ಹೈಕೋರ್ಟ್ ತೀರ್ಪು: ಮುಂದಿನ ನಡೆಯ ಗುಟ್ಟು ಬಿಟ್ಟುಕೊಟ್ಟ ಎಚ್. ವಿಶ್ವನಾಥ್!
ಬೆಂಗಳೂರು, ಡಿ. 01: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪರಿಷತ್ ಸದಸ್ಯರಾಗುವ ಮೂಲಕ ಅನರ್ಹತೆಯಿಂದ ಮುಕ್ತರಾಗಿ ಮಂತ್ರಿಯಾಗುವ ಕನಸು ಕಾಣುತ್ತಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್ ಅವರಿಗೆ ಹೈಕೋರ್ಟ್ ತೀರ್ಪು ಶಾಕ್ ಕೊಟ್ಟಿದೆ. ಮತ್ತೊಂದೆಡೆ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಆಗಿದ್ದರಿಂದ ಮಂತ್ರಿ ಪದವಿಗೇರಲು ತುದಿಗಾಲಲ್ಲಿ ನಿಂತಿದ್ದವರಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ. ಈ ಮಧ್ಯೆ ನಿನ್ನೆ (ನ. 30) ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು ದಿನ ಕಾಯೋಣ, ಏನಾಗುತ್ತೊ ನೋಡೋಣ ಎಂದು ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ರಾಜ್ಯ ರಾಜಕೀಯದಲ್ಲಿ ಸಂಚಲವನ್ನುಂಟು ಮಾಡಿದೆ. ಪಕ್ಷಾಂತರಿಗಳಿಗೆ ಕೋರ್ಟ್ ತೀರ್ಪು ಎಚ್ಚರಿಕೆ ಗಂಟೆಯಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಈ ಮಧ್ಯೆ ತಮ್ಮ ವಿರುದ್ಧ ಬಂದಿರುವ ತೀರ್ಪಿಕ ಕುರಿತು ಹಾಗೂ ತಮ್ಮ ಮುಂದಿನ ನಡೆಯ ಕುರಿತು ವಿಶ್ವನಾಥ್ ಅವರು ಬೆಂಗಳೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಂಘ ಪರಿವಾರದ ಸಹಕಾರವಿದೆ
ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯತ್ವ ಚುನಾವಣೆ ನಡೆದ ಜೂನ್ ತಿಂಗಳಿನ ಸಂದರ್ಭಲ್ಲಿ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ವಾಪಸ್ ಬಂದಾಗ ನನ್ನ ಹೆಸರು ಕೈ ಬಿಟ್ಟು ಹೋಗಿತ್ತು. ಯಾಕೆ ಎಂದು ತಿಳಿಯಲಿಲ್ಲ. ಹಾಗೆ ನೋಡಿದರೆ ಸಂಘ ಪರಿವಾರದಿಂದ ನನಗೆ ಹೆಚ್ಚು ಸಹಕಾರ ಸಿಕ್ಕಿತ್ತು. ಆದರೆ ಈಗ ಕೋರ್ಡ್ಗೆ ವಿಷಯ ಹೋದಾಗ ನಮಗೆ ಸಿಗಬೇಕಾದ ಸಹಕಾರ ಸಿಕ್ಕಿಲ್ಲ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವ ಎಚ್. ವಿಶ್ವನಾಥ್ ಮಾಡಿದ್ದಾರೆ.
ಸಚಿವರಾಗುವಂತಿಲ್ಲ: ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್
ಅಡ್ವೊಕೇಟ್ ಜನರಲ್ ಅನಾದರ
ಜೊತೆಗೆ ಅಡ್ವೊಕೇಟ್ ಜನರಲ್ ಅವರೂ ಕೂಡ ಅನಾದರ ತೋರಿಸಿದ್ದಾರೆ ಎಂಬ ಮತ್ತೊಂದು ಗಂಭೀರ ಆರೋಪವನ್ನು ವಿಶ್ವನಾಥ್ ಅವರು ಮಾಡಿದ್ದಾರೆ. ಅಡ್ವೊಕೇಟ್ ಜನರಲ್ ಅವರು ಸರಿಯಾಗಿ ಮಾತನಾಡಿಸಲೂ ಅನಾದರ ತೋರಿಸಿದರು. ಯಾಕೆ ಹೀಗಾಯ್ತು ಅಂತಾ ಗೊತ್ತಾಗುತ್ತಿಲ್ಲ.
