ರಾಜ್ಯದಲ್ಲಿ ಮತ್ತೆ ಎಚ್1ಎನ್1 (ಹಂದಿ ಜ್ವರ) ಭೀತಿ: ಇಬ್ಬರು ಸಾವು
ಬೆಂಗಳೂರು, ಫೆಬ್ರವರಿ 26: ಕೊರೊನಾ ವೈರಸ್ ಭೀತಿ ವ್ಯಾಪಕವಾಗುತ್ತಿರುವ ನಡುವೆಯೇ ರಾಜ್ಯದಲ್ಲಿ ಎಚ್1ಎನ್1 ಸೋಂಕಿನ ಭೀತಿ ಮತ್ತೆ ಎದುರಾಗಿದೆ. ಹಂದಿ ಜ್ವರ ಎಂದು ಕರೆಯಲಾಗುವ ಈ ಸೋಂಕಿಗೆ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದು, ಮಹಾಮಾರಿ ವೈರಸ್ ಮತ್ತೆ ಆತಂಕ ಉಂಟುಮಾಡಿದೆ.
ತುಮಕೂರು ಮತ್ತು ದಾವಣೆಗೆರೆ ಜಿಲ್ಲೆಗಳಲ್ಲಿ ತಲಾ ಒಬ್ಬರು ಎಚ್1ಎನ್1 ಸೋಂಕಿಗೆ ಬಲಿಯಾಗಿರುವುದು ವರದಿಯಾಗಿದೆ. ಬೇಸಿಗೆ ಕಾಲ ಶುರುವಾಗಿರುವುದರಿಂದ ಎಚ್1ಎನ್1 ಮತ್ತಷ್ಟು ವ್ಯಾಪಿಸುವ ಭೀತಿ ಎದುರಾಗಿದೆ.
ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್ವೇರ್ ಕಂಪೆನಿ
ಕೆಲವು ದಿನಗಳ ಹಿಂದಷ್ಟೇ, ಸ್ಯಾಪ್ ಇಂಡಿಯಾ ಸಾಫ್ಟ್ವೇರ್ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿನ ಇಬ್ಬರು ಉದ್ಯೋಗಿಗಳಲ್ಲಿ ಎಚ್1ಎನ್1 ಇರುವುದು ದೃಢಪಟ್ಟಿತ್ತು. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದಾದ್ಯಂತ ಇರುವ ತನ್ನ ಎಲ್ಲ ಕಚೇರಿಗಳನ್ನೂ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಉದ್ಯೋಗಿಗಳನ್ನು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ.
ರಾಜ್ಯದಲ್ಲಿ ಕಳೆದ ವರ್ಷ ಎಚ್1ಎನ್1 ಸೋಂಕಿನಿಂದ 96 ಮಂದಿ ಮೃತಪಟ್ಟಿದ್ದರು. ಈಗ ವರ್ಷದ ಅರಂಭದಲ್ಲಿಯೇ ಇಬ್ಬರು ಬಲಿಯಾಗಿದ್ದಾರೆ. ಎಚ್1ಎನ್1 ಶಂಕೆ ವ್ಯಕ್ತವಾದಾಗ ರೋಗಿಗಳ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಇದುವರೆಗೂ ರಾಜ್ಯದಲ್ಲಿ 1823 ಶಂಕಿತ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 192 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸುಪ್ರೀಂಕೋರ್ಟಿನ 6 ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು?
ಬೆಂಗಳೂರಿನಲ್ಲಿ ಅತಿ ಹೆಚ್ಚು, ಅಂದರೆ 94 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಉಡುಪಿ-46, ದಕ್ಷಿಣ ಕನ್ನಡ- 13, ಬೆಂಗಳೂರು ಗ್ರಾಮಾಂತರ-7, ದಾವಣಗೆರೆ-7, ಶಿವಮೊಗ್ಗ- 7, ಚಿಕ್ಕಮಗಳೂರು- 4, ಬಳ್ಳಾರಿ, ಚಿತ್ರದುರ್ಗ, ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 2 ಹಾಗೂ ತುಮಕೂರು, ಮೈಸೂರು, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ.