ಮುಖ್ಯಮಂತ್ರಿಯಿಂದ ವಿಧಾನಸಭೆಯಲ್ಲಿ 'ಜಿಎಸ್ಟಿ' ವಿಧೇಯಕ ಮಂಡನೆ
ಬೆಂಗಳೂರು, ಜೂನ್ 7: 'ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ವಿಧೇಯಕ-2017'ನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಸದನದ ಮುಂದೆ ಮಂಡಿಸಿದರು.
ಜುಲೈ 1ರಿಂದ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಯನ್ನು ದೇಶಾದ್ಯಂತ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿದ್ದು ಈ ಹಿನ್ನಲೆಯಲ್ಲಿ ಕರ್ನಾಟಕ ಜಿಎಸ್ಟಿಯನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು.[ಕಮಲ ಹಾಸನ್ ಟೀಕೆಗೆ ಅರುಣ್ ಜೇಟ್ಲಿ ಖಡಕ್ ಉತ್ತರ]
ವಿಧೇಯಕ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಈ ವಿಧೇಯಕದ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯವನ್ನು ನೀಡಬಹುದು. ಆದರೆ ಇಲ್ಲೇ ಇದಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಜಿಎಸ್ಟಿ ಕುರಿತ ಪರಿಷತ್ ಸಭೆಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಭಾಗವಹಿಸಲಿದ್ದಾರೆ. ಅಲ್ಲಿ ಈ ಅಭಿಪ್ರಾಯಗಳ್ನು ತಿಳಿಸಲಾಗುವುದು," ಎಂದು ಹೇಳಿದರು.
"ಈ ಹಿಂದೆ ಸಚಿವರಾದ ಮಹದೇವಪ್ಪ ಮತ್ತು ಕೃಷ್ಣಭೈರೇಗೌಡ ಅವರು ಜಿಎಸ್ಟಿ ಮಂಡಳಿ ಸಭೆಗೆ ಹಾಜರಾಗಿದ್ದರು. ಅವರಿಂದ ಶಾಸಕರಿಗೊಂದು ಕಾರ್ಯಾಗಾರ ಆಯೋಜಿಸಿ ಚರ್ಚೆ ಮಾಡೋಣ," ಎಂದು ಸಿದ್ದರಾಮಯ್ಯ ಹೇಳಿದರು.[ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ]
ಇನ್ನು, "ಕೇಂದ್ರ ಸರಕಾರ ಶೇ. 14ರಷ್ಟು ತೆರಿಗೆ ಇರಬೇಕೆಂಬ ನಿಯಮಾವಳಿ ಜಾರಿಗೆ ತಂದಿದೆ. ಇದರಿಂದ ಹೆಚ್ಚಿನ ತೆರಿಗೆ ಹಾಕುತ್ತಿದ್ದ ರಾಜ್ಯಗಳ ಆದಾಯಕ್ಕೆ ಕತ್ತರಿ ಬೀಳಲಿದೆ. ಆದರೆ ಮುಂದಿನ 5 ವರ್ಷ ಇದಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಲಿದೆ," ಎಂದೂ ಮುಖ್ಯಮಂತ್ರಿಗಳು ಹೇಳಿದರು.
ಇನ್ನು ಜಿಎಸ್ಟಿ ಮಂಡನೆಗೂ ಮುನ್ನ ಮಾತನಾಡಿದ ಜೆಡಿಎಸ್ ನ ವೈಎಸ್ ವಿ ದತ್ತಾ, ಒಂದೊಮ್ಮೆ ಜಿಎಸ್ಟಿ ಜಾರಿಯಾದರೆ ರಾಜ್ಯ ಸರ್ಕಾರಕ್ಕಿರುವ ಅಧಿಕಾರವೇ ಹೊರಟು ಹೋಗಲಿದೆ. ಪ್ರಧಾನಿ ನರೇಂದ್ರ ಮೋದಿ ಚಕ್ರವರ್ತಿಯಾಗಲಿದ್ದು, ನಾವು ಸಾಮಂತ ರಾಜ್ಯಗಳಂತಾಗುತ್ತೇವೆ. ಅವರ ಮುಂದೆ ಭಿಕ್ಷಾಪಾತ್ರೆ ಹಿಡಿಯಬೇಕಾಗುತ್ತದೆ," ಎಂದು ಹೇಳಿದ್ದರು.[ಜುಲೈ 1ರಿಂದ ಅಪಾರ್ಟ್ ಮೆಂಟ್ ಮೇಂಟೆನೆನ್ಸ್ ಶುಲ್ಕ ಹೆಚ್ಚಳ]
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಪಕ್ಷ (ಜೆಡಿಎಸ್) ಸಂಸತ್ತಿನಲ್ಲಿ ಯಾಕೆ ಜಿಎಸ್ಟಿ ವಿರೋಧಿಸಿಲ್ಲ. ವಿರೋಧಿಸಿದ್ದರೆ ನನಗೆ ದಾಖಲೆ ತಂದು ಕೊಡಿ ಎಂದು ಹೇಳಿದರು.
ಶಾಸಕರ ಒತ್ತಾಯ ಮತ್ತು ಮುಖ್ಯಮಂತ್ರಿಗಳ ಸಲಹೆ ಮೇರೆಗೆ ನಾಳೆ ಬೆಳಗ್ಗೆ 9 ಗಂಟೆಗೆ ಜಿಎಸ್ಟಿ ಕುರಿತ ಚರ್ಚಾಗೋಷ್ಠಿಯನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಆಯೋಜಿಸಿದ್ದಾರೆ.