ದೈವೀಶಕ್ತಿಗೆ ಉತ್ತರ ಕೊಡಲೇಬೇಕಾದ ಪರಿಸ್ಥಿತಿ ಬರುತ್ತೆ: ಎಚ್ಡಿಕೆ ಮಾರ್ಮಿಕ ಹೇಳಿಕೆ
ಬೆಂಗಳೂರು, ಅ 17: ತಮ್ಮ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಪಕ್ಷದ ಮುಖಂಡ ಸಾ.ರಾ.ಮಹೇಶ್ ನಡುವಿನ ಚಾಮುಂಡಿ ಆಣೆಪ್ರಮಾಣದ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
"ಮಹೇಶ್ ಅವರನ್ನು ನಾನು ಅತ್ಯಂತ ಹತ್ತಿರದಿಂದ ಬಲ್ಲವನು. ನಾನು, ಅವರು ಒಡಹುಟ್ಟಿದ ಸಹೋದರರಂತೆ ಇದ್ದೇವೆ. ನಮ್ಮಿಬ್ಬರ ನಡುವೆ ಹುಳಿಹಿಂಡುವ ಕೆಲಸವನ್ನು ಮಾಡಿದರೆ, ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂಬ್ಬರೂ ಇಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಮತ್ತೆ ರಾಜಕೀಯ ನಿವೃತ್ತಿಯ ಮಾತನ್ನಾಡಿದ ಕುಮಾರಸ್ವಾಮಿ
"ಹೊರನೋಟಕ್ಕೆ ಮಾತನಾಡುವವರನ್ನು ನಾನು ನಂಬುವುದಿಲ್ಲ. ಮಹೇಶ್, ಯಾರ ಬಗ್ಗೆ ಇಂದು ಚಾಮುಂಡಿಯಲ್ಲಿ ಆಣೆಪ್ರಮಾಣದ ವಿಚಾರವನ್ನು ಎತ್ತಿದ್ದಾರೋ, ಆವ್ಯಕ್ತಿಯ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ" ಎಂದು ಕುಮಾರಸ್ವಾಮಿ, ವಿಶ್ವನಾಥ್ ಹೆಸರು ಹೇಳದೇ ಲೇವಡಿ ಮಾಡಿದ್ದಾರೆ.
ದೇಶದಲ್ಲೇ ಕುಮಾರಸ್ವಾಮಿಯಂತಹಾ ಇನ್ನೊಬ್ಬ ರಾಜಕಾರಣಿ ಇಲ್ಲ: ದೇವೇಗೌಡ
ತಮ್ಮ ಹಿಂದಿನ ಧರ್ಮಸ್ಥಳದ ಆಣೆಪ್ರಮಾಣದ ವಿಚಾರವನ್ನು ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, "ಅಂದು ನಡೆದ ಆ ಘಟನೆಯ ನಂತರದ ಒಂದೇ ತಿಂಗಳಲ್ಲಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ದೈವೀಶಕ್ತಿಯ ಮುಂದೆ ಯಾವುದೂ ನಡೆಯುವುದಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ನಾನು ಅಂದು ಧರ್ಮಸ್ಥಳಕ್ಕೆ ಯಡಿಯೂರಪ್ಪನವರನ್ನು ಆಣೆಪ್ರಮಾಣಕ್ಕೆ ಕರೆದಿರಲಿಲ್ಲ
"ನಾನು ಅಂದು ಧರ್ಮಸ್ಥಳಕ್ಕೆ ಯಡಿಯೂರಪ್ಪನವರನ್ನು ಆಣೆಪ್ರಮಾಣಕ್ಕೆ ಕರೆದಿರಲಿಲ್ಲ. ಆವತ್ತಿನ ರಾಜಕೀಯದಲ್ಲಿ ನಾನು ಹೇಳಿಕೆಕೊಟ್ಟಾಗ, ದಿನಪತ್ರಿಕೆಯ ಮೂಲಕ ಶೋಭಾ ಕರಂದ್ಲಾಜೆ, ಧರ್ಮಸ್ಥಳಕ್ಕೆ ಬನ್ನಿ ಎಂದು ಸವಾಲು ಹಾಕಿದ್ದರು. ಅದಕ್ಕೆ ನಾನು ಒಪ್ಪಿ, ಅಲ್ಲಿಗೆ ಹೋಗಿ ಪ್ರಮಾಣ ಮಾಡಿದೆ. ಆ ಘಟನೆಯ ಒಂದು ತಿಂಗಳ ನಂತರ, ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ಬಂತು" - ಕುಮಾರಸ್ವಾಮಿ.
