ವಿಭಜನೆ-ರಚನೆ ಬಳಿಕ ಹೇಗಿರಲಿವೆ ಬಳ್ಳಾರಿ-ವಿಜಯನಗರ ಜಿಲ್ಲೆಗಳು?
ಬೆಂಗಳೂರು, ಫೆಬ್ರವರಿ 8: ಈ ಹಿಂದಿನ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯ ರಚನೆಯನ್ನು ಘೋಷಿಸಿದ ಬಳಿಕ ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸುವ ಮೂಲಕ ವಿಜಯನಗರ ಜಿಲ್ಲೆಯ ಗಡಿಗಳನ್ನು ಗುರುತಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ವಿಜಯನಗರ ಜಿಲ್ಲೆಯ ರಚನೆಯನ್ನು ಅಧಿಕೃತಗೊಳಿಸಲಾಗಿದೆ.
ವಿಜಯನಗರ ಜಿಲ್ಲೆ ರಚನೆ; ಪರ, ವಿರೋಧ ಆಕ್ಷೇಪಣೆಗಳು ಎಷ್ಟು?
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸರ್ಕಾರ ಕಳೆದ ವರ್ಷ ಒಪ್ಪಿಗೆ ನೀಡಿತ್ತು. ಈ ಸಂಬಂಧ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಜನರಿಂದ ದೊರೆತ ಪ್ರತಿಕ್ರಿಯೆಗಳನ್ನು ಆಧರಿಸಿ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ಅಧಿನಿಯಮ ಸಂಖ್ಯೆ 12ರ ಅಡಿ ಅಧಿಕಾರ ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ವಿಜಯನಗರ ಜಿಲ್ಲೆ ಎಂಬ ನೂತನ ಜಿಲ್ಲೆ ರಚಿಸಲಾಗುತ್ತದೆ ಎಂದು ರಾಜ್ಯ ಸರ್ಕಾರವು ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ವಿಜಯನಗರ ಜಿಲ್ಲೆ ಅಂತಿಮ ಅಧಿಸೂಚನೆಗೆ ಸರ್ಕಾರಕ್ಕೆ ಒತ್ತಾಯ
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿದ್ದವು. ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಿರಗುಪ್ಪ, ಹೂವಿನ ಹಡಗಲಿ, ಹೊಸಪೇಟೆ, ಸಂಡೂರು ತಾಲ್ಲೂಕುಗಳಲ್ಲಿ ಹೆಚ್ಚಿನ ತಾಲ್ಲೂಕುಗಳು ನೂತನ ವಿಜಯನಗರದ ಪಾಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಆರು ತಾಲ್ಲೂಕುಗಳು ಇರಲಿದ್ದರೆ, ಬಳ್ಳಾರಿ ಒಟ್ಟು ಐದು ತಾಲ್ಲೂಕುಗಳನ್ನು ಹೊಂದಲಿದೆ. ಮುಂದೆ ಓದಿ.
ತಾಲ್ಲೂಕುಗಳು ಯಾವುವು?
ಸರ್ಕಾರದ ಹೊಸ ಅಧಿಸೂಚನೆಯಂತೆ ಬಳ್ಳಾರಿ ಜಿಲ್ಲೆಯಲ್ಲಿದ್ದ ತಾಲ್ಲೂಕುಗಳಾದ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ ಮತ್ತು ಹರಪನಹಳ್ಳಿಗಳು ಹೊಸ ಜಿಲ್ಲೆಯಾದ ವಿಜಯನಗರಕ್ಕೆ ಸೇರ್ಪಡೆಯಾಗಲಿವೆ. ಹಾಗೆಯೇ ಹೊಸಪೇಟೆ ತಾಲ್ಲೂಕು ವಿಜಯನಗರ ನೂತನ ಜಿಲ್ಲೆಯ ಕೇಂದ್ರ ಸ್ಥಾನವಾಗಿರಲಿದೆ. ಕೊಟ್ಟೂರು ಹೊಸ ತಾಲ್ಲೂಕಾಗಿ ಸೇರ್ಪಡೆಯಾಗಿದೆ.
ವಿಜಯನಗರ ಜಿಲ್ಲೆ ಗಡಿ
ವಿಜಯನಗರ ಜಿಲ್ಲೆಯ ಗಡಿ ಭಾಗಗಳನ್ನು ಗುರುತಿಸಲಾಗಿದ್ದು, ಪೂರ್ವ ಭಾಗದಲ್ಲಿ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳು ಇರಲಿವೆ. ಪಶ್ಚಿಮದಲ್ಲಿ ಗದಗ ಹಾಗೂ ಹಾವೇರಿ ಜಿಲ್ಲೆಗಳು ನೆರೆಯಲ್ಲಿರಲಿವೆ. ಉತ್ತರ ದಿಕ್ಕಿನಲ್ಲಿ ಕೊಪ್ಪಳ ಜಿಲ್ಲೆ ಹಾಗೂ ದಕ್ಷಿಣ ದಿಕ್ಕಿನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳು ಇರಲಿವೆ.
ಬಳ್ಳಾರಿ ಜಿಲ್ಲೆಯ ತಾಲ್ಲೂಕುಗಳು
ಹಾಗೆಯೇ ನೂತನ ಜಿಲ್ಲೆಯ ರಚನೆಯಿಂದ ಹಾಗೂ ವಿಭಜನೆಯಿಂದ ವಿಶಾಲ ಬಳ್ಳಾರಿ ಜಿಲ್ಲೆ ಅನೇಕ ಭಾಗಗಳನ್ನು ವಿಜಯನಗರಕ್ಕೆ ಬಿಟ್ಟುಕೊಡಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಸಿರಗುಪ್ಪ, ಕಂಪ್ಲಿ, ಸಂಡೂರು ತಾಲ್ಲೂಕುಗಳು ಇರಲಿದ್ದು, ಇದಕ್ಕೆ ಕುರಗೋಡು ಸೇರ್ಪಡೆಯಾಗಿದೆ. ಬಳ್ಳಾರಿ ಕೇಂದ್ರ ಕಾರ್ಯಸ್ಥಾನವಾಗಿರಲಿದೆ.
ಬಳ್ಳಾರಿ ಜಿಲ್ಲೆಯ ಸರಹದ್ದು
ನೂತನ ಜಿಲ್ಲೆ ರಚನೆಯಾದ ಬಳಿಕ ಬಳ್ಳಾರಿ ಜಿಲ್ಲೆಯ ಸರಹದ್ದುಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಪೂರ್ವದಲ್ಲಿ ಆಂಧ್ರಪ್ರದೇಶ ರಾಜ್ಯ, ಪಶ್ಚಿಮದಲ್ಲಿ ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆ, ಉತ್ತರದಲ್ಲಿ ರಾಯಚೂರು ಮತ್ತು ದಕ್ಷಿಣದಲ್ಲಿ ಆಂಧ್ರಪ್ರದೇಶ ರಾಜ್ಯ ಬಳ್ಳಾರಿಯ ನೆರೆಹೊರೆಯ ಭಾಗಗಳಾಗಿವೆ.