಂದಿಗೆ ಮೊದಲಿನಿಂದಲೂ ನಿಕಟ ಸಂಪರ್ಕ ಹೊಂದಿದ್ದಾರೆ.
ಜೊತೆಗೆ 1996ರಲ್ಲಿಯೇ ಹಾನಗಲ್ ಪುರಸಭೆಗೆ ಬಿಜೆಪಿಯ ಮೊದಲ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಾಲೂಕಿನಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದರು. 2007ರಲ್ಲಿ ಎರಡನೇ ಬಾರಿಗೆ ಪುರಸಭೆಗೆ ಆಯ್ಕೆಯಾಗಿ, ನಂತರ 2008ರಲ್ಲಿ ಹಾನಗಲ್ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಮೂರನೇ ಬಾರಿಗೆ ಹಾನಗಲ್ ಪುರಸಭೆಗೆ ಬಿಜೆಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೊದಲ ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾಗ ಸ್ವತಃ ಬಿ.ಎಸ್. ಯಡಿಯೂರಪ್ಪ ಅವರು ಈಗಿನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಹಾನಗಲ್ಲಿಗೆ ಬಂದು ಕಲ್ಯಾಣ್ ಕುಮಾರ್ ಶೆಟ್ಟರ್ರನ್ನು ಸನ್ಮಾನಿಸಿದ್ದರು.
ಸಹಕಾರಿ ಕ್ಷೇತ್ರದಲ್ಲಿ ಶೆಟ್ಟರ್
ರಾಜಕೀಯದ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿಯೂ ಕಲ್ಯಾಣ್ ಕುಮಾರ್ ಶೆಟ್ಟರ್ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ಹಾವೇರಿ ಜಿಲ್ಲೆ ಸಹಕಾರ ಯುನಿಯನ್ ನಿಯಮಿತದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 2013 ಹಾಗೂ 2018ರಲ್ಲಿ ಎರಡು ಬಾರಿ ರಾಜ್ಯಮಟ್ಟದ ಸಹಕಾರಿ ಸಪ್ತಾಹವನ್ನು ನಡೆಸಿದ್ದಾರೆ. ಜೊತೆಗೆ ಹಾವೇರಿ ಜಿಲ್ಲೆಗೆ ಈಗಲೂ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ ಪ್ರತ್ಯೇಕವಾಗಬೇಕು ಎಂಬ ಹೋರಾಟ ಮಾಡುತ್ತಿದ್ದಾರೆ.
ಇದಲ್ಲದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ನಿಟ್ಟಿನಲ್ಲಿ ಬಿಜೆಪಿ ಕೈಗೊಂಡಿದ್ದ ಹೋರಾಟದಲ್ಲಿ ಕಲ್ಯಾಣ್ ಕುಮಾರ್ ಶೆಟ್ಟರ್ ಅವರು ಭಾಗಿಯಾಗಿದ್ದರು. ಈ ಎಲ್ಲ ಕಾರಣಗಳಿಂದ ಅವರನ್ನು ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ.
Recommended Video
ಪಕ್ಷದ ತೀರ್ಮಾನಕ್ಕೆ ಬದ್ದ ಎಂದ ಶೆಟ್ಟರ್
ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಕಲ್ಯಾಣ್ ಕುಮಾರ್ ಶೆಟ್ಟರ್ ಅವರನ್ನು 'ಒನ್ಇಂಡಿಯಾ ಕನ್ನಡ' ಸಂಪರ್ಕಿಸಿದಾಗ, "ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನಗೆ ಸಂಘ ಶಿಸ್ತು ಕಲಿಸಿದೆ. ಹೀಗಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ" ಎಂದಿದ್ದಾರೆ. ಆ ಮೂಲಕ ತಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧನಾಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ.
ಕಲ್ಯಾಣ್ ಕುಮಾರ್ ಶೆಟ್ಟರ್ ಅವರೊಂದಿಗೆ ಹಾವೇರಿಯ ಮಾಜಿ ಶಾಸಕ ಶಿವರಾಜ್ ಸಜ್ಜನರ್, ಮಾಜಿ ಸಂಸದ ಮಂಜನಾಥ್ ಕುನ್ನೂರ್ ಹಾಗೂ ಬಳ್ಳಾರಿ ಅವರೂ ಕೂಡ ತೀವ್ರ ಪೈಪೋಟಿ ನಡೆಸಿದ್ದಾರೆ.