ಬ್ಯಾಂಕ್ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಕರವೇ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 9: ರಾಜ್ಯದ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ವಿಚಾರದಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಶನಿವಾರ (ಸೆಪ್ಟೆಂಬರ್ 9) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಬೆಂಗಳೂರು ಸೇರಿದಂತೆ, ದಾವಣಗೆರೆ, ಚಿಕ್ಕಬಳ್ಳಾಪುರ, ಉಡುಪಿ ಮುಂತಾದ ಕಡೆ ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಂಡು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬ್ಯಾಂಕಿಂಗ್ ಪರೀಕ್ಷೆ ಎದುರಿಸುವುದು ಹೇಗೆ? ಕರವೇಯಿಂದ ಮಾರ್ಗದರ್ಶನ
ರಾಜ್ಯದಲ್ಲಿರುವ ಗ್ರಾಮೀಣ ಬ್ಯಾಂಕುಗಳಲ್ಲಿರುವ ಉದ್ಯೋಗಗಳು ಕೇವಲ ಕನ್ನಡಿಗರಿಗೇ ಸಿಗಬೇಕು. ನಮ್ಮ ರಾಜ್ಯದ ಹುದ್ದೆಗಳು ಕನ್ನಡಿರಲ್ಲದೆ, ಅನ್ಯ ರಾಜ್ಯದವರ ಪಾಲಾಗಬಾರದು ಎಂದು ಅವರು ತಿಳಿಸಿದರು.
ಅಲ್ಲದೆ, ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳನ್ನು ಕನ್ನಡಿಗರಲ್ಲದವರಿಗೆ ನೀಡುವಂಥ ಹುನ್ನಾರ ನಡೆಸಲಾಗುತ್ತಿದೆ. ಇದನ್ನು ಕರವೇ ಎಂದಿಗೂ ಸಹಿಸದು. ಕನ್ನಡ ನೆಲದ ಉದ್ಯೋಗಗಳಿಗೆ ಕನ್ನಡಿಗರು ಅರ್ಹರಾಗಿದ್ದಾರೆ. ಅವರಿಗೇ ಉದ್ಯೋಗಗಳು ಸಿಗಬೇಕು ಎಂದು ಅವರು ಆಗ್ರಹಿಸಿದರು.
ಹಿಂದಿ ಹೇರಿಕೆ ವಿರೋಧಿಸಿ ಎಸ್.ಬಿ.ಐ ವಿರುದ್ಧ ಕರವೇ ಪ್ರತಿಭಟನೆ
ಕರವೇ ಕಾರ್ಯಕರ್ತರ ಈ ಬೇಸರಕ್ಕೆ ಕಾರಣಗಳು, ಪ್ರತಿಭಟನೆ ವೇಳೆ ಮೂಡಿಬಂದ ಘೋಷಣೆಗಳು, ಭಾಷಣಗಳ ಪ್ರಮುಖಾಂಶಗಳು ಇಲ್ಲಿವೆ.
ಹೊಸ ರಾಜ್ಯಗಳ ಅಭ್ಯರ್ಥಿಗಳ ವಿರುದ್ಧ ಪ್ರತಿಭಟನೆ
ಕರವೇ ಹೀಗೆ ಪ್ರತಿಭಟನೆ ಮಾಡಲು ಸಕಾರಣವಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಇದೇ ತಿಂಗಳ 9, 10, 16, 23 ಹಾಗೂ 24ರಂದು ಪರೀಕ್ಷೆ ನಡೆಯುತ್ತಿದೆ. ಈ ಪ್ರವೇಶ ಪರೀಕ್ಷೆಗಳಿಗೆ ಹೊರರಾಜ್ಯದ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಿರುವುದು ಕರವೇ ಆಕ್ರೋಶಕ್ಕೆ ಮೂಲ ಕಾರಣ. ಬೆಂಗಳೂರಿನಲ್ಲಿ ಈ ಬಗ್ಗೆ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು.
