ತಂದೆಯ ತ್ಯಾಗವನ್ನು ದುರ್ಬಳಕೆ ಮಾಡಿಕೊಂಡ ಗುರ್ಮೆಹರ್: ಪ್ರತಾಪ್ ಸಿಂಹ
ಎಬಿವಿಪಿ ವಿರುದ್ಧ ಆನ್ ಲೈನ್ ನಲ್ಲಿ ಟ್ವಿಟರ್ ಅಭಿಯಾನ ಆರಂಭಿಸಿ ವಿವಾದಕ್ಕೀಡಾದ ದೆಹಲಿ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ನಡೆ ವಿರೋಧಿಸಿ ಮಾಡಿದ್ದ ತಮ್ಮ ಟ್ವೀಟ್ ಗಳೂ ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಮೈಸೂರು ಸಂಸದ.
ಮೈಸೂರು, ಮಾರ್ಚ್ 1: ಭಾರತದ ಸೇವೆಯಲ್ಲಿದ್ದಾಗಲೇ ಹುತಾತ್ಮರಾದ ಯೋಧ ಕ್ಯಾಪ್ಟನ್ ಮಂಗಲ್ ದೀಪ್ ಸಿಂಗ್ ಅವರ ಮಗಳಾದ ಗುರ್ಮೆಹರ್ ಕೌರ್ ಅವರು, ತಮ್ಮ ತಂದೆಯ ತ್ಯಾಗವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇತ್ತೀಚೆಗೆ, ಫೇಸ್ ಬುಕ್ ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಅಸಹನೆ ವ್ಯಕ್ತಪಡಿಸುವ ಮೂಲಕ ಆಂದೋಲನ ಆರಂಭಿಸಿದ್ದ ಗುರ್ಮೆಹರ್ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದರು.
ಇದೇ ವೇಳೆ, ಗುರ್ಮೆಹರ್ ವಿರುದ್ಧ ಕೆಲವಾರು ಟ್ವೀಟ್ ಗಳನ್ನು ಮಾಡಿದ್ದ ಪ್ರತಾಪ್ ಸಿಂಹ, ನಿರ್ದಿಷ್ಟವಾದ ಒಂದು ಟ್ವೀಟ್ ಮೂಲಕ ವಿವಾದವನ್ನು ಮೈಮೇಲೆಳೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದೇ ವೇಳೆ, ಇದೇ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಕೆಲವಾರು ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದ್ದಾರೆ. ಆ ಉತ್ತರಗಳ ಆಯ್ದ ಭಾಗ ಇಲ್ಲಿದೆ.
ರೂಪಕವಷ್ಟೇ
ದಾವೂದ್ ಇಬ್ರಾಹೀಂ ಫೋಟೋದೊಂದಿಗೆ ಗುರ್ಮೆಹರ್ ಫೋಟೋವನ್ನಿರಿಸಿ ಇಬ್ಬರನ್ನೂ ಹೋಲಿಸಿ ಮಾಡಿದ ಟ್ವೀಟ್ ಬಗ್ಗೆ ಮಾತನಾಡಿದ ಅವರು, ಅದು ಫೇಸ್ ಬುಕ್ ನಲ್ಲಿ ಬಂದಿದ್ದ ಫೋಟೋ. ನಾನು ಆದನ್ನು ಟ್ವೀಟ್ ಮಾಡಿದೆನಷ್ಟೆ. ಆದರೆ, ಅದು ದಾವೂದ್ ಜತೆಗೆ ಗುರ್ಮೆಹರ್ ಅವರನ್ನು ಹೋಲಿಸಿದ ಹಾಗಲ್ಲ. ನಾನು ಅದನ್ನು ಗುರ್ಮೆಹರ್ ಅವರದ್ದು ಅಪ್ರಬುದ್ಧ ಹೇಳಿಕೆ ಎಂಬುದನ್ನು ನಿರೂಪಿಸಲು ರೂಪಕವಾಗಿ ತೋರಿಸಿದ್ದೆನಷ್ಟೇ ಎಂದರು.
ದುರ್ಬಳಕೆಗೆ ಕಾರಣವಾದ ಮಂಗಲ್
ಇದೇ ವೇಳೆ, ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಯೋಧ ಮಂಗಲ್ ದೀಪ್ ಸಿಂಗ್ ಅವರ ಮಗಳಾದ ಗುರ್ಮೆಹರ್ ಕೌರ್ ನೀಡಿದ ಒಂದು ಅಪ್ರಬುದ್ಧ ಹೇಳಿಕೆ ರಾಜಕೀಯ ರಂಗು ಪಡೆಯಿತು. ಯೋಧ ಮಂಗಲ್ ದೀಪ್ ಅವರ ತ್ಯಾಗವನ್ನು ದುರ್ಬಳಕೆ ಮಾಡಿಕೊಳ್ಳುವಂತಾಯಿತು. ಇದಕ್ಕೆ ಪರೋಕ್ಷವಾಗಿ ಅವರ ಮಗಳೂ ಕಾರಣರಾದರು ಎಂದರು.
ಕೌರ್ ಇದು ಗೊತ್ತಿರಲಿಲ್ಲ
ಪ್ರತಿಭಟನಾಕಾರರಾದ ಕವಿತಾ ಕೃಷ್ಣನ್ ಹಾಗೂ ಜಾನ್ ದಯಾಲ್ ಅವರ ಜತೆಗೆ ವೇದಿಕೆಯ ಮೇಲೆ ನಿಂತಿದ್ದ ಕೌರ್ ಅವರು, ತಾವೂ ಒಬ್ಬ ಪ್ರತಿಭಟನಾಕಾರೇನೋ ಎಂಬಂತೆ ಆಂದೋಲನ ಶುರು ಮಾಡಿದರು. ಆದರೆ, ಯಾವುದೇ ಆಂದೋಲನವನ್ನು ಶುರು ಮಾಡಬೇಕಾದರಲ್ಲಿ ಅದಕ್ಕೆ ಸಾಕಷ್ಟು ಪೂರ್ವ ತಯಾರಿ, ಸಕಾರಣಗಳು ಇರಬೇಕು. ಇದ್ಯಾವುದೂ ಇಲ್ಲದಂತೆ ಕೌರ್ ವಿವಾದ ಮೈಮೇಲೆಳೆದುಕೊಂಡರು ಎಂದರು.
ಆನಂತರ ಬಂದ ಅರಿವು
ಕೌರ್ ಅವರದ್ದು ಪಾಲಾಯನ ಸೂತ್ರವೆಂದ ಪ್ರತಾಪ್ ಸಿಂಹ ಅವರು, ತಮ್ಮ ತಂದೆಯ ತ್ಯಾಗ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿತ ಮೇಲಷ್ಟೇ ಅವರು ಆಂದೋಲನದಿಂದ ಹಿಂದೆ ಸರಿದರು ಎಂದು ವಿಶ್ಲೇಷಿಸಿದರು.
ಅದು ಅವರ ಅಭಿಪ್ರಾಯ
ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಅವರೇ ಗುರ್ಮೆಹರ್ ವಿರುದ್ಧ ಹರಿಹಾಯ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರೆಂಬ ಪ್ರಶ್ನೆಗೆ ಉತ್ತರಿಸಿದ ಸಿಂಹ, ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದರು.