ಗೌಡರ ಸಮುದಾಯ ಹೆಚ್ ಡಿಕೆ, ಡಿಕೆಶಿ ಸ್ವತ್ತಲ್ಲ: ತೇಜಸ್ವಿನಿ ರಮೇಶ್ ವಾಗ್ದಾಳಿ
ರಾಮನಗರದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ ಮಾಜಿ ಸಂಸದೆ ಹಾಗೂ ಬಿಜೆಪಿ ನಾಯಕಿ; ಕಾಂಗ್ರೆಸ್ ವಿರುದ್ಧ 20ರಂದು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸುವ ಪ್ರಕಟಣೆ
ರಾಮನಗರ, ಫೆಬ್ರವರಿ 18: ಗೌಡರ ಸಮುದಾಯ ಅಧಿಕೃತ ಪ್ರತಿನಿಧಿಗಳಂತೆ ಮಾತನಾಡುವ ಹಾಗೂ ಗೌಡರ ಸಮುದಾಯವನ್ನು ತಮ್ಮ ಆಸ್ತಿಯೆಂಬಂತೆ ಪರಿಗಣಿಸುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಹಾಗೂ ಹಾಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ಗೌಡರ ಸಮುದಾಯಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರು ಕಿಡಿಕಾರಿದ್ದಾರೆ.
ಅಲ್ಲದೆ, ಡಿಕೆಶಿ, ಎಚ್ ಡಿಕೆ ಇಬ್ಬರೂ ಧುರ್ಯೋಧನ, ದುಶ್ಯಾಸನರಿದ್ದಂತೆ ಎಂದೂ ಅವರು ಕಿಡಿಕಾರಿದ್ದಾರೆ.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡರ ಸಮುದಾಯಕ್ಕೆ ರಾಜಕೀಯವಾಗಿ ಕುಮಾರಸ್ವಾಮಿ ಅವರೊಬ್ಬರಿಂದ ಉಪಯೋಗವಾಗಿಲ್ಲ. ಗೌಡರ ಸಮುದಾಯಕ್ಕೆ ಬಿಜೆಪಿ ಸಹ ರಾಜಕೀಯವಾಗಿ ಸಾಕಷ್ಟು ಸಂದರ್ಭಗಳಲ್ಲಿ ನೆರವಾಗಿದೆ.
ಖುದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬಿಜೆಪಿಯ ಬೆಂಬಲವೇ ಕಾರಣವಾಗಿತ್ತು. ಆನಂತರದ ದಿನಗಳಲ್ಲಿ ಸದಾನಂದ ಗೌಡ ಅವರಿಗೆ ಮುಖ್ಯಮಂತ್ರಿ ಸ್ಥಾನ, ಆರ್. ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಗೌಡರ ಸಮುದಾಯಕ್ಕೆ ನೆರವಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಡಿ.ಕೆ. ಶಿವಕುಮಾರ್ ಅವರನ್ನು ಬೆಳೆಸಿದರು. ಅಂತಹ ಹಿರಿಯರು ಪಕ್ಷ ಬಿಡುವ ಸಂದರ್ಭ ಬಂದಾಗ, ಅವರ ಬೆನ್ನಿಗೆ ಶಿವಕುಮಾರ್ ಗಟ್ಟಿಯಾಗಿ ನಿಲ್ಲಲಿಲ್ಲ. ಸುಮ್ಮನೇ ನೆಪಮಾತ್ರಕ್ಕೆ ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡಿದರಷ್ಟೇ. ಅವರು ಬರೀ ಮಾತಿನಲ್ಲಿ ಆರ್ಭಟಿಸುತ್ತಾರೆಯೇ ಹೊರತು, ಯಾರಿಗೂ ಉಪಕಾರವಾಗುವಂಥ ಕೆಲಸ ಮಾಡಿಲ್ಲ ಎಂದು ಆಪಾದಿಸಿದರು.
ಪ್ರತಿಭಟನೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಇದೇ ತಿಂಗಳ 20ರಂದು ಬಿಜೆಪಿಯು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅವರು ತಿಳಿಸಿದರು.