ಹಯಾನ್ ಚಂಡಮಾರುತ: ಕರ್ನಾಟಕದಲ್ಲೂ ಮಳೆ
ಇದರ ತಾತ್ಪರ್ಯ ಇಷ್ಟೇ. ಇನ್ನೊಂದು ವಾರದಲ್ಲಿ ರಾಜ್ಯದೆಲ್ಲೆಡೆ ಮಳೆಯಾಗಲಿದೆ. ಇನ್ನು ಈ ಅಕಾಲಿಕ ವರ್ಷಧಾರೆಯಿಂದ ಈ ಬಾರಿ ಚಳಿ ವಿಪರೀತವಾಗುವುದು ನಿಶ್ಚಿತ ಎಂದು ತಜ್ಞರು ತಿಳಿಸಿದ್ದಾರೆ.
ನವೆಂಬರ್ 17ರಿಂದ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲೂ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ವಿಎಸ್ ಪ್ರಕಾಶ್ ತಿಳಿಸಿದ್ದಾರೆ.
ಆದರೆ ಇದು ಬೆಳೆ ಕಟಾವು ಹಂಗಾಮ ಆಗಿರುವುದರಿಂದ ಬೆಳೆ ನಾಶದ ಭೀತಿ ರೈತರನ್ನು ಆವರಿಸಿದೆ. ಈಗಾಗಲೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ಇದು ನ. 17ರ ನಂತರ ತೀವ್ರತೆ ಪಡೆದುಕೊಂಡು ಉತ್ತರ ಒಳನಾಡಿನಲ್ಲಿ 10 ಮಿಮೀ ಮಳೆ ಮತ್ತು ದಕ್ಷಿಣ ಒಳನಾಡಿನಲ್ಲಿ 20-30 ಮಿಮೀ ಮಳೆಯಾಗುವ ಸಾಧ್ಯತೆಗಳಿವೆ.
ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದಲ್ಲಿ ಉತ್ತಮ ಮಳೆಯಾಗುವ ಅಂದಾಜಿದೆ. ಬೆಂಗಳೂರಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು ಮತ್ತು ಶ್ರೀಲಂಕಾದಲ್ಲೂ ಮಳೆಯಾಗಲಿದೆ.
ಜೋಳ, ಕಡಲೆ, ಸೂರ್ಯಕಾಂತಿ, ಹತ್ತಿ, ರಾಗಿ, ಗೋಧಿ, ಸಜ್ಜೆ ಮುಂತಾದ ಹಿಂಗಾರಿನ ಬೆಳೆಗಳ ಕಟಾವು ಸಮಯ. ಈ ಸಂದರ್ಭದಲ್ಲಿ ಮಳೆ ಬಿದ್ದರೆ ಅದರಿಂದ ರೈತರಿಗೆ ಅನಾನುಕೂಲವೇ ಹೆಚ್ಚು. ಜೋರು ಮಳೆ ನಿರಂತರ 3-4 ದಿನ ಕಲಾಡಿದರೆ ಕಟಾವು ಯೋಗ್ಯ ಬೆಳೆ ನೆಲಕಚ್ಚುತ್ತದೆ. ಜತೆಗೆ, ಮೆಕ್ಕೆಜೋಳ, ರಾಗಿ ಬೆಳೆಗಳಲ್ಲಿನ ತೆನೆಗಳಲ್ಲೇ ಮೊಳಕೆ ಒಡೆಯಲಾರಂಭಿಸುತ್ತದೆ. ಹೀಗಾಗಿ ರೈತರಿಗೆ ಬಿರುಮಳೆ ಸುತರಾಂ ಬೇಡವಾಗಿದೆ. ನೋಡೋಣ 17ರ ನಂತರ ಏನಾಗುತ್ತದೆ.