ಪ್ರವಾಸಿಗರ ಮೇಲೆ ದಾಳಿಗೆ ಮುಂದಾದ ಆನೆ: ವೈರಲ್ ವಿಡಿಯೋ
ಚಿಕ್ಕಮಗಳೂರು, ಜೂನ್ 8: ಆನೆಗಳ ನೀರಾಟದ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ಪ್ರವಾಸಿಗರ ಮೇಲೆ ತಾಯಿ ಆನೆಯೊಂದು ದಾಳಿ ಮಾಡಲು ಮುಂದಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಮುತ್ತೋಡಿಯ ಭದ್ರಾ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಅದರ ವಿಡಿಯೋ ವೈರಲ್ ಆಗಿದೆ.
ಆನೆ ಬಂತೊಂದಾನೆ: ಹಳಿಯಾಳಕ್ಕೆ ದಾರಿ ತಪ್ಪಿ ಬಂದ ಕಾಡಾನೆ
ಮಂಗಳವಾರ ಕೆಲವು ಪ್ರವಾಸಿಗರು ಮುತ್ತೋಡಿಯಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ಸಫಾರಿಯ ದಾರಿ ಬದಿಯಲ್ಲಿ ಇದ್ದ ಚಿಕ್ಕ ಕೆರೆಯಲ್ಲಿ ಆನೆಗಳ ಹಿಂಡು ಆಟವಾಡುತ್ತಿದ್ದವು.
ಸಫಾರಿ ವಾಹನ ನಿಲ್ಲಿಸಿದ ಪ್ರವಾಸಿಗರು ಆನೆಗಳ ಜಲಕ್ರೀಡೆಯನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು. ಒಂದು ಆನೆ ತನ್ನ ಪಾಡಿಗೆ ಕೆರೆಯಿಂದ ಕಾಡಿನೊಳಗೆ ತೆರಳಿತು.
ಆದರೆ, ಮೂರು ಮರಿಗಳೊಂದಿಗೆ ನೀರಿನಿಂದ ಹೊರಬಂದ ತಾಯಿ ಆನೆ, ಪ್ರವಾಸಿಗರನ್ನು ಕಂಡು ಸಿಟ್ಟಿಗೆದ್ದಿತು. ಘೀಳಿಡುತ್ತಾ ವಾಹನದತ್ತ ಓಡಿಬಂತು. ಅದನ್ನು ಉಳಿದ ಮೂರು ಮರಿಗಳೂ ಹಿಂಬಾಲಿಸಿದವು.
ಆನೆ ದಾಳಿಯ ಅಪಾಯವನ್ನು ಅರಿತ ಪ್ರವಾಸಿಗರು ಕೂಡಲೇ ಜೀಪ್ ಚಲಾಯಿಸಿ ಅಲ್ಲಿಂದ ತಪ್ಪಿಸಿಕೊಂಡರು.
ಪ್ರಾಣಿಗಳಿಗೆ
ಏಕಾಂತ
ಬೇಡವೇ?
ಈಗಾಗಲೇ
ಬಹುತೇಕ
ಕಾಡು
ನಾಶವಾಗಿ
ನಗರಗಳಾಗಿ
ಮಾರ್ಪಟ್ಟಿವೆ.
ಜನಸಂಖ್ಯೆ
ಹೆಚ್ಚಿದಂತೆ
ಅರಣ್ಯದ
ಪ್ರಮಾಣವೂ
ಕಡಿಮೆಯಾಗುತ್ತಿದೆ.
ಆನೆನೂ ಸ್ಮೋಕಿಂಗ್ ಮಾಡುತ್ತೆ? ಈ ಸುದ್ದಿ ಓದಿ !
ನಾವು ಪ್ರಾಣಿಗಳ ಆವಾಸ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿದ್ದೇವೆ. ಇದರಿಂದಲೇ ಮಾನವ-ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತಿರುವುದು.
ಅರಣ್ಯದಲ್ಲಿ ಸಾಕಷ್ಟು ಜಾಗವಿಲ್ಲದೆ ಇರುವುದು, ಆಹಾರದ ಕೊರತೆ ಮುಂತಾದ ಕಾರಣಗಳಿಂದ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಅತ್ತ ಇರುವ ಅಲ್ಪಸ್ವಲ್ಪ ಕಾಡಿನಲ್ಲಿಯೂ ಪ್ರಾಣಿಗಳನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ.
ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ವನ್ಯಜೀವಿಗಳ ರಕ್ಷಣೆಗೆ ಅರಣ್ಯಪ್ರದೇಶಗಳನ್ನು ಮೀಸಲಿಡಲಾಗಿದೆ. ಆದರೆ, ಇಲ್ಲಿಯೂ ಪ್ರಾಣಿಗಳ ಏಕಾಂತಕ್ಕೆ ಮುಕ್ತ ಅವಕಾಶವಿಲ್ಲ.
ಸಫಾರಿಯ ಹೆಸರಿನಲ್ಲಿ ವನ್ಯಜೀವಿಗಳಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಸುದೀರ್ಘ ಕಾಲದಿಂದಲೂ ವನ್ಯಜೀವಿ ಪ್ರಿಯರು ಆರೋಪಿಸುತ್ತಿದ್ದಾರೆ.
ಸಫಾರಿಗೆ ತೆರಳುವ ಪ್ರವಾಸಿಗರು ಪ್ರಾಣಿಗಳನ್ನು ಕಂಡು ಜೋರಾಗಿ ಕಿರಿಚುವ, ಅವುಗಳ ಫೋಟೊಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯುವ ಚಟುವಟಿಕೆಗಳನ್ನು ಮಾಡುತ್ತಾರೆ. ಇದರಿಂದ ಪ್ರಾಣಿಗಳು ರೊಚ್ಚಿಗೆದ್ದು ದಾಳಿ ನಡೆಸುವ ಅಥವಾ ಬೆದರುವ ಘಟನೆಗಳು ನಡೆದಿವೆ.
ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆಯಲ್ಲಿಯೂ ಪ್ರವಾಸಿಗರನ್ನು ಕಂಡು, ಮರಿಗೆ ಅಪಾಯವಾಗಬಹುದೆಂದು ತಾಯಿ ಆನೆ ದಾಳಿ ನಡೆಸಲು ಮುಂದಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇತ್ತೀಚೆಗೆ ಸಫಾರಿಗೆ ತೆರಳಿದ್ದ ತಂಡವೊಂದು ಹುಲಿಯೊಂದನ್ನು ಸುತ್ತುವರಿದು ಅದರ ಚಿತ್ರಗಳನ್ನು ತೆಗೆದು ತೊಂದರೆ ನೀಡಿದ ಘಟನೆ ವರದಿಯಾಗಿತ್ತು.
ಇದರಿಂದ ಸಫಾರಿ ವೇಳೆ ಮೊಬೈಲ್ ಬಳಸುವುದನ್ನು, ವಿಡಿಯೊ, ಚಿತ್ರಗಳನ್ನು ತೆಗೆಯುವುದನ್ನು ನಿಷೇಧಿಸಲು ಅರಣ್ಯ ಇಲಾಖೆ ಮುಂದಾಗಿತ್ತು.