ನೆರೆ ಪರಿಹಾರ: ಕೇಂದ್ರ ಮಾರ್ಗಸೂಚಿಗಿಂತ ರಾಜ್ಯದಲ್ಲಿ ಪರಿಹಾರ ಮೊತ್ತ ಹೆಚ್ಚಳ
ಬೆಂಗಳೂರು, ಜುಲೈ 13: ಮಳೆಗಾಲದಲ್ಲಿ ಸದಾ ಒಂದಿಲ್ಲೊಂದು ಕಡೆಗಳಲ್ಲಿ ನೆರೆಯ ಹಾವಳಿ ಹೆಚ್ಚಾಗುತ್ತದೆ. ಕರ್ನಾಟಕದ ಹಲವು ಕಡೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ವಿಪರೀತ ಹಾನಿ ಸಂಭವಿಸಿವೆ. ಮನೆಗಳು ಮುಳುಗಿವೆ. ಗುಡ್ಡ ಕುಸಿದಿದೆ. ಮನೆಯಲ್ಲಿ ಮಲಗಿದ್ದವರು ಮಳೆಯಿಂದಾಗಿ ಚಿರ ನಿದ್ರೆಗೆ ಜಾರುವಂತೆ ಆಗಿದೆ. ಸರ್ಕಾರ ಏನೇ ಮಾಡಿದರು ನೆರೆಯ ಹಾವಳಿಯನ್ನು ನಿಯಂತ್ರಿಸೋಕೆ ಸಾಧ್ಯವಾಗುವುದಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜೂಲೈ 12ರಂದು ಕೊಡಗು, ಮಡಿಕೇರಿಗಳಲ್ಲಿ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ ಮಳೆಯ ಸಂಕಷ್ಟಕ್ಕೆ ಸಿಲುಕಿದವರನ್ನು ಮನೆಯನ್ನು ಕಳೆದುಕೊಂಡವರನ್ನು ಮತ್ತು ಗಂಜಿ ಕೇಂದ್ರದಲ್ಲಿ ಆಶ್ರಯವನ್ನು ಪಡೆದವರನ್ನು ಮಾತನಾಡಿಸುವ ಕೆಲಸವನ್ನು ಮಾಡಿದ್ದರು.
ಮನೆಯನ್ನು ಕಳೆದುಕೊಂಡಿರುವವರಿಗೆ ಪರಿಹಾರದ ಚೆಕ್ ಸಹ ವಿತರಣೆಯನ್ನು ಮಾಡಿದ್ದರು. ಸರ್ವೆ ಸಾಮಾನ್ಯವಾಗಿ ನೆರೆಹಾವಳಿ, ಪ್ರವಾಹ, ಮಳೆಯಿಂದ ಹಾನಿಗೊಳಗಾದವರಿಗೆ ಕೇಂದ್ರ ಸರ್ಕಾರ ನಿಗದಿತ ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನವನ್ನು ನೀಡಿರುತ್ತದೆ. ಕೇಂದ್ರದ ನಿರ್ದೇಶನದ ಅನುಸಾರವಾಗಿಯೇ ರಾಜ್ಯ ಸರ್ಕಾರಗಳು ಪರಿಹಾರವನ್ನು ನೀಡುವ ಕೆಲಸವನ್ನು ಮಾಡುತ್ತದೆ.
ಕೇಂದ್ರದ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರ
ರಾಜ್ಯದಲ್ಲಿ ನೆರೆಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯು ಕೇಂದ್ರದ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರವನ್ನು ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ನೆರೆ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರ ಸಿಗುವಂತೆ ಆಗಲಿದೆ.
ರಾಜ್ಯದ ಪರಿಷ್ಕೃತ ದರವೆಷ್ಟು?
