ನೆರೆ ರಾಜ್ಯಗಳಲ್ಲಿ ಕೋವಿಡ್ ಅಲೆ: ರಾಜ್ಯದಲ್ಲಿ ಸಮಾರಂಭಗಳ ಮೇಲೆ ನಿರ್ಬಂಧ ಸಾಧ್ಯತೆ!
ಬೆಂಗಳೂರು, ಫೆಬ್ರವರಿ 20: ನೆರೆ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದುವೆ ಮತ್ತು ಸಮಾರಂಭಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೊರೋನಾ ಸಂಪೂರ್ಣ ಹತೋಟಿಗೆ ಬರುತ್ತಿತ್ತು. ಆದರೆ ನೆರೆ ಕೇರಳಾ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲು ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.
ಮತ್ತೆ ಕೊರೊನಾ ಹೆಚ್ಚಳ; ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ
ನೆರೆ ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದೆ. ಕೇರಳಾ ಮತ್ತು ಮಹಾರಾಷ್ಟ್ರದಿಂದ ಬರುವವರಲ್ಲಿಕೊರೋನಾ ಹೆಚ್ಚಳವಾಗುತ್ತಿದೆ. ಹೊರ ರಾಜ್ಯದಿಂದ ಬರವವರಿಂದ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಜನರು ಗುಂಪು ಸೇರುವುದನ್ನುತಪ್ಪಿಸಬೇಕು. ಇಲ್ಲದಿದ್ದರೆ ನೆರೆ ರಾಜ್ಯಗಳಂತೆ ರಾಜ್ಯದಲ್ಲಿಯೂ ಕರೋನಾ ಆಂತಕ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಸಾರ್ವಜನಿಕರ ಸಭೆ, ಸಮಾರಂಭ ಕಾರ್ಯಕ್ರಮಗಳಿಗೆ ಕೆಲವು ಕಟ್ಟು ನಿಟ್ಟಿನ ನಿರ್ಬಂಧಗಳನ್ನು ವಿಧಿಸಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಕೆಲವು ಟಫ್ ರೂಲ್ಸ್ ಗಳನ್ನು ಆರೋಗ್ಯ ಇಲಾಖೆ ಜಾರಿಗೆ ತರಲು ಮುಂದಾಗಿದೆ. ಅದರಂತೆ ಸಾರ್ವಜನಿಕ ಸಮಾರಂಭ, ಮದುವೆ, ಜಾತ್ರೆ, ಹಬ್ಬದ ಕಾರ್ಯಕ್ರಮಗಳಲ್ಲಿ ಐವತ್ತಕ್ಕಿಂತಲೂ ಹೆಚ್ಚು ಜನ ಒಂದಡೆ ಸೇರದಂತೆ ನಿರ್ಬಂಧ ವಿಧಿಸುವುದು, ಸಾಧ್ಯವಾದಷ್ಟು ಮಟ್ಟಿಗೆ ಸಾರ್ವಜನಿಕ ಸಮಾರಂಭ ನಿಷೇಧ ಮಾಡುವ ಬಗ್ಗೆ ಕೋವಿಡ್ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.
Recommended Video
ತಾಂತ್ರಿಕ ಸಲಹಾ ಸಮಿತಿ ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆ ಆರೋಗ್ಯ ಸಚಿವರು ಕೂಡ ಜನರಿಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ. ಲಾಕ್ ಡೌನ್ , ನೈಟ್ ಕರ್ಫೂ ಮರು ಜಾರಿಗೊಳಿಸುವ ಆಲೋಚನೆ ಸರ್ಕಾರದ ಬಳಿ ಇಲ್ಲ. ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸು ನೀಡಿದ ಬೆನ್ನಲ್ಲೇ ಸುದ್ದಿಗೊಷ್ಠಿಯಲ್ಲಿ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ಇದನ್ನು ಮತ್ತಷ್ಟು ಪುಷ್ಟಿ ನೀಡಿದೆ. ನೆರೆ ರಾಜ್ಯ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ವ್ಯಕ್ತಿಗಳ ಜತೆ ಸಂಪರ್ಕ ಕ್ಕೆ ಸಿಗದಂತೆ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.