ಐದು ವರ್ಷಗಳ ಬಳಿಕ ಗೌರಿ ಲಂಕೇಶ್ ಹತ್ಯೆ ವಿಚಾರಣೆ: ಜು.4ರಿಂದ ಆರಂಭ
ಬೆಂಗಳೂರು ಮೇ 27. ಕೊನೆಗೂ ಐದು ವರ್ಷಗಳ ಬಳಿಕ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಗೆ ಮುಹೂರ್ತ ಕೂಡಿಬಂದಂತೆ ಕಾಣುತ್ತಿದೆ.
ನಾನಾ ಕಾರಣಗಳಿಂದಾಗಿ ವಿಳಂಬವಾಗುತ್ತಿದ್ದ ವಿಚಾರಣೆ, ಬಹುತೇಕ ಜು.4ರಿಂದ ಆರಂಭವಾಗುವುದು ನಿಶ್ಚಿತವಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮೊದಲ ಸಾಕ್ಷಿಯಾಗಿರುವ ಕವಿತಾ ಲಂಕೇಶ್ ಅವರ ಸಾಕ್ಷ್ಯವನ್ನು ಬೆಂಗಳೂರು ನಗರ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ ಶುಕ್ರವಾರ ದಾಖಲಿಸಿದರು. ಬಳಿಕ ಅವರು, ಆರೋಪಿಗಳ ವಿಚಾರಣೆಯನ್ನು ಇದೇ ಜುಲೈ 4ರಿಂದ 8ರವರೆಗೆ ಪ್ರತಿದಿನ ನಡೆಸಲಾಗುವುದು ಎಂದು ಆದೇಶಿಸಿದರು.
ಪ್ರಕರಣ ಸಂಬಂಧ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಸಹೋದರಿ ಕವಿತಾ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ದಾಖಲಿಸಿದರು. ಅವರ ಜತೆಗೆ, ವಿಚಾರಣೆ ವೇಳೆ 18 ಆರೋಪಿಗಳ ಪೈಕಿ 11 ಮಂದಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಉಳಿದ ಏಳು ಮಂದಿ ಆರೋಪಿಗಳು ಗೈರಾಗಿದ್ದರು.
ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಮತ್ತು ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ ಅವರ ಕೊಲೆಯಲ್ಲೂ ಈ ಏಳು ಜನ ಆರೋಪಿಗಳಾಗಿದೆ. ಅವರನ್ನು ಮುಂಬೈನ ಆರ್ಥರ್ ಜೈಲಿನಲ್ಲಿ ಇರಿಸಿರುವ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದ ವಿಚಾರಣೆಯನ್ನು ಜುಲೈ 4 ಕ್ಕೆ ಮುಂದೂಡಲಾಯಿತು.
ಮತ್ತೆ ವಿಚಾರಣೆ ಮುಂದೂಡಿಕೆ ಇಲ್ಲ:
ಇದೇ ವೇಳೆ ಜಡ್ಜ್, ಜು.4ರಿಂದ 8ವರೆವರೆಗೆ ಆರೋಪಿಗಳ ವಿಚಾರಣೆಯನ್ನು ಪ್ರತಿದಿನ ನಡೆಸಲಾಗುವುದು. ಮಹಾರಾಷ್ಟ್ರದ ಆರ್ಥರ್ ಜೈಲಿನಲ್ಲಿ ಇರುವ ಏಳು ಆರೋಪಿಗಳಿಗೂ ಮತ್ತು ಅಲ್ಲಿನ ಜೈಲು ಅಧಿಕಾರಿಗಳಿಗೆ ಈ ವಿಚಾರ ತಿಳಿಸಲಾಗುವುದು. ಆರೋಪಿಗಳೊಂದಿಗೆ ಮಾತುಕತೆ ನಡೆಸಲು ವಕೀಲರಿಗೆ ಅವಕಾಶ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಲಾಗುವುದು. ಆದರೆ, ಮುಂದಿನ ಬಾರಿ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
ಅಲ್ಲದೆ, ಯಾವ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಲಾಗುತ್ತಿದೆ ಎಂಬ ಸಂಬಂಧ ಜೂ.6ರಂದು ಎಸ್ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಬೇಕು. ಅದನ್ನು ಆಧರಿಸಿ ಯಾರನ್ನು ಪಾಟೀ ಸವಾಲಿಗೆ ಒಳಪಡಿಸಬೇಕು ಎಂಬುದನ್ನು ಆರೋಪಿಗಳ ವಕೀಲರು ತಿಳಿಸಲಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.
ಪ್ರಕರಣದ ಹಿನ್ನೆಲೆ:
2017ರ ಸೆ.5ರಂದು ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಗೌರಿ ಲಂಕೇಶ್ಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ಪ್ರಮುಖ ರೂವಾರಿ ಅಮೋಲ್ ಕಾಳೆ. ಪರಶುರಾಮ್ ವಾಗ್ಮೋರೆ ಗುಂಡು ಹಾರಿಸಿದ್ದರೆ, ಬೈಕ್ ಚಲಾಯಿಸಿದ ಆರೋಪ ಗಣೇಶ್ ಮಿಸ್ಕಿನ್ ಮೇಲಿದೆ. ಎಸ್ಐಟಿಯು 18 ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ 5800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 527ಸಾಕ್ಷಿಗಳಿದ್ದಾರೆ.