ಕೆಂಪಾಪುರದಲ್ಲಿರುವ ಕೆಂಪೇಗೌಡ ಸಮಾಧಿ ಅಭಿವೃದ್ಧಿಗೆ ನಾಳೆಯೇ 10 ಕೋಟಿ ರೂ. ಬಿಡುಗಡೆ!
ಬೆಂಗಳೂರು, ಆ. 15: ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಅತಿ ಸನಿಹದಲ್ಲೇ ಇರುವ ರಾಮನಗರ ಜಿಲ್ಲೆಯನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದ್ದು, ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರ ಸಲುವಾಗಿ 35 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಗ್ರಾಮದ ಪುನರ್ ವಸತಿಗಾಗಿ 10 ಕೋಟಿ ರೂ.ಗಳನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ನಾಳೆಯೇ ಜಿಲ್ಲಾಧಿಕಾರಿಗೆ ಕೊಡಲಾಗುತ್ತಿದೆ ಎಂದರು.
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದರು. ಅಪರೂಪದ ಪ್ರಾಕೃತಿಕ ಸಂಪತ್ತು, ಕುಶಲ ಮಾನವ ಸಂಪನ್ಮೂಲ, ಐತಿಹಾಸಿಕ ತಾಣಗಳು, ಕಲೆ ಸಾಂಸ್ಕೃತಿಕ ಪರಂಪರೆ ಹೊಂದಿರುವ ರಾಮನಗರ ಜಿಲ್ಲೆ ಇಡೀ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎಂದರು.
ರೈತರಿಂದ ರೈತರಿಗಾಗಿ ಮತ್ತು ರೈತರಿಗೊಸ್ಕರ ಎಂಬ ಪರಿಕಲ್ಪನೆ
"ರೈತರಿಂದ ರೈತರಿಗಾಗಿ ಮತ್ತು ರೈತರಿಗೊಸ್ಕರ ಎನ್ನುವ ಪರಿಕಲ್ಪನೆಯಡಿ ಜಿಲ್ಲೆಯಲ್ಲಿ 7 ರೈತ ಉತ್ಪಾದಕ ಸಂಘ(FPO )ಗಳಿದ್ದು, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಕಲ್ಪ ಫೌಂಡೇಶನ್ ಸಹಯೋಗದೊಂದಿಗೆ ರೈತ ಉತ್ಪನ್ನಗಳನ್ನು ಅತಿ ಹೆಚ್ವು ಬೆಲೆಗೆ ರೈತರಿಂದ ಖರೀದಿಸಲಾಗುತ್ತಿದೆ. ಇದು ರೈತರದ್ದೇ ಕಂಪನಿಯಾಗಿದ್ದು ಕೃಷಿ ಕಲ್ಪದ ಸಹಾಯ ದಿಂದ ದೂರದ ವಿಶಾಖಪಟ್ಟಣ ಮತ್ತು ದೆಹಲಿಯವರೆಗೆ ರಾಮನಗರದ ಉತ್ಪನ್ನ ಗಳನ್ನು ಕಳಿಸಲಾಗುತ್ತಿದೆ. FPO ಗಳನ್ನು ಬಲಪಡಿಸಲು ಸರ್ಕಾರದಿಂದ ಅಗತ್ಯ ನೆರವು ನೀಡಲಾಗುತ್ತಿದೆ" ಎಂದು ಇದೇ ಸಂದರ್ಭದಲ್ಲಿ ಡಾ. ಅಶ್ವಥ್ ನಾರಾಯಣ ವಿವರಿಸಿದರು.
"ಕೋವಿಡ್ ಮಹಾಮಾರಿಯನ್ನು ಎದುರಿಸಲು ಜಿಲ್ಲೆಯಲ್ಲಿ ವ್ಯಾಪಕ ಕ್ರಮ ವಹಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.58 ಲಸಿಕೀಕರಣ ಆಗಿದೆ. ಈವರೆಗೂ 4.75 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆಯಲ್ಲದೆ, ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದರು.
ನಾಡಪ್ರಭು ಕೆಂಪೇಗೌಡ ಪ್ರವಾಸಿ ಸರ್ಕೂಟ್
"ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು 47 ವೆಂಟಿಲೇಟರ್ ಬೆಡ್ಗಳು ಇದ್ದು, 370 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ವಿಶೇಷ ಐಸಿಯು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.98.31ರಷ್ಟು ಜನ ಕೋವಿಡ್ನಿಂದ ಗುಣಮುಖರಾಗಿದ್ದು, ಈವರೆಗೆ 4,58,111 ಜನ ಮೊದಲ ಡೋಸ್ ಲಸಿಕೆ ಪಡೆದಿದ್ದು, 1,62,662 ಮಂದಿ ಎರಡನೇ ಡೋಸ್ ಪಡೆದಿದ್ದಾರೆ."