ದೇವರಿಗೆ ನಮಸ್ಕಾರ ಮಾಡಿ ಹೋದರು
"ಅವತ್ತು ಯಡಿಯೂರಪ್ಪ ಕೂಡಾ ಬಂದರು, ದೇವರಿಗೆ ನಮಸ್ಕಾರ ಮಾಡಿ ಹೋದರು. ನಾನು ಹೇಳಿದ್ದು ಸತ್ಯ ಎಂದು ಮೂರು ಬಾರಿ ದೇವರ ಮುಂದೆ ಹೇಳಿದೆ. ಎಷ್ಟೇ ಪ್ರಯತ್ನ ಪಟ್ಟರೂ, ದೇವರಿಂದ ರಕ್ಷಣೆ ಪಡೆಯಲು ಬಿಎಸೈಗೆ ಸಾಧ್ಯವಾಗಲಿಲ್ಲ. ಇಂದು ಮೈಸೂರಿನಲ್ಲಿ ನಡೆದ ಪ್ರಹಸನಕ್ಕೆ ಯಾವುದೇ ಅವಶ್ಯಕತೆಯಿರಲಿಲ್ಲ" ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೇರೆ ಪಕ್ಷದಿಂದ ಬಿಜೆಪಿಗೆ ಯಾಕೆ ಹೋಗುತ್ತಿದ್ದಾರೆ
"ಬೇರೆ ಪಕ್ಷದಿಂದ ಬಿಜೆಪಿಗೆ ಯಾಕೆ ಹೋಗುತ್ತಿದ್ದಾರೆ ಎಂದು ಕೇಳಿದರೆ, ಜನಸಾಮಾನ್ಯರೂ ಉತ್ತರ ನೀಡುತ್ತಾರೆ. ಸಾ.ರಾ.ಮಹೇಶ್ ಸದನದ ಕಲಾಪದಲ್ಲಿ ಮಾಡಿರುವಂತಹ ವಿಚಾರ ಏನಿದೆಯೋ, ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ದಿನ ದೈವೀಶಕ್ತಿಗೆ ಉತ್ತರ ಕೊಡಲೇಬೇಕಾದ ಪರಿಸ್ಥಿತಿ ಬರುತ್ತದೆ" ಎಂದು ಕುಮಾರಸ್ವಾಮಿ ಹೇಳಿದರು.
ದೇವರಿಗೆ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಾಗ, ನಮ್ಮ ಬೆನ್ನಿಗೆ ಯಾವ ವಕೀಲರೂ ಇರುವುದಿಲ್ಲ
"ದೇವರಿಗೆ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಾಗ, ನಮ್ಮ ಬೆನ್ನಿಗೆ ಯಾವ ವಕೀಲರೂ ಇರುವುದಿಲ್ಲ, ದುಡ್ಡೂ ಇರುವುದಿಲ್ಲ" ಎಂದಿರುವ ಕುಮಾರಸ್ವಾಮಿ, "ಯಾವ ವ್ಯಕ್ತಿ ನಿಮ್ಮನ್ನು ಚಾಮುಂಡಿ ಸನ್ನಿಧಿಗೆ ಎಳೆದಿದ್ದಾರೋ, ಆ ವ್ಯಕ್ತಿಯ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ"ಎಂದು ಕುಮಾರಸ್ವಾಮಿ, ಮಹೇಶ್ ಗೆ ಸಲಹೆಯನ್ನು ನೀಡಿದರು.
ನನ್ನನ್ನೂ ಸತ್ಯ ಹರಿಶ್ಚಂದ್ರನೇನೋ ಎಂದು ಹೇಳಿದ್ದರು
"ನನ್ನನ್ನೂ ಸತ್ಯ ಹರಿಶ್ಚಂದ್ರನೇನೋ ಎಂದು ಹೇಳಿದ್ದರು. ಅವರ ಜೊತೆಗಿನ ಅನುಭವ ನನಗೂ ಆಗಿದೆ. ಹುಣಸೂರು ಕ್ಷೇತ್ರದ ಜನತೆ ಅವರಿಗೆ ಉತ್ತರಿಸಲಿದ್ದಾರೆ. ತಾಯಿ ಚಾಮುಂಡಿಯ ಮುಂದೆ ಹುಡುಗಾಟಿಕೆ ಮಾಡಿದ್ದಾರೆ. ಅದನ್ನು ತಾಯಿಯೇ ನೋಡಿಕೊಳ್ಳುತ್ತಾಳೆ" ಎಂದು ಕುಮಾರಸ್ವಾಮಿ, ವಿಶ್ವನಾಥ್ ಗೆ ಟಾಂಗ್ ನೀಡಿದರು.