ಡಿ.ಕೆ.ಶಿವಕುಮಾರ್ ಪ್ರಾರ್ಥನೆಗೆ ಕಣ್ಬಿಟ್ಟ ಗ್ರಾಮ ದೇವತೆ, ಹರಕೆ ಸಲ್ಲಿಕೆ
ಭಾರೀ ದೈವಭಕ್ತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೋಗದ ದೇವಾಲಯಗಳಿಲ್ಲ. ಹೆಜ್ಜೆಹೆಜ್ಜೆಗೂ ದೇವರು, ದೈವವನ್ನು ನಂಬುವ ಡಿಕೆಶಿ ಮತ್ತವರ ಕುಟುಂಬ, ಹಲವು ಪೂಜೆ/ಸೇವೆಗಳನ್ನು ಸಲ್ಲಿಸುತ್ತಲೇ ಬರುತ್ತಿದೆ.
ಡಿಕೆಶಿಗೆ ಮತ್ತು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಡಿಕೆಶಿಗೆ ಫಲಿತಾಂಶ ಬೇವು ಬೆಲ್ಲವಾಗಿದ್ದರೂ, ಹಾನಗಲ್ನಲ್ಲಿನ ಜಯ ಹೊಸ ಹುರುಪನ್ನು ನೀಡಿದ್ದಂತೂ ಹೌದು. ಹಾವೇರಿ ಜಿಲ್ಲಾ ವ್ಯಾಪ್ತಿಯ ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜಿಲ್ಲಾ ವ್ಯಾಪ್ತಿಗೆ ಬರುವಂತದ್ದು.
ಹಾಗಾಗಿ, ಅಲ್ಲಿ ಜಯಗಳಿಸಲು ವಿಶೇಷ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದ್ದರು. ಅದರಲ್ಲೂ, ಡಿಕೆಶಿ ಬಣದ ಪರಿಶ್ರಮ ಎದ್ದು ಕಾಣುತ್ತಿತ್ತು. "ಇಡೀ ಬೊಮ್ಮಾಯಿ ಸರಕಾರವೇ ಹಾನಗಲ್ನಲ್ಲಿ ಬೀಡು ಬಿಟ್ಟಿತ್ತು, ಆದರೂ, ಜನರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಅದಕ್ಕಾಗಿ, ಅವರಿಗೆ ಧನ್ಯವಾದ ತಿಳಿಸುತ್ತೇನೆ. ಯಡಿಯೂರಪ್ಪನವರ ಕಣ್ಣೀರು ಅವರ ಪಕ್ಷವನ್ನು ಕೊಚ್ಚಿಸಿಕೊಂಡು ಹೋಗಲಿದೆ"ಎಂದು ಡಿಕೆಶಿ ಗೆಲುವಿನ ನಂತರ ಪ್ರತಿಕ್ರಿಯೆ ನೀಡಿದ್ದರು.
ಹಾನಗಲ್ನಲ್ಲಿ ಬಿಜೆಪಿಗೆ ಮುಖಭಂಗ: ಈ ಇಬ್ಬರನ್ನು ನಂಬಿಕೆಟ್ಟ ಬೊಮ್ಮಾಯಿ?
ಹಾನಗಲ್ ನಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ ವಿಜಯಕ್ಕಾಗಿ, ಡಿ.ಕೆ.ಶಿವಕುಮಾರ್ ದೇವರಿಗೆ ವಿಶೇಷ ಪ್ರಾರ್ಥನೆ/ಹರಕೆಯನ್ನು ಸಲ್ಲಿಸಿದ್ದರು. ದೇವರು ಅವರ ಪ್ರಾರ್ಥನೆಗೆ ತಥಾಸ್ತು ಅಂದಿದ್ದರಿಂದ ಡಿಕೆಶಿ ಟೆಂಪಲ್ ರನ್ ಮಾಡಿದ್ದಾರೆ.
ಹಾನಗಲ್ ನಗರದ ಶಕ್ತಿದೇವತೆ ಶ್ರೀಗ್ರಾಮದೇವಿ ಹಾದಗಟ್ಟಿಗೆ ವಿಶೇಷ ಪೂಜೆ
ದೀಪಾವಳಿ ಅಮವಾಸ್ಯೆಯ ದಿನವಾದ ಇಂದು (ನ 4) ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ, ಅಲ್ಲಿಂದ ರಸ್ತೆಯ ಮೂಲಕ ಹಾನಗಲ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಗಿದ್ದಾರೆ. ಅಲ್ಲಿ ಹಾನಗಲ್ ನಗರದ ಶಕ್ತಿದೇವತೆ ಶ್ರೀಗ್ರಾಮದೇವಿ ಹಾದಗಟ್ಟಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಅಲ್ಲಿಂದ, ಶ್ರೀ.ಕುಮಾರೇಶ್ವರ ವಿರಕ್ತಿ ಮಠ ಮತ್ತು ಕಾಶ್ಮೀರಿ ದರ್ಗಾಕ್ಕೂ ಡಿಕೆಶಿ ಭೇಟಿ ನೀಡಿ ಪೂಜೆ ಸಲ್ಲಿಸಿ ಹೊರಟಿದ್ದಾರೆ.