"ನಾಡಪ್ರಭು ಕೆಂಪೇಗೌಡರ ಪ್ರವಾಸಿ ಸರ್ಕೂಟ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಜಿಲ್ಲೆಯನ್ನು ಸಾಹಸೀ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ಕೋವಿಡ್ ಸಂಕಷ್ಟ ಕಾಲದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಕುಟುಂಬಕ್ಕೆ 6,000 ರೂ.ಗಳ ಆರ್ಥಿಕ ನೆರವು ನೀಡಲಾಗಿದೆ. ಕೇಂದ್ರದ ಜತೆಗೆ, ರಾಜ್ಯದಿಂದಲೂ 4,000 ರೂ.ಗಳ ಆರ್ಥಿಕ ನೆರವು ಕೊಡಲಾಗಿದೆ. ರಾಜ್ಯದ 55.06 ಲಕ್ಷ ರೈತ ಕುಟುಂಬಗಳಿಗೆ 6940 ಕೋಟಿ ರೂ.ಗಳ ಸಹಾಯಧನ ಕೊಡಲಾಗಿದೆ" ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.
ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ
ಜೊತೆಗೆ ರಾಮನಗರದ 9,263 ರೇಷ್ಮೆ ಬೆಳೆಗಾರರಿಗೆ 23 ಕೋಟಿ ರೂ. ಸಹಾಯಧನ ನೀಡಲಾಗಿದೆ. 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕೆಲಸಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.
ಕೋವಿಡ್ ಲಾಕ್ಡೌನ್ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾದ ರಾಜ್ಯದ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 156 ಕೋಟಿ ರೂ. ವಿತರಣೆ ಮಾಡಲಾಗಿದ್ದು, ಒಟ್ಟು 3514 ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರ ಖಾತೆಗೆ 203 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣದಲ್ಲಿ ಮಾವು ಹಾಗೂ ವಿವಿಧ ಹಣ್ಣುಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ.
ನೀರಾವರಿಗೆ ಅಗ್ರಮಾನ್ಯತೆ ನೀಡಲಾಗಿದ್ದು, ಈಗಾಗಲೇ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿವಿಧ ಜಲ ಮೂಲಗಳಿಂದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ 250 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದೆ ಎಂದು ವಿವರಿಸಿದ್ದಾರೆ.
‘ಜಲ ಜೀವನ್ ಮಿಷನ್’ ಯೋಜನೆ
ಬೆಂಗಳೂರು ಜಲ ಮಂಡಳಿ ಶುದ್ದೀಕರಿಸಿದ ನೀರನ್ನು ಕೆಂಗೇರಿ ಮತ್ತು ದೊಡ್ಡಬೆಲೆಯಿಂದ ಎತ್ತಿ ಬಿಡದಿ ಮತ್ತು ಹಾರೋಹಳ್ಳಿಯ 147 ಕೆರೆ ತುಂಬಿಸುವ 160 ಕೋಟಿ ರೂ.ಗಳ ಕಾಮಗಾರಿ ವಿವಿಧ ಹಂತದಲ್ಲಿದ್ದು, ಕಣ್ವ ಜಲಾಶಯದಿಂದ ನೀರೆತ್ತುವ ಏತ ನೀರಾವರಿ ಯೋಜನೆಯ 28.85 ಕೋಟಿ ರೂ.ಗಳ ಮೊತ್ತದ ಟೆಂಡರ್ ಕಾಮಗಾರಿಗಳು ಪ್ರಸಕ್ತ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ದೊಡ್ಡಾಲಹಳ್ಳಿ ಸೂಕ್ಷ್ಮ ನೀರಾವರಿ ಯೋಜನೆಯ 70 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದ್ದು, ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯ ವ್ಯಾಪ್ತಿಯಲ್ಲಿನ 400 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿಗಾಗಿ 40 ಕೋಟಿ ರೂ. ಕಾಮಗಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದವಾಗಿದ್ದು, ಯೋಜನೆಗೆ ಶೀಘ್ರವೇ ಒಪ್ಪಿಗೆ ಸಿಗಲಿದೆ.
ಗರಳಾಪುರ, ಸಾತನೂರು ಏತ ನೀರಾವರಿ ಯೋಜನೆಗಳಿಂದ 12 ಕೆರೆಗಳಿಗೆ 252 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್' ಯೋಜನೆಯಡಿ 221 ಕೋಟಿ ರೂ.ಗಳ ಅನುದಾನದಲ್ಲಿ ರಾಮನಗರ ಜಿಲ್ಲೆಯ ಎಲ್ಲಾ ಜನವಸತಿಗಳ ಪ್ರತಿ ಮನೆಗೂ ನಳಗಳ ಮೂಲಕ ನೀರೊದಗಿಸುವ ಯೋಜನೆ ಪ್ರಗತಿಯಲಿದೆ ಎಂದು ಇದೇ ಸಂದರ್ಭದಲ್ಲಿ ಡಾ. ಅಶ್ವಥ್ ನಾರಾಯಣ ವಿವರಿಸಿದರು.
Recommended Video