ರಾಜ್ಯವ್ಯಾಪಿ ಪಾದಯಾತ್ರೆ ಮಾಡ್ತಾರಂತೆ ಕುಮಾರಣ್ಣ
ಬೆಂಗಳೂರು, ಜ. 25 : ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಜನಜಾಗೃತಿ ಮೂಡಿಸಲು ಬೆಳಗಾವಿಯಿಂದ ಪಾದಯಾತ್ರೆ ನಡೆಸುತ್ತೇನೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಸಿದ್ದರಾಮಯ್ಯ ಗಣಿ ಅಕ್ರಮದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಇದೀಗ ಇವರ ಭ್ರಷ್ಟಾಚಾರದ ವಿರುದ್ಧ ನಾನು ರಾಜ್ಯದಲ್ಲಿ ಪಾದಯಾತ್ರೆ ಮಾಡುವ ಕಾಲ ಬಂದಿದೆ ಎಂದು ಹೇಳಿದ್ದಾರೆ.[ಬಿಜೆಪಿ, ಕಾಂಗ್ರೆಸ್ ಭ್ರಷ್ಟಾಚಾರದಿಂದ ಜೆಡಿಎಸ್ಗೆ ಮತ್ತೆ ಅವಕಾಶ]
ಸಿದ್ದರಾಮಯ್ಯ ಭ್ರಷ್ಟರ ನಾಯಕರಾಗಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ನನಗೆ ಸಂಬಂಧವಿಲ್ಲ ಎಂದು ಹೇಳುವ ಅವರ ಮಾತಿನಲ್ಲಿ ಅರ್ಥವಿಲ್ಲ. ಜನರು ಇಂಥ ಸುಳ್ಳುಗಳಿಗೆ ಬಲಿಯಾಗಲ್ಲ ಎಂದು ಹೇಳಿದರು.
ರೈತರ ಬಗ್ಗೆ ಕಾಳಜಿ ತೋರದ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು? ಜೆಡಿಎಸ್ ನಲ್ಲಿದ್ದಾಗ ಹುಲಿಯಂಥಿದ್ದ ಸಿದ್ದರಾಮಯ್ಯ ಈಗ ಇಲಿಯಾಗಿದ್ದಾರೆ ಎಂದು ವಾಗದಾಳಿ ನಡೆಸಿದರು.
ರೇವಣ್ಣ ಪುತ್ರ ಹಾಜರ್: ಜೆಡಿಎಸ್ ಸಮಾವೇಶಕ್ಕೆ ರೇವಣ್ಣ ಪುತ್ರ ಪ್ರಜ್ವಲ್ ಹಾಜರಾಗಿದ್ದರು. ಇಲ್ಲಿಯವೆರಗೆ ರಾಜಕೀಯವಾಗಿ ಕಾಣಿಸಿಕೊಳ್ಳದ ಪ್ರಜ್ವಲ್ ಸಭೆಯಲ್ಲಿ ಉಪಸ್ಥಿತರಿದ್ದು ತಾತ ಎಚ್,ಡಿ, ದೇವೇಗೌಡ ಆಶೀರ್ವಾದ ಪಡೆದಿದ್ದು ಕುತೂಹಲಕ್ಕೆ ಕಾರಣವಾಯಿತು.[ಜೆಡಿಎಸ್ ಸಮಾವೇಶ, ಜಮೀರ್ ಫೋಟೋ ನಾಪತ್ತೆ!]
ಹಾಳೆಯಲ್ಲಿ ಆಹ್ವಾನ?: ಜೆಡಿಎಸ್ ಸಮಾವೇಶಕ್ಕೆ ನನಗೆ ಜೆರಾಕ್ಸ್ ಹಾಳೆಯಲ್ಲಿ ಆಹ್ವಾನ ಬಂದಿತ್ತು. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ನಿಜವಾಗಿ ಪಕ್ಷಕ್ಕಾಗಿ ದುಡಿದವರನ್ನು ತಂದೆ ಮಕ್ಕಳು ಮರೆತಿದ್ದಾರೆ. ಸಿದ್ದರಾಮಯ್ಯ ಅವರೇ ಧೀಮಂತ ನಾಯಕ ಎಂದು ಗಂಗಾವತಿಯ ಜೆಡಿಎಸ್ ಇಕ್ಬಾಲ್ ಅನ್ಸಾರಿ ಹೇಳಿದ್ದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.