ಮಹಾರಾಷ್ಟ್ರದಲ್ಲಿದೆ ವಿಜ್ಞಾನವನ್ನೂ ಕನ್ನಡದಲ್ಲಿ ಕಲಿಸುವ ಕಾಲೇಜ್
ಬೆಂಗಳೂರು, ನವೆಂಬರ್ 27: 'ಶ್ರೀ ಗುರುಬಸವ ವಿದ್ಯಾಮಂದಿರ ಮತ್ತು ಜೂನಿಯರ್ ಕಾಲೇಜ್'- ಈ ಹೆಸರು ನೋಡಿದಾಗ ಕರ್ನಾಟಕದ ಯಾವುದೋ ಹಳ್ಳಿಯಲ್ಲಿ ಇರುವ ಕಾಲೇಜಿನ ಹೆಸರು ಇರಬೇಕು ಎನಿಸುತ್ತದೆ. ಆದರೆ ಇದು ಕರ್ನಾಟಕದಲ್ಲಿರುವ ಕಾಲೇಜಲ್ಲ. ಬದಲಾಗಿ ನೆರೆಯ ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಕಾಲೇಜು ಎಂದರೆ ಅಚ್ಚರಿಯಾಗುತ್ತದೆ.
ಇನ್ನೂ ವಿಶೇಷ ಸಂಗತಿಯೇನೆಂದರೆ ರಾಜ್ಯದ ಕಾಲೇಜುಗಳಲ್ಲಿ ವಿಜ್ಞಾನ ಕೋರ್ಸ್ಗಳನ್ನು ಇಂಗ್ಲಿಷ್ನಲ್ಲಿ ಕಲಿಸಲಾಗುತ್ತದೆ. ಆದರೆ ಇಲ್ಲಿ ವಿಜ್ಞಾನದ ಕೋರ್ಸ್ ಕೂಡ ಕನ್ನಡದಲ್ಲಿಯೇ ಬೋಧನೆ ಮಾಡಲಾಗುತ್ತಿದೆ.
ಕನ್ನಡಕ್ಕೆ ಅವಕಾಶವಿಲ್ಲ; ಹಿಂದಿ-ಇಂಗ್ಲಿಷ್ನಲ್ಲಿ ಮಾತ್ರ ಭಾಷಣ: ಸರ್ಕಾರಿ ಕಾಲೇಜಿನ ವಿವಾದ
ಮಹಾರಾಷ್ಟ್ರದ ಸಾಂಗ್ಲಿಯ ಜಟ್ಟ ತಾಲ್ಲೂಕಿನಲ್ಲಿ ಸಂಖದಲ್ಲಿ ಶ್ರೀ ಗುರುಬಸವ ವಿದ್ಯಾಮಂದಿರ ಮತ್ತು ಜೂನಿಯರ್ ಕಾಲೇಜ್ ನಡೆಯುತ್ತಿದೆ. ಇಲ್ಲಿ ಹಲವು ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿಯೇ ವಿಜ್ಞಾನ ಬೋಧನೆ ಮಾಡಲಾಗುತ್ತಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿರುವ ಕನ್ನಡ ಭಾಷಿಕ ಕುಟುಂಬದವರಿಗೆ ತಮ್ಮ ಮಕ್ಕಳನ್ನು ಈ ಕಾಲೇಜಿಗೆ ಕಳುಹಿಸುವಂತೆ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿ ಇಲ್ಲಿನ ಅನೇಕರು ಕನ್ನಡ ಮಾಧ್ಯಮದಲ್ಲಿಯೇ ವಿಜ್ಞಾನ ಕಲಿಕೆಗಾಗಿ ಈ ಕಾಲೇಜಿಗೆ ತೆರಳುತ್ತಿದ್ದಾರೆ.
ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿತು. ಆ ಪಟ್ಟಿಯಲ್ಲಿ ಹೆಚ್ಚಿನವರು ಮಹಾರಾಷ್ಟ್ರದ ಈ ಕಾಲೇಜಿನವರೇ ಆಗಿದ್ದರು.
ಮೈಸೂರಿನಲ್ಲಿನ ಪಿಯು ಕಾಲೇಜೊಂದು ಈ ವರ್ಷದಿಂದ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸಲು ಆರಂಭಿಸಿದೆ. 2020ರಿಂದ ದ್ವಿತೀಯ ಪಿಯುಸಿಗೆ ಕನ್ನಡ ವಿಜ್ಞಾನ ತರಗತಿಗಳು ಆರಂಭವಾಗಲಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಕಾಪಿ ಹೊಡೆಯದಂತೆ ತಡೆಯಲು ವಿದ್ಯಾರ್ಥಿಗಳಿಗೆ 'ಪೆಟ್ಟಿಗೆ' ಹೆಲ್ಮೆಟ್!
ಈಗಾಗಲೇ ಅನೇಕರು ಕನ್ನಡ ಮಾಧ್ಯಮದಲ್ಲಿ ಪಿಯು ವಿಜ್ಞಾನ ಪೂರೈಸಿ ಬಳಿಕ ಇಂಗ್ಲಿಷ್ ಮಾಧ್ಯಮದಲ್ಲಿ ಎಂಬಿಬಿಎಸ್, ಎಂಜಿನಿಯರಿಂಗ್ ಪದವಿ ಕೂಡ ಮಾಡಿದ್ದಾರೆ. ಆರಂಭದಲ್ಲಿ ಇಂಗ್ಲಿಷ್ ಮಾಧ್ಯಮ ಕಷ್ಟವಾದರೂ ಕ್ರಮೇಣ ಹೊಂದಿಕೊಳ್ಳಬಹುದು. ಎರಡು ವರ್ಷ ಪಿಯು ಶಿಕ್ಷಣವನ್ನು ಕನ್ನಡದಲ್ಲಿಯೇ ಪಡೆದು ಉನ್ನತ ಶಿಕ್ಷಣವನ್ನು ಪಡೆಯುವುದು ಅಸಾಧ್ಯವೇನಲ್ಲ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಗುರುಬಸವ ಕಾಲೇಜು 1967ರಲ್ಲಿ ಆರಂಭಗೊಂಡಿದ್ದರೂ, ಇಲ್ಲಿ ಕನ್ನಡ ಮಾಧ್ಯಮದ ವಿಜ್ಞಾನ ಕೋರ್ಸ್ಗಳು ಶುರುವಾಗಿದ್ದು 1997ರಲ್ಲಿ. ಪಿಯು ವಿಜ್ಞಾನವನ್ನು ಕನ್ನಡದಲ್ಲಿ ಕಲಿಯಲು ಅಗತ್ಯ ಪಠ್ಯ ಪುಸ್ತಕಗಳು ಲಭ್ಯವಿಲ್ಲ. ಹೀಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಕನ್ನಡ ಪುಸ್ತಕಗಳನ್ನೇ ಪರಾಮರ್ಶೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿಲಬಸ್ಗಳ ಬದಲಾದರೂ ಅವುಗಳಲ್ಲಿ ವಿಷಯಗಳು ಹೆಚ್ಚು ಬದಲಾಗದೆ ಇರುವುದರಿಂದ ಅಷ್ಟೇನೂ ತೊಂದರೆಯಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.