ಹಾನಗಲ್ ನಲ್ಲಿ ಬಿಜೆಪಿ ಸೋಲು: ಬೊಮ್ಮಾಯಿ ಆಡಳಿತ ವಿರುದ್ಧ ಸಿಡಿದೇಳಲಿದೆಯಾ ಮೂಲ ಬಿಜೆಪಿ ನಾಯಕರು?
ಬೆಂಗಳೂರು, ನ. 02: ತವರು ನೆಲದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಸೋಲು ಕಂಡಿದ್ದಾರೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾಲಿಗೆ ಈ ಸೋಲು ನುಂಗಲಾರದ ಬಿಸಿ ತುಪ್ಪವಾಗಿದೆ. ಮಾತ್ರವಲ್ಲ, ಬಸವರಾಜ ಬೊಮ್ಮಾಯಿ ವಿರುದ್ಧ ಮುನಿಸಿಕೊಂಡು ಅಂತರ ಕಾಯ್ದುಕೊಂಡಿರುವ ಬಿಜೆಪಿ ಮೂಲ ನಾಯಕರು ಒಳಗೊಳಗೆ ಖುಷಿ ಪಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ನಂಬಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಹೋಗಲು ಅಸಾಧ್ಯ ಎಂಬ ಸಂದೇಶ ಹೈಕಮಾಂಡ್ ಗೆ ರವಾನಿಸಲು ಮೂಲ ಬಿಜೆಪಿ ನಾಯಕರ ದಂಡು ಅದಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದ ಮೂಲ ಬಿಜೆಪಿ ನಾಯಕರು ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು. ಅದರಲ್ಲಿ ಮುನ್ನೆಲೆಗೆ ಬಂದಿದ್ದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರು. ಮೂಲ ಬಿಜೆಪಿ ನಾಯಕ ಅರವಿಂದ ಬೆಲ್ಲದ್. ವಿಪರ್ಯಾಸವೆಂದರೆ ಯಾರೂ ಊಹೆ ಮಾಡದ ರೀತಿಯಲ್ಲಿ ಜನತಾ ದಳ ಹಿನ್ನೆಲೆ ಹೊಂದಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿತ್ತು. ಬೊಮ್ಮಾಯಿ ಆಡಳಿತದಲ್ಲಿ ಕನಿಷ್ಠ ಸಚಿವ ಸ್ಥಾನವೂ ಸಿಗದೇ ಮೂಲ ಬಿಜೆಪಿ ಕೆಲ ನಾಯಕರ ದಂಡು ಮುನಿಸಿಕೊಂಡಿತ್ತು. ಆದರೆ ಆ ಮನಿಸು ಈಗ ಸ್ಫೋಟಿಸುವ ಎಲ್ಲಾ ಬೆಳವಣಿಗೆ ನಡೆಯುತ್ತಿವೆ. ಅದಕ್ಕೆ ನಾಂದಿ ಹಾಡಿದ್ದು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು.
ಬಸವರಾಜ ಬೊಮ್ಮಾಯಿ ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರು. ಆಡಳಿತ, ಅನುಭವದ ವಿಚಾರದಲ್ಲಿ ನಮಗಿಂತಲೂ ಕಿರಿಯ. ಇಂತಹ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಗಿದೆ ಎಂದು ಕೆಲವರು ಮುನುಸು ವ್ಯಕ್ತಪಡಿಸಿದ್ದರು. ಈಗ ಹಾನಗಲ್ ಕ್ಷೇತ್ರ ಸ್ವತಃ ಸಿಎಂ ಅವರ ತವರು ಜಿಲ್ಲೆಯಾಗಿದ್ದರೂ, ಅಲ್ಲಿಯೇ ಪಕ್ಷ ಸೋಲನ್ನಪ್ಪಿದೆ. ಹೀಗಾಗಿ ಈ ವಿಚಾರ ಮುಂದಿಟ್ಟುಕೊಂಡು ಅತೃಪ್ತ ನಾಯಕರ ದಂಡೊಂದು ಹೈಕಮಾಂಡ್ ಗೆ ಮಾಹಿತಿ ನೀಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಚುನಾವಣೆಯ ಫಲಿತಾಂಶ ಬಸವರಾಜ ಬೊಮ್ಮಾಯಿ ಅವರ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಣಯಲಿಸಲಿದೆ ಎಂದು ಲೆಕ್ಕಚಾರ ಕೂಡ ಆರಂಭವಾಗಿದೆ.