ಮಾನವ ಜೀವ ಹಾನಿಗೆ ಕೇಂದ್ರ ಸರ್ಕಾರ 4 ಲಕ್ಷ ನಿಗದಿ ಮಾಡಿದೆ. ರಾಜ್ಯ ಸರ್ಕಾರ 5 ಲಕ್ಷ ಹಣವನ್ನು ಪರಿಷ್ಕರಣೆ ಮಾಡಿದೆ. ಪ್ರವಾಹ ನೀರು ನುಗ್ಗಿರುವ ಮನೆಗಳು ಗೃಹೋಪಯೋಗಿ ವಸ್ತುಗಳು, ಬಟ್ಟೆಬರೆ ಹಾನಿ ಕೇಂದ್ರ ಸರ್ಕಾರ 3800 ನಿಗದಿ ಮಾಡಿದೆ. ರಾಜ್ಯ ಸರ್ಕಾರ 10000 ಪರಿಷ್ಕರಣೆಯನ್ನು ಮಾಡಿದೆ. ಶೇ 75ಕ್ಕಿಂತ ಹೆಚ್ಚಿನ ಸಂಪೂರ್ಣ ಮನೆಹಾನಿ ಸಂಭವಿಸಿದ್ದರೇ ಕೇಂದ್ರ ಸರ್ಕಾರ 95,100 ನಿಗದಿ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರ 5 ಲಕ್ಷ ನಿಗದಿಯನ್ನು ಮಾಡಿದೆ. ಶೇ 25 ರಿಂದ 75 ರಷ್ಟು ಮನೆಯ ಹಾನಿ ಸಂಭವಿಸಿದ್ದರೇ (ಮನೆಯನ್ನು ಕೆಡವಿ ನಿರ್ಮಿಸುವುದು) ಇದಕ್ಕೆ ಕೇಂದ್ರ 95,100 ನಿಗದಿಯನ್ನು ಮಾಡಿದೆ. ರಾಜ್ಯ ಸರ್ಕಾರ 500000 ನಿಗದಿಯನ್ನು ಮಾಡಿದೆ. ಶೇ 25 ರಿಂದ 75ರಷ್ಟು ಮನೆಹಾನಿಯಾಗಿ ದುರಸ್ಥಿಯನ್ನು ಮಾಡುವುದಾಗಿದ್ದರೇ ಆ ಮನೆಗಳಿಗೆ ಕೇಂದ್ರ ಸರ್ಕಾರ 95,100 ನಿಗದಿಯನ್ನು ಮಾಡಿದೆ. ರಾಜ್ಯ ಸರ್ಕಾರ 300000 ನಿಗದಿಯನ್ನು ಮಾಡಿದೆ. ಶೇ 15 ರಿಂದ 25ರಷ್ಟು ಭಾಗಶಃ ಹಾನಿಯುಂಟಾಗಿದ್ದರೇ ಆ ಮನೆಗಳಿಗೆ ಕೇಂದ್ರ ಸರ್ಕಾರ 5200 ರೂಪಾಯಿ ನಿಗದಿಯನ್ನು ಮಾಡಿದ್ದರೆ, ರಾಜ್ಯ ಸರ್ಕಾರ ಪರಿಷ್ಕರಿಸಿ 50,000 ನಿಗದಿಯನ್ನು ಮಾಡಿದೆ.
ಪರಿಷ್ಕೃತ ದರದ ಪಟ್ಟಿ ಸಹ ಬಿಡುಗಡೆ
ಪರಿಷ್ಕೃತ ದರ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿರವರು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ನೆರೆಯ ಸಂತ್ರಸ್ತರಿಗೆ ನಿಗದಿ ಮಾಡಿರುವ ದರವೆಷ್ಟು ಮತ್ತು ರಾಜ್ಯ ಸರ್ಕಾರ ಪರಿಷ್ಕರಿಸಿರುವ ದರ ಎಷ್ಟು ಎಂಬುದರ ಕುರಿತಾಗಿ ಮಾಹಿತಿಯನ್ನು ಟ್ವೀಟ್ ನಲ್ಲಿ ಬೊಮ್ಮಾಯಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ಜನರಿಗೆ ತುಸು ನೆಮ್ಮದಿ
ನೆರೆಯಲ್ಲಿ ಸಂಪೂರ್ಣವಾಗಿ ತಮ್ಮ ನೆಲೆಯನ್ನು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಆಸರೆಯಾಗಿ ನಿಲ್ಲುತ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕಿಂದ ಹೆಚ್ಚಿನ ದರವನ್ನು ನಿಗದಿ ಮಾಡುವ ಮೂಲಕ ರಾಜ್ಯದ ಜನ ಜೊತೆ ನಾವಿದ್ದೇವೆ ಎಂದು ಸಾರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ನಿಗದಿ ಮಾಡಿರುವ ಪರಿಹಾರ ಮೊತ್ತ ಮತ್ತಷ್ಟು ಹೆಚ್ಚಾಗಬೇಕು ಎಂಬುದು ರಾಜ್ಯದ ಜನತೆಯ ಬೇಡಿಕೆಯಾಗಿದೆ.