ಕೊರೊನಾ ಎರಡನೇ ಅಲೆಯಲ್ಲಿ ಸತ್ತವರೆಷ್ಟು? ಆತಂಕಕಾರಿ ಮಾಹಿತಿ ಹಂಚಿಕೊಂಡ ಡಿ.ಕೆ. ಶಿವಕುಮಾರ್!
ಬೆಂಗಳೂರು, ಜೂ. 24: ಕೊರೊನಾ ವೈರಸ್ ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಕೆಟ್ಟ ಪರಿಣಾಮವನ್ನುಂಟು ಮಾಡಿದೆ. ಅದನ್ನು ಬಹುತೇಕ ಎಲ್ಲರೂ ಅನುಭವಿಸಿಯೂ ಆಗಿದೆ. ಮೊದಲ ಅಲೆಯಲ್ಲಿ ಸರ್ಕಾರ ತೀವ್ರ ನಿಗಾ ಇಟ್ಟು ಕೆಲಸ ಮಾಡಿದ್ದರಿಂದ ಹೆಚ್ಚಿನ ಸಾವು ಸಂಭವಿಸಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಇಡೀ ದೇಶಾದ್ಯಂತ ಆಕ್ಸಿಜೆನ್ ಕೊರೆತೆಯಿಂದಲೇ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನಮ್ಮ ರಾಜ್ಯದಲ್ಲಿಯೂ ಮೊದಲ ಅಲೆಗಿಂತ ಎರಡನೇ ಅಲೆ ಸೃಷ್ಟಿಸಿದ್ದ ಭಯಾನಕತೆ ಕಡಿಮೆ ಏನಲ್ಲ.
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಂತೂ ಕೊರೊನಾದಿಂದ ಮೃತಪಟ್ಟವರ ಅಂತಿಮ ಸಂಸ್ಕಾರ ಮಾಡುವುದಕ್ಕೂ ದಿನಗಟ್ಟಲೇ ಕಾಯಬೇಕಾದ ದುಃಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಸೋಂಕಿನ ಭಯ, ಮತ್ತೊಂದೆಡೆ ಸಕಾಲಕ್ಕೆ ಸಿಗದ ಚಿಕಿತ್ಸೆ. ಈ ಎಲ್ಲ ಕಾರಣಗಳು ಸಾವಿನ ಸಂಖ್ಯೆ ಈ ಸಲ ಹೆಚ್ಚಾಗಲು ಕಾರಣವಾಗಿವೆ ಎಂಬುದು ತಜ್ಞರು ಅಭಿಪ್ರಾಯ.
ಕೊರೊನಾ ಸೋಂಕಿತರ ಕುರಿತು ರಾಜ್ಯ ಆರೋಗ್ಯ ಇಲಾಖೆ ಪ್ರತಿದಿನ ಮಾಹಿತಿಯನ್ನು ಕೊಡುತ್ತಿತ್ತು. ಆದರೆ ಸರ್ಕಾರ ಕೊಟ್ಟಿರುವ ಮಾಹಿತಿಗೂ ನಿಜವಾಗಿಯೂ ಸಂಭವಿಸಿರುವ ಸಾವುಗಳ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ ಎಂಬ ಆತಂಕಕಾರಿ ವಿಚಾರ ಇದೀಗ ಬಹಿರಂಗವಾಗಿದೆ. ಕೊರೊನಾದಿಂದ ಈ ವರೆಗೆ ಸಂಭವಿಸಿರುವ ಸಾವಿನ ಸಂಖ್ಯೆ 34,425 ಎಂದು ರಾಜ್ಯ ಸರ್ಕಾರ ಅಧಿಕೃತ ಅಂಕಿ ಅಂಶ ಹೇಳುತ್ತಿವೆ. ಆದರೆ ಕೊರೊನಾ ಎರಡನೇ ಅಲೆಯ ಬಳಿಕ, ರಾಜ್ಯದಲ್ಲಿ ಒಟ್ಟಾರೆ ಮೃತರ ಸಂಖ್ಯೆ 1.2 ಲಕ್ಷವನ್ನೂ ಮೀರಿರುವ ಆತಂಕಕಾರಿ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಹಿರಂಗಪಡಿಸಿದ್ದಾರೆ.
ಎರಡನೇ ಅಲೆಯಲ್ಲಿ ಮೃತರೆಷ್ಟು?
"ಆಕ್ಸಿಜನ್ ಕೊರತೆ, ಹಾಸಿಗೆ ಸಿಗದೆ, ಚಿಕಿತ್ಸೆ ಸಿಗದೇ ಸತ್ತವರ ಸಂಖ್ಯೆ ಸರ್ಕಾರ ಕೊಟ್ಟಿರುವ ಅಂಕಿ-ಅಂಶಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಡೆತ್ ಆಡಿಟ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಅವರು ಹೇಳಿಕೆ ಕೊಟ್ಟರೂ, ಆ ಸಂಬಂಧ ಆದೇಶ ಹೊರಡಿಸಲಿಲ್ಲ." ಎಂದು ಕೆಪಿಸಿಸಿ ಅಧ್ಯಕ್ಷ ಗಂಭೀರ ಮಾಹಿತಿ ಹಂಚಿಕೊಂಡಿದ್ದಾರೆ.
