ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ದೇವೇಗೌಡರು!
Recommended Video
ಮೈಸೂರು, ಏಪ್ರಿಲ್ 09 : ಈ ಬಾರಿಯ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರಿಗಿಂತ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಜಿ.ಟಿ.ದೇವೇಗೌಡ. ಕಾರಣ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಕಣ. ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ನ ಜಿ.ಟಿ.ದೇವೇಗೌಡ ಮುಖಾಮುಖಿಯಾಗಲಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕರು ಜಿ.ಟಿ.ದೇವೇಗೌಡ. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇನೆ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ. ಜಿ.ಟಿ.ದೇವೇಗೌಡ ಅವರಿಗೆ ಬೆಂಬಲವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿಂತಿದ್ದಾರೆ.
ನಿದ್ದೆಗೆಟ್ಟು ಸಿದ್ದರಾಮಯ್ಯ ಮೈಸೂರಲ್ಲಿ ಪ್ರಚಾರಗಿಳಿದಿರುವುದೇಕೆ?
ಜಿ.ಟಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ಒಂದು ಕಾಲದಲ್ಲಿ ಒಟ್ಟಿಗೆ ಇದ್ದವರು. 1983ರಿಂದ ಒಟ್ಟಿಗೆ ಇದ್ದ ಅವರು ಬೇರೆ ಯಾಗಿ 3 ದಶಕಗಳು ಕಳೆದಿವೆ. ಈಗ ಅವರು ಬೇರೆ-ಬೇರೆ ಪಕ್ಷದಲ್ಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖಾಮುಖಿಯಾಗಿ ಚುನಾವಣಾ ಅಖಾಡಕ್ಕಿಳಿದ್ದಾರೆ.
ಮೈಸೂರಲ್ಲಿ ಸಿದ್ದರಾಮಯ್ಯಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
'ವರುಣಾ ಕ್ಷೇತ್ರಕ್ಕೆ ಹೋದ ಬಳಿಕ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದಿಲ್ಲ. 5ಬಾರಿ ಗೆದ್ದ ಕ್ಷೇತ್ರವನ್ನು ಅವರು ಕಡೆಗಣಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ' ಎಂದು ಜಿ.ಟಿ.ದೇವೇಗೌಡ ಅವರು ಆರೋಪಿಸುತ್ತಾರೆ.
ಹಲವಾರು ಏಳು-ಬೀಳು ಕಂಡಿದ್ದಾರೆ
ಸುಧೀರ್ಘ ರಾಜಕೀಯ ಜೀವನದಲ್ಲಿ ಜಿ.ಟಿ.ದೇವೇಗೌಡರು ಹಲವಾರು ಏಳು-ಬೀಳುಗಳನ್ನು ಕಂಡಿದ್ದಾರೆ. ಮೊದಲ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅವರು ಅಧ್ಯಕ್ಷರಾದರು. ನಂತರ ಹುಣಸೂರು ಕ್ಷೇತ್ರದಿಂದ ಶಾಸಕರಾದರು.ಲೋಕಸಭೆ ಚುನಾವಣೆಯಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಸೋಲು ಕಂಡರು.
ಸಿದ್ದರಾಮಯ್ಯ ಜೊತೆಗಿನ ಸ್ನೇಹ ಕಡಿದುಕೊಂಡ ಜಿ.ಟಿ.ದೇವೇಗೌಡರು ಬಿಜೆಪಿ ಸೇರಿದರು. ನಂತರ ಜೆಡಿಎಸ್ ಪಕ್ಷಕ್ಕೆ ಸೇರಿದರು. 2013ರ ಚುನಾವಣೆಯಲ್ಲಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ.
ಹಳೆಯ ನೆನಪು ಮಾಡಿಕೊಂಡ ದೇವೇಗೌಡರು
ಬಿಡುವಿಲ್ಲದ ಪ್ರಚಾರ ಕಾರ್ಯದ ನಡುವೆಯೂ ಜಿ.ಟಿ.ದೇವೇಗೌಡರು ಹಳೆಯ ನೆನಪುಗಳನ್ನು ಮಾಡಿಕೊಂಡಿದ್ದಾರೆ. 'ಒಂದು ಕಾಲದ ನನ್ನ ಸ್ನೇಹಿತನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದವರಲ್ಲಿ ನಾನು ಒಬ್ಬ. ಆದರೆ, ಅವರು ಅಧಿಕಾರಕ್ಕೆ ಬಂದ ಬಳಿಕ ನನ್ನ ವಿರುದ್ಧ ದ್ವೇಷ ಸಾಧಿಸಿದರು' ಎಂದು ಹೇಳಿದ್ದಾರೆ.
'ರಾಜಕೀಯವಾಗಿ ನನ್ನನ್ನು ತುಳಿಯಲು ಅವರು ಪ್ರಯತ್ನ ಮಾಡಿದರು. ಲೋಕಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಸಿದ್ದರಾಮಯ್ಯ ಕೆಲಸ ಮಾಡಿದರು' ಎಂದು ಜಿ.ಟಿ.ದೇವೇಗೌಡರು ನೆನಪು ಮಾಡಿಕೊಂಡರು.
ಸಿದ್ದರಾಮಯ್ಯ ಸೋಲುತ್ತಾರಾ, ಏಕೆ?
'ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರಕ್ಕೆ ಹೋದ ಬಳಿಕ ಚಾಮುಂಡೇಶ್ವರಿಯನ್ನು ಕಡೆಗಣಿಸಿದ್ದಾರೆ. 5 ಬಾರಿ ಗೆಲುವು ಕಂಡ ಕ್ಷೇತ್ರದತ್ತ ಮುಖ ಮಾಡಿಲ್ಲ. ಜನರಿಗೆ ಈ ಬಗ್ಗೆ ತಿಳಿದಿದೆ. ಈ ಬಾರಿ ಅವರು ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. 10 ವರ್ಷಗಳ ಬಳಿಕ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಿದ್ದಾರೆ ಎಂಬುದನ್ನು ಜನರು ಬಲ್ಲರು.
'ನನ್ನ ಗೆಲುವಿಗೆ ನಾನು ಜನರ ಕೈಗೆ ಸುಲಭವಾಗಿ ಸಿಗುವುದೇ ಸಹಕಾರಿಯಾಗಲಿದೆ. ಅದನ್ನು ಜನರು ಸಹ ಗೌರವಿಸುತ್ತಾರೆ. ಆದರೆ, ಸಿದ್ದರಾಮಯ್ಯ ಅವರದ್ದು ಸರ್ವಾಧಿಕಾರಿ ವ್ಯಕ್ತಿತ್ವ. ಅವರು ಜನರ ಬಳಿ ಹೋಗುವುದೇ ಇಲ್ಲ' ಎಂದು ಜಿ.ಟಿ.ದೇವೇಗೌಡರು ಹೇಳಿದ್ದಾರೆ.
ದಲಿತರ ವಿರೋಧ ಕಟ್ಟಿಕೊಂಡ ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ದಲಿತ ಸಂಘಟನೆಗಳ ವಿರೋಧ ಕಟ್ಟಿಕೊಂಡಿದ್ದಾರೆ. ಅವರು ಚುನಾವಣೆಯಲ್ಲಿ ವಿರುದ್ಧವಾಗಿ ಕೆಲಸ ಮಾಡಿದರೆ ಸಿದ್ದರಾಮಯ್ಯ ಅವರು ಸೋಲು ಕಾಣಬಹುದು.
ಈಗಾಲಗೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಮನೆ-ಮನೆಗೆ ತೆರಳಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಬೇಕಿದೆ.