ಸ್ಪೋಟಕ ತಿರುವು ಪಡೆದುಕೊಂಡ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ!
ಬೆಂಗಳೂರು, ಡಿ. 02: ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಶಾಸಕ ಸ್ಥಾನದ ಅನರ್ಹತೆ ಕುರಿತು ಹೈಕೋರ್ಟ್ ತೀರ್ಪು ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಅದರ ಮಧ್ಯೆ ಎಚ್. ವಿಶ್ವನಾಥ್ ಅವರು ಮಂತ್ರಿಯಾಗುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೋರ್ಟ್ ಹೋರಾಟದಲ್ಲಿ ನನಗೆ ಸರಿಯಾದ ಬೆಂಬಲ ಸಿಕ್ಕಿಲ್ಲ ಎಂದು ತಮ್ಮ ಕುರಿತಾಗಿ ಬಂದಿರುವ ತೀರ್ಪಿ ಬಗ್ಗೆ ವಿಶ್ವನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಹೈಕಮಾಂಡ್ಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಮಾಡಿ ಕಳುಹಿಸಿದ್ದ ಲಿಸ್ಟ್ನಲ್ಲಿದ್ದ ನನ್ನ ಹೆಸರನ್ನು ತೆಗೆಸಲಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ವಿಶ್ವನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್ ತೀರ್ಪು: ಮುಂದಿನ ನಡೆಯ ಗುಟ್ಟು ಬಿಟ್ಟುಕೊಟ್ಟ ಎಚ್. ವಿಶ್ವನಾಥ್!
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಬಹಳಷ್ಟು ಶ್ರಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ ಇತ್ತೀಚೆಗೆ ಆತ್ಮಹತ್ಯಗೆ ಯತ್ನಿಸಿದ್ದ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಕುರಿತು ಎಚ್. ವಿಶ್ವನಾಥ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಅವರ ಆರೋಪದ ಬಳಿಕ ಸಂತೋಷ್ ಆತ್ಮಹತ್ಯೆ ವಿಚಾರ ತಿರುವು ಪಡೆದುಕೊಂಡಿದೆ.
ಸಿಎಂ ಹೇಳಿಕೆಗೆ ವಿಶ್ವನಾಥ್ ಗರಂ
ಸಿ.ಪಿ. ಯೋಗೇಶ್ವರ್ ಅವರು ಮಂತ್ರಿಯಾಗಲು ಬಿಜೆಪಿಯ ಹಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವಂತೆ ಯೋಗೇಶ್ವರ್ ಮಂತ್ರಿಯಾಗುವುದು ನೂರಕ್ಕೆ ನೂರು ನಿಶ್ಚಿತ. ಅವರನ್ನು ಮಂತ್ರಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಇದು ಯಡಿಯೂರಪ್ಪ ಆಪ್ತ ಶಾಸಕ ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಹೇಳಿಕೆ ಕೊಡುತ್ತಿದ್ದಂತೆಯೆ ವಿಶ್ವನಾಥ್ ಅವರು ಯೋಗೇಶ್ವರ್ ಮೇಲೆ ಸಿಡಿದೆದ್ದಿದ್ದಾರೆ.
ಸೀರೆ ಹಂಚಿ ಸೋಲಿಸಿದ ಯೋಗೇಶ್ವರ್
ಇಷ್ಟೇ ಅಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಹಳ್ಳಿಹಕ್ಕಿ ವಿಶ್ವನಾಥ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ನೇರ ಕಾರಣ ಸಿ.ಪಿ. ಯೋಗೇಶ್ವರ್ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ನನಗೆ ಟಿಕೆಟ್ ಕೊಡುವ ಮೊದಲೇ ತಾನೇ ಬಿಜೆಪಿ ಅಭ್ಯರ್ಥಿ ಅಂತ ಬಿಂಬಿಸಿಕೊಂಡು ಸೀರೆ ಹಂಚುವ ಮೂಲಕ ಯೋಗೇಶ್ವರ್ ಕ್ಷೇತ್ರದಲ್ಲಿ ನನಗೆ ಹಾನಿ ಮಾಡಿದ್ದ ಎಂದು ಆರೋಪಿಸಿದ್ದಾರೆ.
ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಬಿಜೆಪಿಯಲ್ಲಿ 'ಮೂಕಹಕ್ಕಿ'ಯಾದ ಕಥೆ
ಹಣ ಲಪಟಾಯಿಸಿದ ಎನ್.ಆರ್. ಸಂತೋಷ್
ಉಪ ಚುನಾವಣೆಯಲ್ಲಿ ನಾನು ಅಭ್ಯರ್ಥಿ ಆದ ಮೇಲೆಯೂ ಪಕ್ಷದಿಂದ ಚುನಾವಣೆಗೆ ಬಂದಿದ್ದ ದೊಡ್ಡ ಮೊತ್ತದ ಹಣ ನನಗೆ ತಲುಪಲಿಲ್ಲ. ನನಗೆ ಅಂತ ಬಂದಿದ್ದ ಹಣವನ್ನು ಸಿಪಿ ಯೋಗೇಶ್ವರ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಲಪಟಾಯಿಸಿದರು. ನನ್ನ ಸೋಲಿಗೆ ಇದು ಕೂಡಾ ಪ್ರಬಲ ಕಾರಣ
ಇದೇ ವಿಚಾರದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಅದು ನನಗೆ ಬೇಸರವಾಗಿದೆ ಎಂದಿದ್ದಾರೆ.
ತಿರುವು ಪಡೆದುಕೊಂಡ ಆತ್ಮಹತ್ಯೆ ಯತ್ನ
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಹೇಳಿಕೆ ಬೆನ್ನಲ್ಲಿಯೇ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ತಿರುವು ಪಡೆದುಕೊಂಡಿದೆ. ಸಂತೋಷ್ ಹಣ ಲಪಟಾಯಿಸಿದ್ದಾರೆ ಎಂಬ ನೇರ ಆರೋಪವನ್ನು ವಿಶ್ವನಾಥ್ ಅವರು ಮಾಡಿದ್ದಾರೆ. ಜೊತೆಗೆ ಪಕ್ಷದ ನಾಯಕರಿಗೆ ಈ ಬಗ್ಗೆ ದೂರು ಕೊಟ್ಟಿರುವುದಾಗಿಯೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂತೋಷ್ ಅವರ ಆತ್ಮಹತ್ಯೆ ಯತ್ನದ ಬಳಿಕ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯೋಗೇಶ್ವರ್ ನೂರಕ್ಕೆ ನೂರು ಮಂತ್ರಿಯಾಗುವುದು ಖಚಿತ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ವಿಶ್ವನಾಥ್ ಅವರ ಹೇಳಿಕೆಗೂ, ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನಕ್ಕೂ ಹಾಗೂ ಯೋಗೇಶ್ವರ್ ಅವರಿಗೆ ಮಂತ್ರಿ ಪದವಿ ಪಕ್ಕಾ ಆಗಿರುವುದಕ್ಕೂ ಒಂದಕ್ಕೊಂದು ಬಲವಾದ ಲಿಂಕ್ ಇದೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ. ಸಂತೋಷ್ ಅವರ ಆತ್ಮಹತ್ಯೆ ಹಿಂದೆ ಯಾರ ಒತ್ತಡವಿತ್ತು ಎಂಬುದು ಸೂಕ್ತ ತನಿಖೆಯಿಂದ ಮಾತ್ರ ತಿಳಿದು ಬರಲಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತು ಕೂಡ ಇದೇ ಹಿನ್ನೆಲೆಯಲ್ಲಿ ಬಂದಿದ್ದು ಎನ್ನಲಾಗಿದೆ.