ಕೊರೊನಾ ನಿಯಂತ್ರಣಕ್ಕೆ 4 'C'ಸೂತ್ರ: ಡಾ.ಕೆ.ಸುಧಾಕರ್
ಬೆಂಗಳೂರು ಜುಲೈ 7: ಕೊರೊನಾ ನಿಯಂತ್ರಣಕ್ಕಾಗಿ 5Tಸೂತ್ರ ಅನುಸರಿಸುತ್ತಾ ಬಂದಿರುವ ಕರ್ನಾಟಕದಲ್ಲಿ ಇನ್ನುಮುಂದೆ ಇದರ ಜೊತೆಗೆ 4 C ಸೂತ್ರ ಅನುಸರಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗೋಷ್ಠಿ ನಡೆಸಿದ ಅವರು ಕೊರೊನಾ ಸೋಂಕಿತರ ಸಾವಿನ ಪ್ರಮಾಣ 1% ಗಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಸಚಿವರು, ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿರುವ ಚಿಕಿತ್ಸಾ ಕ್ರಮಗಳನ್ನು ಅಧ್ಯಯನ ಮಾಡಲು ಹಾಗೂ ಅವುಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ಗರಂ!
ಕೊರೋನ ನಿಯಂತ್ರಣಕ್ಕೆ 4 C ಸೂತ್ರ
4C ಸೂತ್ರ (Confidence, Collaboration, Communication, Compassion) ಆತ್ಮ ವಿಶ್ವಾಸ, ಸಹಭಾಗಿತ್ವ, ಸಂವಹನ ಮತ್ತು ಅನುಕಂಪಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಸಚಿವರು, ಪ್ರಸ್ತುತ ಕೋವಿಡ್ ಸೇವೆಯಲ್ಲಿ ತೊಡಗಿರುವ ಆರೋಗ್ಯಯೋಧರು ಕಳೆದ 4 ತಿಂಗಳಿನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಖಾಸಗಿ ವಲಯಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇರುವ ಪರಿಣಿತರು ಕೆಲದಿನಗಳ ಮಟ್ಟಿಗೆ ಅವರ ಸ್ಥಾನ ತುಂಬಬೇಕಿದೆ ಎಂದರು.
ಆರೋಗ್ಯಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರದ ಚಿಂತನೆ
ಸರ್ಕಾರ, ನಾಗರಿಕರು ಮತ್ತು ಸಂಘಸಂಸ್ಥೆಗಳ ಸಹಭಾಗಿತ್ವದಿಂದ ಕೊರೋನ ಮಣಿಸಲು ಸಾಧ್ಯ ಎಂದು ಸಚಿವರು ಹೇಳಿದರು. ಇದಕ್ಕಾಗಿ ನಾಳೆಯೇ ಸರ್ಕಾರ ಆಪ್ ಬಿಡುಗಡೆ ಮಾಡಲಿದ್ದು ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಬಹುದು ಎಂದು ಹೇಳಿದರು. ಕೊರೋನ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡಬಾರದು. ಸರಿಯಾದ ಮಾಹಿತಿ ಪಡೆದುಕೊಂಡು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೂಲಕ ಕೊರೊನಾ ಮಣಿಸಬೇಕು ಎಂದು ಡಾ.ಸುಧಾಕರ್ ತಿಳಿಸಿದರು.
ಕೇಂದ್ರದ ಶ್ಲಾಘನೆ: ಕೇಂದ್ರ ಸರ್ಕಾರದ ಉನ್ನತಮಟ್ಟದ ನಿಯೋಗ ಇಂದು ರಾಜ್ಯದ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಪರಿಶೀಲಿಸಿದ್ದು ರಾಜ್ಯದ ಕ್ರಮಗಳನ್ನು ಶ್ಲಾಘಿಸಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು. ಕೇಂದ್ರದ ನಿಯೋಗದ ಶಿಫಾರಸ್ಸಿನಂತೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಟೆಸ್ಟ್ ನಡೆಸುವ ಅವಶ್ಯಕತೆ ಇದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲಿವೆ. ಜನರು ಆತಂಕಪಡದೆ ಮುನ್ನೆಚ್ಚರಿಕೆವಹಿಸಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚು ಆಂಟಿಜೆನ್ ಟೆಸ್ಟ್ ನಡೆಸಬೇಕು, ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಬೇಕು ಎಂಬುದು ಕೇಂದ್ರ ನಿಯೋಗದ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.