ಯಾರು ನಮ್ಮಿಂದ ಸಹಾಯ ಪಡೆದುಕೊಂಡು ಸರ್ಕಾರ ರಚನೆ ಮಾಡಿದರೊ? ಈಗ ಎಲ್ಲವನ್ನು ಅನುಭವಿಸುತ್ತಿರುವವರು ನಮ್ಮ ಕಷ್ಟ ಕಾಲದಲ್ಲಿ ಯಾಕೆ ನನ್ನ ಸಹಾಯಕ್ಕೆ ಬರಲಿಲ್ಲ? ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ಚುನಾವಣೆ ನಡೆಯುವಾಗ ನನ್ನ ಹೆಸರನ್ನು ಯಾಕೆ ತೆಗೆಸಿದರು? ಆದರೂ ನಾನು ಅದನ್ನೆಲ್ಲಾ ಎದುರಿಸಿ ನಿಲ್ಲುತ್ತೇನೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ
ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಿದ್ದೇನೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ನಾನು ಕಾಯುತ್ತಿದ್ದೇನೆ ಎಂದು ಇದರ ಅರ್ಥವಲ್ಲ. ನಾನು ರಾಜಕಾರಣವನ್ನು ವ್ಯವಹಾರವಾಗಿ ತೆಗೆದುಕೊಂಡಿಲ್ಲ, ರಾಜಕೀಯಯವನ್ನು ಸಾಂಸ್ಕೃತಿಕ ಹೋರಾಟವಾಗಿ ತೆಗೆದುಕೊಂಡವನು ನಾನು. ಸಚಿವನಾಗಿ ನನ್ನ ಕಾರ್ಯವೈಖರಿ ಜನತೆಗೆ ಗೊತ್ತಿದೆ. ಹೈ ಕೋರ್ಟ್ ತೀರ್ಪು ಕೇವಲ ಸಚಿವ ಸ್ಥಾನಕ್ಕೆ ಸೀಮಿತವಾಗಿದೆ. ಆದರೆ ವಿಧಾನ ಪರಿಷತ್ ಸದಸ್ಯತ್ವ ಸ್ಥಾನ ಅಬಾಧಿತವಾಗಿದೆ ಎಂದು ತಿಳಿಸಿದ್ದಾರೆ.
Recommended Video
ಮಿತ್ರಮಂಡಳಿ ಈಗಲೂ ಮಜಬೂತಾಗಿದೆ
ತಮ್ಮ ವಿರುದ್ಧ ಬಂದಿರುವ ತೀರ್ಪಿನ ಕುರಿತು ಮಾತನಾಡಿರುವ ಎಚ್. ವಿಶ್ವನಾಥ್ ಅವರು, ಮಿತ್ರಮಂಡಳಿಯವರು ಈಗಲೂ ನನ್ನ ಜತೆ ಇದ್ದಾರೆ. ನಿನ್ನೆಯೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್ ಸೇರಿದಂತೆ ಬಹುತೇಕ ಎಲ್ಲರೂ ನನಗೆ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಇವತ್ತೂ ಕೂಡ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದು ವಿಶ್ವನಾಥ್ ಹೇಳಿದರು. ಜೊತೆಗೆ ನಾನು ಸಾ.ರಾ. ಮಹೇಶ್ ಬಗ್ಗೆ ಮಾತನಾಡುವುದಿಲ್ಲ. ಆ ಕೊಚ್ಚೆಗುಂಡಿಗೆ ಕಲ್ಲೆಸೆದು ನನ್ನ ಶುಭ್ರ ವಸ್ತ್ರ ಮಲಿನ ಮಾಡಿಕೊಳ್ಳಲು ನಾನು ತಯಾರಿಲ್ಲ ಎಂದರು.