ಪ್ರಚಾರದಲ್ಲೂ ಅಂತರ ಕಾಯ್ದುಕೊಂಡಿದ್ದರು
ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಆ ಜಾಗಕ್ಕೆ ಟವಲ್ ಹಾಕಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ನಿಷ್ಠಾವಂತ ನಾಯಕ ವರ್ಗದಲ್ಲಿ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್ ಸೇರಿದಂತೆ ಮೂಲ ಬಿಜೆಪಿ ನಾಯಕರು ಆರಂಭದಿಂದಲೂ ಬೊಮ್ಮಾಯಿ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಈ ಮಧ್ಯೆ ಎದುರಾಗಿದ್ದ ಎರಡು ಕ್ಷೇತ್ರಗಳ ಉಪಚುನಾವಣಾ ಪ್ರಚಾರದಿಂದಲೂ ಕೆಲವು ಮೂಲ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡು ಬಸವರಾಜ ಬೊಮ್ಮಾಯಿಗೆ ಇರುಸುಮುರುಸು ಉಂಟು ಮಾಡಿದ್ದರು. ಇಂತಹ ಸಂದರ್ಭದಲ್ಲಿ ಬೊಮ್ಮಾಯಿ ಅವರಿಗೆ ಸಾಥ್ ನೀಡಿದ್ದು ಎಂದರೆ ಕಾಂಗ್ರೆಸ್ನಿಂದ ವಲಸೆ ಬಂದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ.
ಇದನ್ನು ಅರಿತಿದ್ದ ಬಸವರಾಜ ಬೊಮ್ಮಾಯಿ ಅವರು ವಾರಕ್ಕೂ ಹೆಚ್ಚು ಕಾಲ ಹಾನಗಲ್ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದರು. ಕ್ಷೇತ್ರದಾದ್ಯಂತ ಸಂಚಾರ ಮಾಡಿದರು. ಮಠಮಾನ್ಯಗಳನ್ನು ಸುತ್ತಾಡಿದರು. ನಾನು ನಿಮ್ಮ ಊರಿನ ಅಳಿಯ ನನ್ನ ಕೈಬಿಡಬೇಡಿ ಎಂದು ಮನವಿ ಮಾಡಿದರು. ಬಸವರಾಜ ಬೊಮ್ಮಾಯಿ ಅವರ ಕಾರಣಕ್ಕಾಗಿಯೇ ಬಿಜೆಪಿ ಅಭ್ಯರ್ಥಿ ಇಷ್ಟು ಮತಗಳಿಸಲು ಕಾರಣವಾಯಿತು. ಇಲ್ಲದಿದ್ದರೆ ಸೋಲಿನ ಅಂತರ 25,000 ಮತಗಳಿಗಿಂತ ಹೆಚ್ಚು ಇರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬೊಮ್ಮಾಯಿ ನೆಮ್ಮದಿಗೆ ಭಂಗ ಬರಲಿದೆಯೇ?
ಆಡಳಿತ ರೂಢ ಸರ್ಕಾರವಿದ್ದರೂ ಅದರಲ್ಲೂ ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ಸೋತಿರುವುದು ಬೊಮ್ಮಾಯಿ ಆಡಳಿತ ನೆಮ್ಮದಿಯಾಗಿರುತ್ತದೆ ಎಂದು ಹೇಳಲು ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದೆ ಎಂದೇ ಹೇಳಲಾಗುತ್ತಿದೆ. ಹಾನಗಲ್ ನಲ್ಲಿ ಗೆಲುವು ಸಾಧಿಸಿದ್ದಲ್ಲಿ ಅದರ ಪೂರ್ಣ ಕ್ರೆಡಿಟ್ ಬಸವರಾಜ ಬೊಮ್ಮಾಯಿಗೆ ಸಿಗುತ್ತಿತ್ತು. ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕೇವಲ ಅದು ಪಕ್ಷದ ಸೋಲು ಮಾತ್ರವಲ್ಲ, ಬಸವರಾಜ ಬೊಮ್ಮಾಯಿ ಅವರ ಸೋಲು ಎಂಬುದು ಮೂಲ ಬಿಜೆಪಿಗರ ಲೆಕ್ಕಾಚಾರ. ಉಪ ಚುನಾವಣೆ ಸಾರ್ವತ್ರಿಕ ಚುನಾವಣೆ ನಿರ್ಣಯ ಮಾಡುವುದಿಲ್ಲ ಎಂಬ ಲೆಕ್ಕಾಚಾರ ಹಾಕಿದ್ದರೂ, ವಾಸ್ತವದಲ್ಲಿ ಬೊಮ್ಮಾಯಿ ಪಾಲಿಗೆ ಈ ಸೋಲು ಹೊಡೆತ ಕೊಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
Recommended Video