ರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡು
ಬೆಂಗಳೂರು, ಜೂನ್ 04: ರಾಜ್ಯ ರಾಜಕಾರಣದಲ್ಲಿ ಹಳ್ಳಿ ಹಕ್ಕಿ ಎಂದೇ ಖ್ಯಾತರಾದ ಎಚ್.ವಿಶ್ವನಾಥ್ ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟು ವರ್ಷ ಸಮೃದ್ಧ ರಾಜಕಾರಣ ಮಾಡಿದ ಅವರು ರಾಜಕಾರಣದ ಸಂಧ್ಯಾಕಾಲದಲ್ಲಿ ನೋವಿನಿಂದ ಹುದ್ದೆಯೊಂದನ್ನು ತ್ಯಜಿಸಿರುವುದು ರಾಜಕಾರಣ ಆಸಕ್ತರಿಗೆ ನೋವಿನ ಸಂಗತಿ.
ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಅವರು, ತಮ್ಮ ರಾಜೀನಾಮೆಗೆ ಕಾರಣಗಳ ಪಟ್ಟಿಯನ್ನು ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಹಿತೈಶಿಗಳಿಗೆ ಕ್ಷೇತ್ರದ ಜನರಿಗೆ ಬಹಿರಂಗ ಪತ್ರವನ್ನೂ ಬರೆದಿರುವ ವಿಶ್ವನಾಥ್ ರಾಜೀನಾಮೆ ನಿರ್ಧಾರಕ್ಕೆ ಕಾರಣವಾದ ಅಂಶಗಳನ್ನು ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ
ತಾವೊಬ್ಬ ಹಳ್ಳಿ ಹಳ್ಳಿ, ಕಾಂಗ್ರೆಸ್ನಲ್ಲಿ ರಾಜಕೀಯ ವ್ಯಕ್ತಿತ್ವವನ್ನು ರೂಢಿಸಿಕೊಂಡು ಅಲ್ಲಿನ ಸ್ಥಿತ್ಯಂತರಕ್ಕೆ ಹೊಂದಿಕೊಳ್ಳಲಾಗದೆ, ಜಾತ್ಯಾತೀತ ನೆಲೆಗಟ್ಟಿನ ಮೇಲೆ ನಿಂತಿದ್ದ ಕನ್ನಡ ನೆಲದ ಪಕ್ಷವಾದ ಜೆಡಿಎಸ್ಗೆ ಸೇರಿದಾಗ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರು ಸ್ವಾಗತಿಸಿದ್ದಕ್ಕೆ ಚಿರರುಣಿಯಾಗಿರುವುದಾಗಿ ವಿಶ್ವನಾಥ್ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯ, ನನ್ನ ರಾಜಕೀಯ ಅನುಭವಕ್ಕೆ ದೊರೆತ ಮನ್ನಣೆ ಎಂದು ಬಣ್ಣಿಸಿರುವ ವಿಶ್ವನಾಥ್, ತಾವು ಪಕ್ಷವನ್ನು ಬಲವಾಗಿ ಕಟ್ಟಲು ಬಯಸಿದ್ದಾಗಿ ಹೇಳಿದ್ದಾರೆ. ಆದರೆ ತಮ್ಮ ಎಣಿಕೆಯಂತೆ ಏನೂ ನಡೆಯಲಿಲ್ಲವೆಂದು ವಿಶ್ವನಾಥ್ ವಿಷಾಧ ವ್ಯಕ್ತಪಡಿಸಿದ್ದಾರೆ.
'ಪ್ರಭುತ್ವ ಸರ್ಕಾರದ ಕಡೆ ಗಮನವಹಿಸಲಿಲ್ಲ'
ನಮ್ಮ ಪಕ್ಷ ಅಧಿಕಾರವನ್ನೇನೋ ಹಿಡಿಯಿತು, ಆದರೆ ಪ್ರಭುತ್ವ ಪಕ್ಷದ ಕಡೆಗೆ ಗಮನವನ್ನೇ ಹರಿಸಲಿಲ್ಲ, ಫ್ರಬುತ್ವಕ್ಕೆ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಕೊಳ್ಳುವ ಮನಸ್ಸಾಗಲಿ, ವ್ಯವಧಾನವಾಗಲಿ ಇರಲಿಲ್ಲವೆಂದು ವಿಶ್ವನಾಥ್ ಹೇಳಿದ್ದಾರೆ. ಆದರೆ ಈ ವಿಚಾರವಾಗಿ ತಾವೂ ಯಾರನ್ನೂ ದೂಷಿಸುವುದಿಲ್ಲವೆಂದೂ ಹೇಳಿದ್ದಾರೆ. ವಿಶ್ವನಾಥ್ ಅವರು ಸೂಕ್ಷ್ಮವಾಗಿ ಜೆಡಿಎಸ್ನ ಮಂತ್ರಿಗಳು ಮತ್ತು ಸಿಎಂ ಕುಮಾರಸ್ವಾಮಿ ಅವರ ಬಗೆಗೇ ಈ ಮಾತುಗಳನ್ನು ಹೇಳುತ್ತಿರುವುದು ಸೂಚ್ಯವಾಗಿ ತಿಳಿಯುತ್ತದೆ.
ನಿಜವಾದ ಜಾತ್ಯಾತೀತ ಪಕ್ಷ ಬೇಕಿದೆ: ವಿಶ್ವನಾಥ್
ರಾಜ್ಯಕ್ಕೆ ಈ ಸಂದರ್ಭದಲ್ಲಿ 'ನಿಜವಾದ ಅರ್ಥದಲ್ಲಿ ಜಾತ್ಯಾತೀತ' ಪಕ್ಷದ ಅವಶ್ಯಕತೆ ಇದೆ ಎಂದಿರುವ ವಿಶ್ವನಾಥ್ ಪರೋಕ್ಷವಾಗಿ ಜೆಡಿಎಸ್ ತನ್ನ ಹೆಸರಿನಂತೆ ಜಾತ್ಯಾತೀತವಲ್ಲ ಎಂದು ಸೂಚಿಸಿದ್ದಾರೆ. ಮುಂದುವರೆದು, ಜನರ ಮನಸ್ಸನ್ನು ಅರಿತು ನಡೆದಾಗ ಜನರು ಪಕ್ಷವನ್ನು ಪುರಸ್ಕರಿಸುತ್ತಾರೆ, ಪ್ರೀತಿಸುತ್ತಾರೆ. ಇದಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಪ್ರತಿಭಾನ್ವಿತ ವ್ಯಕ್ತಿಗಳಿಂದ ಮಾತ್ರವೇ ಪಕ್ಷ ಕಟ್ಟಲು ಸಾಧ್ಯ ಎಂದು ವಿಶ್ವನಾಥ್ ಅವರು ಪತ್ರದಲ್ಲಿ ಹೇಳಿದ್ದಾರೆ.
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದುಬಂದ ದಾರಿ
'ನನ್ನಿಂದಲೇ ಬದಲಾವಣೆ ಪರ್ವ ಆರಂಭವಾಗಲಿ'
ಪಕ್ಷದ ನಡೆ-ನುಡಿ, ಕಾರ್ಯವೈಖರಿ ಎಲ್ಲವನ್ನೂ ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸಿರುವ ವಿಶ್ವನಾಥ್, ಬದಲಾವಣೆಗಳು ತಕ್ಷಣದಲ್ಲಿ ಆಗಬೇಕು, ಮೊದಲ ಬದಲಾವಣೆ ನನ್ನಿಂದಲೇ ಆರಂಭವಾಗಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಲೋಕಸಭೆ ಚುನಾವಣೆಯ ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ ಎಂದು ವಿಶ್ವನಾಥ್ ಅವರು ಹೇಳಿದ್ದಾರೆ.
'ಪಕ್ಷಕ್ಕೆ ಹೊಸ ಗಾಳಿ, ನೀರು, ಹೊಸ ಶಕ್ತಿ ಸಿಗಲಿ'
ಪಕ್ಷಕ್ಕೆ ಹೊಸ ಗಾಳಿ, ಹೊಸ ನೀರು, ಹೊಸ ಶಕ್ತಿ ಲಭಿಸಿ ಮತ್ತೆ ಹಸಿರಿನಿಂದ ನಳನಳಿಸುವಂತೆ ಆಗಲಿ ಎಂದು ಹಾರೈಸಿರುವ ವಿಶ್ವನಾಥ್, ಎಂದಿನಂತೆ ಪಕ್ಷಕ್ಕೂ ನನ್ನ ಮತದಾರರಿಗೂ ನಿಷ್ಠನಾಗಿ ಪಕ್ಷ ಒಪ್ಪಿಸಿದ ಜವಾಬ್ದಾರಿಯನ್ನು ಮನಸ್ಸಿಟ್ಟು ನಿರ್ವಹಿಸುತ್ತೇನೆ ಎಂದು ವಿಶ್ವನಾಥ್ ಅವರು ತಮ್ಮ ಪಕ್ಷದ ವರಿಷ್ಠರಿಗೆ, ಕುಮಾರಸ್ವಾಮಿಗೆ, ಕಾರ್ಯಕರ್ತರಿಗೆ ವಂದನೆಗಳನ್ನು ತಿಳಿಸಿದ್ದಾರೆ.