ರಾಜ್ಯದಲ್ಲಿ ಡ್ರಗ್ಸ್, ಗುಟ್ಕಾ ಹಾಗೂ ತಂಬಾಕು ನಿಷೇಧಕ್ಕೆ ಸುಗ್ರಿವಾಜ್ಞೆ!
ಬೆಂಗಳೂರು, ಅ. 08: ರಾಜ್ಯದಲ್ಲಿ ಡ್ರಗ್ಸ್ ಪ್ರಕರಣದ ತನಿಣೆ ತೀವ್ರಗೊಳ್ಳುತ್ತಿದ್ದಂತೆಯೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಡ್ರಗ್ಸ್ ಮಾರಾಟ ಹಾಗೂ ತಂಬಾಕು, ಗುಟ್ಕಾ ಮಾರಾಟ ಮತ್ತು ವಿತರಣೆ ನಿಯಂತ್ರಿಸಲು ಒಂದು ವಾರದಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ ಎಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಕ್ತರ್ ರಾಜ್ಯಪಾಲ ವಜುಭಾಯಿ ವಾಲಾರಿಗೆ ತಿಳಿಸಿದ್ದಾರೆ.
ಗುರುವಾರ ಇಬ್ಬರೂ ಅಧಿಕಾರಿಗಳು ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿ, ಜುಲೈ 31 ರಂದು ತಂಬಾಕು, ಗುಟ್ಕಾ ಹಾಗೂ ತಂಬಾಕು ಮಿಶ್ರಿತ ಉತ್ಪನ್ನಗಳ ಮಾರಾಟ ಹಾಗೂ ವಿತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ರಾಜ್ಯಪಾಲರು ನಡೆಸಿದ್ದ ಸಭೆಯ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಪ್ರಗತಿಯ ವರದಿ ಸಲ್ಲಿಸಿದ್ದಾರೆ.
Recommended Video
ಅಲ್ಲದೇ ಡ್ರಗ್ಸ್ ಮಾರಾಟ ಜಾಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿರುವುದು ಹಾಗೂ ಗಾಂಜಾ ವಶ ಪಡಿಸಿಕೊಂಡಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ತಂಬಾಕು ಹಾಗೂ ಗುಟ್ಕಾ ನಿಷೇಧಕ್ಕೆ ಮುಂದಾದಲ್ಲಿ ವಿರೋಧ ವ್ಯಕ್ತವಾಗುವಂತಹ ಸಾಧ್ಯತೆಯಿದೆ. ತಂಬಾಕು ಹಾಗೂ ಗುಟ್ಕಾವನ್ನು ಡ್ರಗ್ಸ್ ಜೊತೆಗೆ ಹೋಲಿಕೆ ಮಾಡುವುದಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ.