ಶ್ರೀಕಿ ಎನ್ಕೌಂಟರ್ ಸಾಧ್ಯತೆ: ಕಾಂಗ್ರೆಸ್ ವಕ್ತಾರ
ಬೆಂಗಳೂರು, ನವೆಂಬರ್ 16: ಬಿಟ್ಕಾಯಿನ್ ಹಗರಣ ಸಂಬಂಧ ಪ್ರಕರಣದ ರೂವಾರಿ ಎನಿಸಿಕೊಂಡಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಎನ್ಕೌಂಟರ್ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಬಿಟ್ಕಾಯಿನ್ ವಿಚಾರವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ, ರಾಜ್ಯಮಟ್ಟದ ಎಲ್ಲ ನಾಯಕರು ಬೆಜೆಪಿಯ ಬೆವರಳಿಸುತ್ತಿದ್ದರೆ, ರಾಹುಲ್ ಗಾಂಧಿ ಸಹಿತ ರಾಷ್ಟ್ರ ಮಟ್ಟದ ನಾಯಕರೂ ಬಿಟ್ಕಾಯಿನ್ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಅವರು ನಿರಂತರವಾಗಿ ತಮ್ಮ ಟ್ವೀಟ್ಗಳ ಮೂಲಕ ಬಿಜೆಪಿಯನ್ನು ತಿವಿಯುತ್ತಲೇ ಇದ್ದಾರೆ. ಈ ಮಧ್ಯೆ ಬಿಜೆಪಿ ಇತ್ತೀಚೆಗೆ ತಿರುಗಿಬಿದ್ದಿದ್ದು, ಕಾಂಗ್ರೆಸ್ ಆರೋಪಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತಿದೆ.
ಈ ಮಧ್ಯೆ ಮಂಗಳವಾರ ಟ್ವೀಟ್ ಮಾಡಿರುವ ಕೆಪಿಸಿಸಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ, ಶ್ರೀಕಿಯನ್ನು ಪೊಲೀಸರು ಎನ್ಕೌಂಟರ್ ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಉತ್ತರ ಪ್ರದೇಶದ ಅಪರಾಧಗಳಲ್ಲಿ ತನ್ನ ಪಾತ್ರ ಬಹಿರಂಗವಾಗದಂತೆ ಅಲ್ಲಿನ ಬಿಜೆಪಿ ಸರ್ಕಾರ ಪೊಲೀಸ್ ಎನ್ಕೌಂಟರ್ ಮುಖೇನ ಆರೋಪಿ ವಿಕಾಸ್ ದುಬೆಯ ಹತ್ಯೆಯಂತೆಯೇ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಪಕ್ಷದವರ ರಕ್ಷಣೆಗೋಸ್ಕರ ಬಿಟ್ಕಾಯಿನ್ ಸ್ಕ್ಯಾಂಡಲ್ನ ಪ್ರಮುಖ ಆರೋಪಿ ಶ್ರೀಕಷ್ಣ @ ಶ್ರೀಕಿಯ ಪೊಲೀಸ್ ಎನ್ಕೌಂಟರ್ ಮಾಡುವ ಸಾಧ್ಯತೆ ಇದೆ" ಎಂದು ಸಂಕೇತ್ ಏಣಗಿ ಟ್ವೀಟ್ ಮಾಡಿದ್ದಾರೆ.
ಶ್ರಿಕಿಗೆ ಭದ್ರತೆ ನೀಡಿ:
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನ.15ರಂದು ಸರಣಿ ಟ್ವೀಟ್ಗಳನ್ನು ಮಾಡಿ ಶ್ರೀಕಿಗೆ ಸೂಕ್ತ ಪೊಲೀಸ್ ಭಧ್ರತೆ ನೀಡಿ ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ವಕ್ತಾರ ಶ್ರೀಕಿಯ ಎನ್ಕೌಂಟರ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ಬಿಟ್ಕಾಯಿನ್ ಹಗರಣದ ಸೂತ್ರದಾರನೆನ್ನಲಾದ ಶ್ರೀಕೃಷ್ಣ/ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಷಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ" ಎಂದು ಸಿದ್ದರಾಮಯ್ಯ ಹೇಳಿದ್ದರು.
ಬಿಟ್ಕಾಯಿನ್ ಪ್ರಕರಣ ತಂತ್ರಜ್ಞಾನ ಅವಲಂಬಿಸಿರುವ 'ಬಿಳಿಕಾಲರ್ ಅಪರಾಧ'. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯವಿದೆ ಎಂದು ಸಿದ್ದರಾಮಯ್ಯ ಅವರೂ ಆತಂಕ ವ್ಯಕ್ತಪಡಿಸಿದ್ದರು.
Recommended Video