ಪ್ರವೇಶಾತಿ ಪರೀಕ್ಷೆ ತಡೆಹಿಡಿಯಲು ಆಗ್ರಹ
ದಾವಣಗೆರೆಯಲ್ಲಿ ನಡೆದ ಪ್ರತಿಭಟನೆ ವೇಳೆ, ಬೇರೆ ರಾಜ್ಯಗಳ ಅಭ್ಯರ್ಥಿಗಳು ಇಲ್ಲಿ ಬಂದು ಪರೀಕ್ಷೆ ಬರೆದು ಉದ್ಯೋಗಗಳನ್ನು ಗಿಟ್ಟಿಸಿಕೊಂಡರೆ, ನಮ್ಮ ಕನ್ನಡಿಗರಿಗೆ ಅನ್ಯಾಯವಾದಂತೆ ಎಂದು ಕಿಡಿಕಾರಿರುವ ಕರವೇ, ತಕ್ಷಣವೇ ಈ ಪ್ರವೇಶಾತಿ ಪರೀಕ್ಷೆಗಳನ್ನು ತಡೆಹಿಡಿಯುವಂತೆ ಕರವೇ ಆಗ್ರಹಿಸಿತು. ನಗರದ ಮಾಮಾಸ್ ಜಾಯಿಂಟ್ ರಸ್ತೆಯ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಘೋಷಣೆ ಕೂಗಿದರು.
ಕೇಂದ್ರ ಸರ್ಕಾರದ ವಿರುದ್ಧ ಕಿಡಿ
ಇದು ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರತಿಭಟನೆಯ ಚಿತ್ರ. ಹೊರ ರಾಜ್ಯಗಳ ಅಭ್ಯರ್ಥಿಗಳಿಗೆ ಇಲ್ಲಿನ ಗ್ರಾಮೀಣ ಬ್ಯಾಂಕುಗಳ ಪ್ರವೇಶಾತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂಬುದು ಕರವೇ ಆರೋಪ.
ಹಳೆ ನಿಯಮ ತೆಗೆದುಹಾಕಿದ ಕೇಂದ್ರ ಸರ್ಕಾರ
1998ರಿಂದ 2000ರ ಅವಧಿಯಲ್ಲಿ ರಾಜ್ಯದ ಗ್ರಾಮೀಣ ಬ್ಯಾಂಕುಗಳಲ್ಲಿನ ನೇಮಕಾತಿಗಳು ನೇರವಾಗಿಯೇ ಆಗುತ್ತಿದ್ದವು. ಆಗ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿವರೆಗೆ ಕನ್ನಡ ಓದಿರಲೇಬೇಕೆಂಬ ನಿಯಮವಿತ್ತು. ಆದರೆ, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಸರ್ಕಾರ ಈ ನಿಯಮವನ್ನು ತೆಗೆದು ಹಾಕಿತು. ಹಾಗಾಗಿ, ಈ ಹುದ್ದೆಗಳಿಗೆ ಬೇರೆ ರಾಜ್ಯಗಳ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅನುಕೂಲವಾಯಿತು ಎಂದು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ವಿವರಿಸಿದರು.
ಕನ್ನಡದಲ್ಲೇ ಪರೀಕ್ಷೆ ನಡೆಯಬೇಕು
ಈಗ ಚಾಲ್ತಿಗೆ ಬಂದಿರುವ ಐಬಿಪಿಎಸ್ (ಇನ್ಸಿಟಿಟ್ಯೂಟ್ ಆಫ್ ಬ್ಯಾಂಕಿಂಗ್ ಆ್ಯಂಡ್ ಪರ್ನನಲ್ ಸೆಲೆಕ್ಷನ್) ವತಿಯಿಂದ ಗ್ರಾಮೀಣ ಬ್ಯಾಂಕ್ ಪರೀಕ್ಷೆಗಳು ನಡೆಯುವುದನ್ನು ತಪ್ಪಿಸಬೇಕು. ಕನ್ನಡದಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಸಂಘಟನೆಯ ಮತ್ತೊಂದು ಆಗ್ರಹವಾಗಿದೆ.