"ಕೋವಿಡ್ ನಿಂದ ಸತ್ತವರ ಸಂಖ್ಯೆ 30 ಸಾವಿರ ಎಂದು ಸರ್ಕಾರ ಹೇಳುತ್ತಿದೆ. ಆದರೆ ರಾಜ್ಯದಲ್ಲಿ 1.2 ಲಕ್ಷ ಮರಣ ಪ್ರಮಾಣ ಪತ್ರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರದಲ್ಲಿ ಸಾವಿನ ಕಾರಣ ಹೇಳುವುದಿಲ್ಲ. ಕೋವಿಡ್ ನಿಂದ ಸತ್ತರೆ ಬೇರೆ ಕಾರಣದ ಸಾವು ಎಂದು ಘೋಷಣೆ ಮಾಡಿರುವ ಉದಾಹರಣೆಗಳು ಇವೆ." ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್ ಅವರು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಿಖರ ಸಾವಿನ ಸಂಖ್ಯೆ ತಿಳಿಯಲು ಅಭಿಯಾನ
ಕೊರೊನಾ ವೈರಸ್ನಿಂದ ಆಗಿರುವ ಸಾವು-ನೋವು, ಉದ್ಯೋಗ, ಆರೋಗ್ಯ ಕಳೆದುಕೊಂಡವರು, ಆರ್ಥಿಕವಾಗಿ ಸಂಕಷ್ಟಕ್ಕೀಡಾದ ರೈತರು, ಕಾರ್ಮಿಕರು, ವರ್ತಕರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿ, ಅವರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ 30 ದಿನಗಳ ಅಭಿಯಾನ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸೋಂಕಿನಿಂದ ಮೃತಪಟ್ಟಿದ್ದಾರಾ? ಮೃತಪಟ್ಟಿದ್ದರೆ ಅವರ ಹೆಸರು ಹಾಗೂ ವಯಸ್ಸು ಏನು? ಮೃತಪಟ್ಟವರು ಮನೆಯಲ್ಲಿ ದುಡಿಯುವ ವ್ಯಕ್ತಿಯಾಗಿದ್ದರಾ? ಕುಟುಂಬದಲ್ಲಿ ಕೋವಿಡ್ ಹಾಗೂ ಲಾಕ್ಡೌನ್ ನಿಂದ ಯಾರಾದರೂ ಉದ್ಯೋಗ ಕಳೆದುಕೊಂಡಿದ್ದಾರಾ? ಉದ್ಯೋಗ ಕಳೆದುಕೊಂಡಿದ್ದರೆ ಅವರ ಹೆಸರು ಹಾಗೂ ವಯಸ್ಸು? ಆ ಕುಟುಂಬಕ್ಕೆ ಅಗತ್ಯವಾಗಿರುವ ನೆರವು ಏನು? ಎಂಬ ಮಾಹಿತಿ ಕಲೆಹಾಕಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಜುಲೈ 1 ರಿಂದ ಮಾಹಿತಿ ಸಂಗ್ರಹ
ಜುಲೈ 1 ರಿಂದ 30 ದಿನಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಾವು-ನೋವಿನ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಅದಕ್ಕಾಗಿ ಪ್ರತಿ ಬ್ಲಾಕ್ನಲ್ಲಿ 10 ಜನರ ತಂಡ ರಚಿಸಲಾಗುತ್ತಿದೆ. ಆ ತಂಡವು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅದನ್ನು ಕೆಪಿಸಿಸಿಗೆ ರವಾನಿಸಲಿದೆ. ಆ ಮಾಹಿತಿಯನ್ನು ಕೆಪಿಸಿಸಿ ಘಟಕವು ಎಐಸಿಸಿಗೆ ಕಳುಹಿಸಿ ಕೊಡಲಿದೆ.
"ಸರ್ಕಾರದ ಪರಿಹಾರ ಪಡೆಯಲು ನೋಂದಣಿ ಮಾಡಿಸಿಕೊಳ್ಳುವ ದಿನಾಂಕವನ್ನು ಸರ್ಕಾರ 30ನೇ ತಾರೀಖಿನವರೆಗೆ ವಿಸ್ತರಿಸಿದ್ದು, ಹೀಗಾಗಿ ನಮ್ಮ ಕಾರ್ಯಕರ್ತರು ಎಲ್ಲ ವರ್ಗದವರ ಮಾಹಿತಿ ಪಡೆದು, ಅವರು ಪರಿಹಾರ ಪಡೆಯಲು ನೋಂದಣಿ ಮಾಡಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ." ಅಂತಾ ಡಿಕೆಶಿ ಮನವಿ ಮಾಡಿದ್ದಾರೆ.
Recommended Video
ಸರ್ಕಾರ ಮುಚ್ಚಿಟ್ಟಿದೆಯಾ ಸಾವಿನ ಲೆಕ್ಕ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಂಚಿಕೊಂಡಿರುವ ಮಾಹಿತಿಯಿಂದ ರಾಜ್ಯದಲ್ಲಿ ಕೊರೊನಾದಿಂದ ಆಗಿರುವ ಸಾವಿನ ಸಂಖ್ಯೆ ಅತಿ ಹೆಚ್ಚಾಗಿದೆ ಎಂಬುದು ತಿಳಿದು ಬರುತ್ತಿದೆ. ಕಳೆದ ಮೂರು ತಿಂಗಳುಗಳಲ್ಲಿ 1.2 ಲಕ್ಷ ಮರಣ ನೋಂದಣಿ ಆಗಿರುವುದನ್ನು ಡಿಕೆಶಿ ಅವರು ಪ್ರಸ್ತಾಪಿಸಿದ್ದಾರೆ.
ಆದರೆ ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅಧಿಕೃತ ಮಾಹಿತಿಯನ್ನು ಕೊಟ್ಟ ಬಳಿಕ ಕೊರೊನಾ ವೈರಸ್ ಸಾವಿನ ಸಂಖ್ಯೆಯ ಕುರಿತು ಒಂದು ಹಂತದ ಅಧಿಕೃತ ಮಾಹಿತಿ ಲಭ್ಯವಾಗಲಿದೆ.