ನಡುಕ ಹುಟ್ಟಿಸಿದ ಮಾಜಿ ಸಚಿವ ಎಚ್. ವಿಶ್ವನಾಥ್ 'ಬಾಂಬೆ ಡೇಸ್' ಪುಸ್ತಕ!
ಬೆಂಗಳೂರು, ಜೂ. 28: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಕ್ಷರಶಃ ಅತಂತ್ರರಾಗಿರುವ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಹೊಸ ರಾಜಕೀಯ ಪುಸ್ತಕ ಬರೆಯುತ್ತಿದ್ದಾರೆ. ವಿಶ್ವನಾಥ್ ಅವರು ಬರೆಯುತ್ತಿರುವ ಪುಸ್ತಕಕ್ಕೆ 'ದಿ ಬಾಂಬೆ ಡೇಸ್' ಎಂದು ಹೆಸರಿಟ್ಟಿದ್ದಾರೆ. ಆ ಮೂಲಕ ಅದು ಬಿಜೆಪಿಯ ಆಪರೇಶನ್ ಕಮಲದ ಕುರಿತು ಇದೆಯಾ ಎಂಬ ಕುತೂಹಲವನ್ನು ಎಬ್ಬಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ವಿಶ್ವನಾಥ್ ಅವರು, ನಾನು ಹೊಸ ಪುಸ್ತಕ ಬರೆಯುತ್ತಿದ್ದು, ಪುಸ್ತಕಕ್ಕೆ ದಿ ಬಾಂಬೆ ಡೇಸ್ ಎಂದು ಪುಸ್ತಕಕ್ಕೆ ಹೆಸರು ಕೊಟ್ಟಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ್ದಾರೆ. ಮುಂದೆ ನನ್ನ ಹಾದಿ ಸುಗಮವಾಗಿದೆ. ಇದು 40 ವರ್ಷದಿಂದ ನಡೆದು ಬಂದ ಹಾದಿ ಇದು. ನಾನು ಯಾವುದೇ ಪಕ್ಷದಲ್ಲಿ ಇದ್ದರೂ ಆ ಪಕ್ಷವನ್ನು ಪ್ರೀತಿ ಮಾಡುತ್ತೇನೆ.
ರಾಜಕೀಯ ದಂಗೆಯಲ್ಲಿ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ಅಕ್ಷರಶಃ ದುರಂತ ನಾಯಕ
ದಿ. ಸಿಎಂ ಬಂಗಾರಪ್ಪ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾಲದಲ್ಲಿಯೇ ಪಕ್ಷದ ನಾಯಕತ್ವದ ನಡುವಳಿಕೆ ವಿರುದ್ಧ ದಂಗೆ ಎದ್ದವನು ನಾನು. ನಾವೇ ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದಿದ್ದ ಸಿದ್ದರಾಮಯ್ಯನ ವಿರುದ್ಧ ದಂಗೆ ಎದ್ದವನು ನಾನು. ಮುಂದೆ ಮೈತ್ರಿ ಸರ್ಕಾರದ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದವನು ನಾನು.
ಅದಕ್ಕೆ ಇವತ್ತು ನಾನು ಪುಸ್ತಕಕ್ಕೆ ಅಣಿಯಾಗುತ್ತಿದ್ದೇನೆ. 2006ರ ಕುಮಾರಸ್ವಾಮಿ ಯಡಿಯೂರಪ್ಪ ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆ!. ನಾವು ಮಾಡಿದ್ದು ಪಕ್ಷಕ್ಕೆ ದ್ರೋಹ ಅಂತೆ, ಅವ್ರು ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ವ್ಯಂಗ್ಯ ಮಾಡಿದ್ದಾರೆ.
ಕೈ ತಪ್ಪಿದ ಬಿಜೆಪಿ ಟಿಕೆಟ್; ಎಚ್. ವಿಶ್ವನಾಥ್ ಹೇಳಿದ್ದೇನು?
ನಾನೊಬ್ಬ ಲೇಖಕನಾಗಿ ನೈಜ ವಿಚಾರಗಳನ್ನು ತಿಳಿಸುವುದು ಇದು ನನ್ನ ಕರ್ತವ್ಯ. ಮೂರು ಭಾಷೆಯಲ್ಲಿ ಈ ಪುಸ್ತಕ ಬಿಡುಗಡೆ ಆಗಲಿದೆ. ಪುಸ್ತಕವನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ಮುಂಬೈನಲ್ಲಿ ಏನಾಯ್ತು ಅದೆಲ್ಲವನ್ನು ಪುಸ್ತಕದಲ್ಲಿ ಬರೆಯುತ್ತಿದ್ದೇನೆ. ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರಲೇಬೇಕಿದೆ.
ಜನತಂತ್ರ ವ್ಯವಸ್ಥೆಯಲ್ಲಿ ಭಾವನೆ, ನಂಬಿಕೆ ಮೇಲಿನ ತಲ್ಲಣವೇನು?
ಇದೆಲ್ಲವನ್ನು ಅಕ್ಷರ ರೂಪದಲ್ಲಿ ಜನರಿಗೆ ತಿಳಿಸುತ್ತೇನೆ. ರವಿ ಬೆಳಗೆರೆ ಅವರು, 2006ರಲ್ಲಿ ಯಡಿಯೂರಪ್ಪ ಕುಮಾರಸ್ವಾಮಿ ಬಗ್ಗೆ ಬರೆದಿದ್ದಾರೆ.
ಅದು ಕ್ಷೀಪ್ರ ಕ್ರಾಂತಿ ಅಲ್ಲ. ಕಾಮರಾಜ ಮಾರ್ಗದಲ್ಲಿ ಬರೆದಿದ್ದಾರೆ. ಸುಮಾರು 70 ಪುಟಗಳ ಪುಸ್ತಕದಲ್ಲಿ ಯಾವ ಎಸ್ಟೇಟ್ಗೆ ಹೋಗಿದ್ದರು ಎಂಬುದನ್ನು ಸೇರಿಸಿ ಎಲ್ಲವನ್ನೂ ಬರೆದಿದ್ದಾರೆ.
ಈಗ ನಾನು 'ಬಾಂಬೆ ಡೇಸ್' ಎಂದು ಪುಸ್ತಕ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಪುಸ್ತಕ ಬರೆಯುವುದರಿಂದ ಸರ್ಕಾರಕ್ಕೆ ಏನು ಆಗಲ್ಲ, ಸರ್ಕಾರ ಗಟ್ಟಿಯಾಗಿದೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಬರೆಯುತ್ತಿರುವ ಪುಸ್ತಕದಲ್ಲಿ ಯಾವ್ಯಾವ ವಿಚಾರಗಳು ಇರುತ್ತವೆ ಎಂಬುದು ಕುತೂಹಲ ಮೂಡಿಸಿದೆ.