ಗ್ರಾಮ ದೇವತೆಯ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ
ಪಕ್ಷದ ಅಭ್ಯರ್ಥಿಯು ವಿಜಯ ಸಾಧಿಸಿದರೆ ನಿನ್ನ ದರ್ಶನ ಪಡೆಯುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹರಕೆ ಹೊತ್ತಿದ್ದರು. ಅದರಂತೇ, ಗ್ರಾಮ ದೇವತೆಯ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ ತಮ್ಮ ಹರಕೆಯನ್ನು ಪೂರೈಸಿ, ಕರ್ಪೂರ ಹಚ್ಚಿ ಈಡುಗಾಯಿ ಹೊಡೆದಿದ್ದಾರೆ. ಡಿಕೆಶಿ ಭೇಟಿಯ ವೇಳೆ ಸ್ಥಳೀಯ ಮುಖಂಡರು ಡಿಕೆಶಿಗೆ ಸಾಥ್ ನೀಡಿದ್ದಾರೆ. ಸಿಂಧಗಿಯಲ್ಲೂ ಗೆಲುವಿಗಾಗಿ ಡಿಕೆಶಿ ಹರಕೆ ಹೊತ್ತಿದ್ದರೋ ಎನ್ನುವುದು ತಿಳಿದು ಬಂದಿಲ್ಲ.
ಯಾವ ಬಣದ ಪರಿಶ್ರಮದಿಂದ ಹಾನಗಲ್ ಕ್ಷೇತ್ರದ ಗೆಲುವು
ಹಾನಗಲ್ ಕ್ಷೇತ್ರದ ಗೆಲುವು ಯಾವ ಬಣದ ಪರಿಶ್ರಮದಿಂದ ಬಂದಿದ್ದು ಎನ್ನುವ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಂತೂ ಹಾನಗಲ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಹಾನಗಲ್ ಕ್ಷೇತ್ರದ ಗೆಲುವು ಕಾಂಗ್ರೆಸ್ಸಿಗೆ ಬೋನಸ್ ಮತ್ತು ಸಿಂಧಗಿಯಲ್ಲಿ ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್, ಈ ಬಾರಿ ಜೆಡಿಎಸ್ ಅನ್ನು ಠೇವಣಿ ಕಳೆದುಕೊಳ್ಳುವಂತೆ ಮಾಡಿದೆ. ಯಾಕೆಂದರೆ, ಉಪ ಚುನಾವಣೆ ನಡೆದ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್, ಕಳೆದ ಚುನಾವಣೆಯಲ್ಲಿ ಗೆದ್ದಿರಲಿಲ್ಲ.
ಮೈಲಾರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಅನ್ನು ನೀಡಿದ್ದ ಡಿ.ಕೆ.ಶಿವಕುಮಾರ್
ಇಡಿ/ಐಟಿ ದಾಳಿಯಿಂದ ಹೈರಾಣವಾಗಿರುವಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹಲವು ಹರಕೆ ಹೊತ್ತಿರುವುದು ತಿಳಿದಿರುವ ವಿಚಾರ. ಮೈಲಾರ ದೇವಾಲಯದ ಮೇಲೆ ಹೆಲಿಕಾಪ್ಟರ್ನಲ್ಲಿ ಹೋಗಿದ್ದಕ್ಕಾಗಿ ಈ ಕಷ್ಟವನ್ನು ಅನುಭವಿಸುತ್ತಿದ್ದೀರಾ ಎಂದು ಅಲ್ಲಿನ ಅರ್ಚಕರು ಹೇಳಿದಾಗ, ಮೈಲಾರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಅನ್ನು ಡಿ.ಕೆ.ಶಿವಕುಮಾರ್ ಹರಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇದಲ್ಲದೇ, ನಾಡಿನ ಹಲವು ತೀರ್ಥ ಕ್ಷೇತ್ರಗಳಿಗೆ ಡಿ.ಕೆ.ಶಿವಕುಮಾರ್ ಹೋಗುತ್ತಲೇ ಇರುತ್ತಾರೆ.
2018ರ ನಂತರ ನಡೆದ ಉಪ ಚುನಾವಣೆ: 'ಸಾವಿನ ಅನುಕಂಪಕ್ಕೆ' ಬಂದ ಮ್ಯಾನ್ಡೇಟ್ ಏನು?