ಮೈಸೂರು ಮಾಜಿ ಡಿಸಿ ಸಿಂಧೂರಿಗೆ ಮತ್ತೆ ಎದುರಾಯ್ತು ಸಂಕಷ್ಟ
ಬೆಂಗಳೂರು, ಮೇ. 20: ಮೈಸೂರು ಜಿಲ್ಲಾಧಿಕಾರಿಯಾಗಿ ವಿವಾದಕ್ಕೆ ಗುರಿಯಾಗಿದ್ದ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ನಾಲ್ಕು ಆರೋಪ ಕೇಳಿ ಬಂದಿದ್ದವು. ನಾಲ್ಕು ಆರೋಪಗಳ ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ತನಿಖಾಧಿಕಾರಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ಅವರನ್ನು ನೇಮಿಸಿದ್ದು, 30 ದಿನದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
ಸಿಂಧೂರಿ ವಿರುದ್ಧದ ಆರೋಪಗಳು: ಮುಜರಾಯಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಭಾರೀ ವಿವಾದಗಳಿಗೆ ಗುರಿಯಾಗಿದ್ದರು. ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಹಣ ಕೊಟ್ಟು ಪರಿಸರ ಸ್ನೇಹಿ ಬ್ಯಾಗ್ ಖರೀದಿ ಮಾಡಿದ್ದಾರೆ ಎಂಬುದು ಅವರ ಮೇಲಿರುವ ಮೊದಲ ಆರೋಪ. ಅದೇ ರೀತಿ ಜಿಲ್ಲಾಧಿಕಾರಿಗಳ ನಿವಾಸದಲ್ಲಿ 50 ಲಕ್ಷ ರೂ. ವೆಚ್ಚ ಮಾಡಿ ಅನಧಿಕೃತ ಈಜುಕೊಳ ಮತ್ತು ಜಿಮ್ ನಿರ್ಮಿಸಿದ್ದಾರೆ ಎಂಬುದು ಎರಡನೇ ಆರೋಪ. ಇನ್ನು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಸಂಖ್ಯೆ ಮುಚ್ಚಿಟ್ಟಿದ್ದು, ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವುಗಳಿಗೆ ಸಿಂಧೂರಿ ನಿರ್ಧಾರ ಕಾರಣ ಎಂಬುದು ಅವರ ಮೇಲಿರುವ ಇನ್ನೊಂದು ಆರೋಪ.
ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮುನ್ನ ಅವರ ಮೇಲೆ ಕೇಳಿ ಬಂದಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಿತ್ತು. ಆದರೆ, ಎಲ್ಲಾ ಮುಗಿದು ಒಂದೂವರೆ ವರ್ಷದ ಬಳಿಕ ತನಿಖೆಗೆ ಆದೇಶಿಸಿರುವುದು , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಕೀಯ ಒತ್ತಡಗಳಿಗೆ ಒಳಗಾಗಿ ಆದೇಶ ಮಾಡಿದರೇ ಎಂಬ ಅನುಮಾನ ಮೂಡಿಸಿದೆ.
ಸಾ.ರಾ ಮಹೇಶ್ ನಿರಂತರ ಅರೋಪ: ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹಲವು ಬಾರಿ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದರು. ಮೈಸೂರು ಮಹಾನಗರ ಪಾಲಿಕೆ ಮಾಜಿ ಡೆಪ್ಯುಟಿ ಮೇಯರ್ ಶೈಲೇಂದ್ರ ಭೀಮರಾವ್ ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದರು. ರೋಹಿಣಿ ಸಿಂಧೂರಿ ಮತ್ತು ಮತ್ತೊಬ್ಬ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ನಡುವೆ ವಾಗ್ವಾದ ನಡದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿತ್ತು.
ಬಟ್ಟೆ ಬ್ಯಾಗ್ ಖರೀದಿ ವಿವರ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಶಾಸಕ ಸಾ. ರಾ. ಮಹೇಶ್ ದೂರು ನೀಡಿದ್ದರು. ಈ ಕುರಿತು ಸರ್ಕಾರ ತನಿಖೆಗೆ ಆದೇಶಿಸಿತ್ತು. ನಗರಸಭೆ, ಪುರ ಸಭೆ, ಮಹಾನಗರ ಪಾಲಿಕೆ ಅನುಮತಿ ಇಲ್ಲದೇ ದುಬಾರಿ ಬೆಲೆ ಬ್ಯಾಗ್ ಗಳನ್ನು ಖರೀದಿಸಲಾಗಿದೆ. ಮಾರುಕಟ್ಟೆಯಲ್ಲಿ ಕೇವಲ 10 ರಿಂದ 13 ರೂ.ಗೆ ಸಿಗುವ ಬ್ಯಾಗ್ಗಳನ್ನು ಜಿಲ್ಲಾಧಿಕಾರಿಗಳೂ 52 ರೂ. ನೀಡಿ ಖರೀದಿಸಿದ್ದರು. ಈ ಮೂಲಕ ಸಾರ್ವಜನಿಕ ಹಣ ವ್ಯಯ ಮಾಡಿದ್ದಾರೆ ಎಂದು ಮಹೇಶ್ ಆರೋಪಿಸಿದ್ದರು. 14 ಲಕ್ಷ ಬಟ್ಟೆ ಬ್ಯಾಗ್ ಗಳನ್ನು 14 ಕೋಟಿ ರೂ.ಗೆ ಟೆಂಡರ್ ಮೂಲಕ ಖಾಸಗಿ ವ್ಯಕ್ತಿಗಳಿಂದ ಖರೀದಿಸಿ ಅಕ್ರಮ ಎಸಗಿದ್ದಾರೆ. ಇದರಲ್ಲಿ ಆರು ಕೋಟಿ ರೂ. ಅಕ್ರಮ ನಡೆದಿದೆ ಎಂದು ಸಾ.ರಾ. ಮಹೇಶ್ ಸುದ್ದಿಗೋಷ್ಠಿಯಲ್ಲಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದರು.
Recommended Video